ADVERTISEMENT

ಚಿಕ್ಕಮಗಳೂರು: ಶೋಲಾ ಕಾಡಿಗೆ ಕಾಳ್ಗಿಚ್ಚಿನ ಭಯ

ಹುಲ್ಲುಗಾವಲಿಗೆ ಪದೇ ಪದೇ ಕಿಡಿಗೇಡಿಗಳಿಂದ ಬೆಂಕಿ: ತಡೆಗಟ್ಟಲು ಅರಣ್ಯ ಇಲಾಖೆ ಸಾಹಸ

ವಿಜಯಕುಮಾರ್ ಎಸ್.ಕೆ.
Published 24 ಫೆಬ್ರುವರಿ 2025, 8:10 IST
Last Updated 24 ಫೆಬ್ರುವರಿ 2025, 8:10 IST
ಮುಳ್ಳಯ್ಯಗಿರಿಯಲ್ಲಿ ಹೊತ್ತಿ ಉರಿದ ಬೆಂಕಿಗೆ ಹುಲ್ಲುಗಾವಲು ಭಸ್ಮವಾಗಿರುವುದು
ಮುಳ್ಳಯ್ಯಗಿರಿಯಲ್ಲಿ ಹೊತ್ತಿ ಉರಿದ ಬೆಂಕಿಗೆ ಹುಲ್ಲುಗಾವಲು ಭಸ್ಮವಾಗಿರುವುದು   

ಚಿಕ್ಕಮಗಳೂರು: ಮಳೆಗಾಲದಲ್ಲಿ ಹಸಿರಿನಿಂದ ಕಂಗೊಳಿಸುವ ಕಾಫಿನಾಡಿನ ಅರಣ್ಯ ಸಂಪತ್ತು ಚಳಿಗಾಲ ಮತ್ತು ಬೇಸಿಗೆಯಲ್ಲಿ ಕಾಳ್ಗಿಚ್ಚಿನ ಭಯದಲ್ಲಿ ಸಿಲುಕುತ್ತಿದೆ. ಕಾಳ್ಗಿಚ್ಚು ತಡೆಗೆ ಅರಣ್ಯ ಇಲಾಖೆ ಪ್ರಯತ್ನ ಒಂದೆಡೆಯಾದರೆ, ಕಿಡಿಗೇಡಿಗಳು ಹಚ್ಚುವ ಕಿಡಿಗೆ ಶೋಲಾಕಾಡು ಮತ್ತು ವನ್ಯಜೀವಿಗಳು ಆತಂಕ ಎದುರಿಸುವಂತಾಗಿದೆ.

ಕಾಡಿನ ನೆಲದಲ್ಲಿ ಸಂಗ್ರಹವಾಗುವ ಎಲೆ, ಕಡ್ಡಿ-ಕೊಂಬೆ, ಉರುಳಿಬಿದ್ದ ಮರಗಳು, ಒಣಗಿದ ಹುಲ್ಲು, ಪೊದೆಗಳು ಕೊಳೆತು ಮಣ್ಣು ಸೇರಬೇಕು. ಈ ಕ್ರಿಯೆಗೆ ವರ್ಷಗಟ್ಟಲೇ ಸಮಯ ಬೇಕಾಗುತ್ತದೆ. ಈ ಎಲ್ಲಾ ಅರಣ್ಯ ತ್ಯಾಜ್ಯವು ಕೊಳೆತು, ಮಣ್ಣಿಗೆ ಮತ್ತೆ ಪೋಷಕಾಂಶಗಳು ಸೇರುವುದು ಕಾಡಿಗೆ ಅತ್ಯಗತ್ಯ.

ಜಿಲ್ಲೆಯಲ್ಲಿ ಶೋಲಾ ಕಾಡು ಮತ್ತು ಹುಲ್ಲುಗಾವಲನ್ನು ಒಳಗೊಂಡಿರುವ ಅರಣ್ಯ ಹೆಚ್ಚಾಗಿದ್ದು, ಹುಲ್ಲುಗಾವಲಿನಲ್ಲಿ ಹೆಚ್ಚಿನದಾಗಿ ಬೆಂಕಿ ಕಾಣಿಸಿಕೊಳ್ಳುತ್ತಿದೆ. ಈ ವರ್ಷ ಚಳಿಗಾಲ ಆರಂಭದಲ್ಲೇ ಚಾರ್ಮಾಡಿ ಘಾಟಿಯ ಬಿದಿರತಳ ಸುತ್ತಮುತ್ತ ಎರಡು ಬಾರಿ ಕಾಳ್ಗಿಚ್ಚು ಕಾಣಿಸಿಕೊಂಡಿತು. ಫೆಬ್ರುವರಿಯಲ್ಲಿ ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ ಭಾಗದಲ್ಲಿ ಬೆಂಕಿ ಕಾಣಿಸಿಕೊಂಡು ಹುಲ್ಲುಗಾವಲು ಭಸ್ಮವಾಯಿತು. 

ADVERTISEMENT

ಗುಡ್ಡಗಾಡು ಪ್ರದೇಶದಲ್ಲಿ ಕಾಳ್ಗಿಚ್ಚು ಕಾಣಿಸಿಕೊಳ್ಳುವುದರಿಂದ ಬೆಂಕಿ ನಂದಿಸುವುದು ಅರಣ್ಯ ಇಲಾಖೆಗೆ ಸಾಹಸದ ಕೆಲಸವಾಗಿದೆ. ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಬಂದರೂ ವಾಹನಗಳನ್ನು ರಸ್ತೆ ಬದಿಯಲ್ಲೆ ನಿಲ್ಲಿಸಬೇಕಿದೆ. ಇದರಿಂದ ಗಿರಿ ಪ್ರದೇಶದ ಬೆಂಕಿ ನಂದಿಸುವುದು ಕಷ್ಟ. ರಸ್ತೆ ಬದಿಯಲ್ಲಿನ ಬೆಂಕಿ ನಂದಿಸಲು ಅಗ್ನಿಶಾಮಕ ಸಿಬ್ಬಂದಿ ನೆರವಾಗುತ್ತಾರೆ.

ಉಳಿದಂತೆ ಕಡಿದಾದ ಪ್ರದೇಶದಲ್ಲಿ ಅರಣ್ಯ ಸಿಬ್ಬಂದಿಯೇ ಕಾರ್ಯನಿರ್ವಹಿಸಬೇಕು. ಸೊಪ್ಪು, ಫೈರ್ ಕಟರ್‌, ಬೀಟರ್ಸ್‌, ಬ್ಲೋಯರ್ಸ್ ಬಳಸಿ ಬೆಂಕಿ ನಂದಿಸಲು ಪ್ರಯತ್ನಿಸುತ್ತಿದ್ದಾರೆ. ಒಣಗಿರುವ ಹುಲ್ಲುಗಾವಲಿನಲ್ಲಿ ಜೋರಾಗಿ ಹೊತ್ತಿಕೊಳ್ಳುವ ಬೆಂಕಿ ನಂದಿಸುವುದು ಕಷ್ಟದ ಕೆಲಸ.

ಬೇಸಿಗೆಗೂ ಮುನ್ನ ಅಗ್ನಿ ಗೆರೆ ನಿರ್ಮಿಸುವ ಕೆಲಸವನ್ನು ಅರಣ್ಯ ಇಲಾಖೆ ಮಾಡುತ್ತಿದೆ. ಬೆಂಕಿಯ ಮೂಲಕವೇ ಹುಲ್ಲುಗಾವಲು ಸುಟ್ಟು ಗೆರೆಗಳನ್ನು ನಿರ್ಮಿಸಿದರೆ ಕಾಳ್ಗಿಚ್ಚು ಹರಡುವುದನ್ನು ತಡೆಯಲು ಸಾಧ್ಯ. ಈ ಕೆಲಸವನ್ನು ಕೆಲವೆಡೆ ಅರಣ್ಯ ಇಲಾಖೆ ಮಾಡಿದೆ, ಕಡಿದಾದ ಗುಡ್ಡಗಾಡು ಪ್ರದೇಶದಲ್ಲಿ ಆಗಿಲ್ಲ. 

ಮುಳ್ಳಯ್ಯನಗಿರಿ ಭಾಗ ಕಂದಾಯ ಇಲಾಖೆ ವ್ಯಾಪ್ತಿಯಲ್ಲಿದ್ದು, ಅರಣ್ಯ ಇಲಾಖೆ ವ್ಯಾಪ್ತಿಗೆ ಇನ್ನೂ ಸೇರ್ಪಡೆಯಾಗಿಲ್ಲ. ಆದ್ದರಿಂದ ಬೆಂಕಿ ಗೆರೆ ನಿರ್ಮಾಣ ಆಗಿಲ್ಲ. ಮುಳ್ಳಯ್ಯನಗಿರಿಯಲ್ಲೂ ಶೋಲಾ ಕಾಡುಗಳನ್ನು ರಕ್ಷಿಸಲು ಕೆಲವೆಡೆ ಬೆಂಕಿ ಗೆರೆ ನಿರ್ಮಿಸಲಾಗಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಹೇಳುತ್ತಾರೆ.

ಮುಳ್ಳಯ್ಯನಗಿರಿ ಭಾಗವನ್ನು ಮೀಸಲು ಅರಣ್ಯವಾಗಿ ಘೋಷಿಸಬೇಕು ಎಂಬ ವಿಷಯ ಇನ್ನೂ ಪ್ರಸ್ತಾವನೆ ಹಂತದಲ್ಲೇ ಇದೆ. ಘೋಷಣೆಯಾಗುವ ತನಕ ನಿರ್ವಹಣೆ ಜವಾಬ್ದಾರಿಯನ್ನು ಅರಣ್ಯ ಇಲಾಖೆಗೆ ವಹಿಸಬೇಕು ಎಂದು ಪರಿಸರ ಪ್ರೇಮಿಗಳು ಅಭಿಪ್ರಾಯಪಡುತ್ತಾರೆ.

ಶೋಲಾ ಕಾಡಿಗೆ ಬೆಂಕಿ ಹರಡುವುದನ್ನು ತಡೆಯಲು ಹುಲ್ಲುಗಾವಲು ಸುಟ್ಟು ಬೆಂಕಿ ಗೆರೆಗಳನ್ನು ಅರಣ್ಯ ಇಲಾಖೆ ನಿರ್ಮಿಸಿರುವುದು
ಕಿಡಿಗೇಡಿತನ ತಪ್ಪು ತಿಳುವಳಿಕೆ ಕಾರಣ
ಕಾಳ್ಗಿಚ್ಚು ಬಹುತೇಕ ಕಿಡಿಗೇಡಿಗಳ ಕೃತ್ಯದಿಂದಲೇ ಸಂಭವಿಸುತ್ತಿದೆ. ಅದಕ್ಕೆ ತಪ್ಪು ತಿಳುವಳಿಕೆಗಳೇ ಹೆಚ್ಚಿನದಾಗಿ ಕಾರಣ ಎನ್ನುತ್ತಾರೆ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ವನ್ಯಜೀವಿ ಪ್ರಿಯರು. ಬೆಂಕಿ ಹಾಕಿದರೆ ಹೊಸದಾಗಿ ಹುಲ್ಲುಗಾವಲು ಚೆನ್ನಾಗಿ ಚಿಗರಲಿದೆ ಎಂಬ ತಪ್ಪು ಅಭಿಪ್ರಾಯ ಇದೆ. ಬೆಂಕಿ ಹಾಕಿದರೆ ನಮಗೆ ಒಳ್ಳೆಯದಾಗಲಿದೆ ಎಂಬ ತಪ್ಪು ಗ್ರಹಿಕೆಯೂ ಇದೆ. ಆದ್ದರಿಂದ ಬೆಂಕಿ ಹಾಕಿ ಹೋಗುತ್ತಾರೆ. ಇದು ಕಾಡು ಮತ್ತು ಕಾಡು ಪ್ರಾಣಿಗಳಿಗೆ ತೊಂದರೆ ತಂದೊಡ್ಡುತ್ತಿದೆ ಎಂದು ಹೇಳುತ್ತಾರೆ. ‘ಎಲ್ಲಿಯೂ ತಾನಾಗಿಯೇ ಬೆಂಕಿ ಹೊತ್ತಿಕೊಂಡಿರುವ ಉದಾಹರಣೆ ಇಲ್ಲ. ಬಹುತೇಕ ಕಡೆ ಬೇಕೆಂದೆ ಹಚ್ಚಿರುವ ಬೆಂಕಿಯಿಂದ ಕಾಳ್ಗಿಚ್ಚು ಹೊತ್ತಿಕೊಂಡಿದೆ. ಜಾಗೃತಿ ಮೂಡಿಸುವ ಕೆಲಸವನ್ನು ನಿರಂತರವಾಗಿ ಮಾಡುತ್ತಿದ್ದೇವೆ’ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಹೇಳುತ್ತಾರೆ.
ನೀರಿನ ಮೂಲಕ್ಕೂ ತೊಂದರೆ
ಹುಲ್ಲುಗಾವಲಿಗೆ ಬೆಂಕಿ ಬೀಳುವುದರಿಂದ ನೀರಿನ ಮೂಲಕ್ಕೂ ತೊಂದರೆಯಾಗಲಿದೆ. ಮುಂದಿನ ದಿನಗಳಲ್ಲಿ ಝರಿಗಳು ಬತ್ತಲು ಇದು ಕಾರಣವಾಗುವ ಸಾಧ್ಯತೆ ಇದೆ ಎಂದು ಪರಿಸರ ಪ್ರೇಮಿ ಸಿ.ವಿ.ಭರತ್ ಹೇಳಿದರು. ನೀರು ಹಿಡಿದಿಟ್ಟುಕೊಂಡು ನಂತರ ನೀರು ಜಿನುಗಿಸುವ ಶಕ್ತಿಯನ್ನು ಹುಲ್ಲುಗಾವಲು ಹೊಂದಿವೆ. ಇವುಗಳು ನಾಶವಾದರೆ ನೀರಿನ ಒರತೆಗೂ ತೊಡಕಾಗಲಿದೆ ಎಂದು ತಿಳಿಸಿದರು. ಮಳೆಗಾಲದಲ್ಲಿ ಮಣ್ಣಿನ ಸವಕಳಿ ತಡೆಯುವ ಶಕ್ತಿಯನ್ನು ಹುಲ್ಲುಗಾವಲು ಹೊಂದಿವೆ. ಹುಲ್ಲುಗಾವಲು ಭಸ್ಮವಾಗಿರುವ ಕಡೆಗಳಲ್ಲಿ ಮತ್ತೆ ಹುಲ್ಲು ಚಿಗುರುವುದು ತಡವಾಗುತ್ತದೆ. ಅಲ್ಲಿಯ ತನಕ ಮಣ್ಣಿನ ಸವಕಳಿ ಹೆಚ್ಚಾಗುವುದರಿಂದ ತೊಂದರೆಗಳೇ ಜಾಸ್ತಿ ಎಂದರು. ಇನ್ನು ಹುಲ್ಲುಗಾವಲಿನಲ್ಲಿಯೂ ಸಣ್ಣ ಸಣ್ಣ ವನ್ಯಜೀವಿಗಳು ವಾಸ ಮಾಡುತ್ತಿವೆ. ಮೂಗಿಲಿ ಕಾಡುಮೊಲ ಮುಂಗುಸಿ ಹಾವು ಸೇರಿ ಸಣ್ಣ ಸಣ್ಣ ಜೀವಿಗಳು ಬೆಂಕಿಯಲ್ಲಿ ಸಿಲುಕಿ ಪ್ರಾಣ ಕಳೆದುಕೊಳ್ಳುತ್ತವೆ. ಇವೆಲ್ಲವೂ ಇದ್ದರೆ ಮಾತ್ರ ವನ ಮತ್ತು ವನ್ಯಜೀವಿಗಳ ಸಮತೋಲನ ಇರಲಿದೆ. ಎಲ್ಲವನ್ನೂ ಕಾಪಾಡಿಕೊಳ್ಳಬೇಕಿದೆ ಎಂದು ಹೇಳಿದರು. ಅರಣ್ಯ ಇಲಾಖೆ ಅಧಿಕಾರಿಗಳು ಸಂಕ್ರಾಂತಿಗೆ ಮೊದಲೇ ಬೆಂಕಿ ಗೆರೆಗಳನ್ನು ನಿರ್ಮಿಸಬೇಕು. ಪದೇ ಪದೇ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರೆ ಕೆಳ ಹಂತದ ಸಿಬ್ಬಂದಿ ಎಚ್ಚರಿಕೆಯಿಂದ ಕೆಲಸ ಮಾಡುತ್ತಾರೆ. ಬೆಂಕಿ ಹೊತ್ತಿರುವ ಮಾಹಿತಿ ಸಿಕ್ಕಿದ ಕೂಡಲೇ ಹಿರಿಯ ನಂದಿಸಲು ಸಿಬ್ಬಂದಿಯ ಜತೆಗೆ ಹಿರಿಯ ಅಧಿಕಾರಿಗಳು ತೆರಳಬೇಕು. ಸ್ಥಳದಲ್ಲೇ ನಿರ್ಧಾರ ತೆಗೆದುಕೊಳ್ಳುವ ಅಧಿಕಾರ ಇರುವ ಅಧಿಕಾರಿಗಳಿದ್ದರೆ ಬೆಂಕಿ ನಂದಿಸುವುದು ಸುಲಭವಾಗುತ್ತದೆ ಎಂದರು.
ಶೋಲಾ ಕಾಡಿಗೆ ಬೆಂಕಿ ತಗುಲದಂತೆ ಕ್ರಮ
ಕಾಳ್ಗಿಚ್ಚು ತಡೆಯಲು ಎಲ್ಲೆಡೆ ಬೆಂಕಿ ಗೆರೆಗಳನ್ನು ನಿರ್ಮಿಸಲಾಗಿದೆ. ಅದ್ದರಿಂದ ಶೋಲಾ ಕಾಡುಗಳಿಗೆ ಬೆಂಕಿ ಹರಡುವುದು ತಪ್ಪಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಹೇಳುತ್ತಾರೆ. ರಸ್ತೆ ಬದಿಯಲ್ಲಿ ಶೋಲಾ ಕಾಡಿನ ತುದಿಗಳಲ್ಲಿ ಬೆಂಕಿ ಗೆರೆ ನಿರ್ಮಿಸಲಾಗುತ್ತಿದೆ. ಕೆಲವರು ಕಡಿದಾದ ಪ್ರದೇಶಗಳಿಗೆ ಹತ್ತಿ ಬೆಂಕಿ ಹೊತ್ತಿಸುತ್ತಿದ್ದಾರೆ. ಎಷ್ಟೇ ಜಾಗೃತಿ ಮೂಡಿಸಿದರೂ ಬೆಂಕಿ ಹಚ್ಚುವುದು ನಿಂತಿಲ್ಲ ಎಂದರು. ಅರಣ್ಯ ಸಿಬ್ಬಂದಿ ನಿರಂತರವಾಗಿ ಗಮನ ಹರಿಸುತ್ತಿದ್ದಾರೆ. ರಸ್ತೆ ಬದಿಯಲ್ಲಿ ಅಗ್ನಿಶಾಮಕ ಸಿಬ್ಬಂದಿ ಕೂಡ ಸಹಕಾರ ನೀಡುತ್ತಿದ್ದಾರೆ. ಕಾಳ್ಗಿಚ್ಚು ತಡೆಗೆ ಕಾರ್ಯಪಡೆ ರಚಿಸಲಗಿದೆ. ಬೆಂಕಿ ಗಮನಿಸುವ ವಾಚರ್‌ಗಳು ಕೂಡ ಹೆಚ್ಚಿನ ಗಮನ ಹರಿಸಿದ್ದಾರೆ. ಕಿಡಿಗೇಡಿಗಳು ಕಾಡಿನ ಬಗ್ಗೆ ಅರ್ಥ ಮಾಡಿಕೊಂಡರೆ ಸಮಸ್ಯೆ ಕಡಿಮೆಯಾಗಲಿದೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.