ADVERTISEMENT

ನೇಹಾ ಕೊಲೆ: ಏ.22ರಂದು ಮುಸ್ಲಿಮರಿಂದ ಮೌನ ಮೆರವಣಿಗೆ, ಸ್ವಯಂಪ್ರೇರಿತ ಬಂದ್‌

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2024, 11:47 IST
Last Updated 21 ಏಪ್ರಿಲ್ 2024, 11:47 IST
ನೇಹಾ ಹಿರೇಮಠ
ನೇಹಾ ಹಿರೇಮಠ   

ಧಾರವಾಡ: ’ಹುಬ್ಬಳ್ಳಿಯ ಬಿವಿಬಿ ಕಾಲೇಜು ವಿದ್ಯಾರ್ಥಿನಿ ನೇಹಾ ಕೊಲೆ ಪ್ರಕರಣ ಖಂಡಿಸಿ ಮತ್ತು ಪ್ರಕರಣದ ಆರೋಪಿಗೆ ಕಠಿಣ ಶಿಕ್ಷೆ ಆಗಬೇಕು ಎಂದು ಏಪ್ರಿಲ್‌ 22ರಂದು ಅಂಜುಮನ್ ಇ ಇಸ್ಲಾಂ ಸಂಸ್ಥೆ ವತಿಯಿಂದ ನಗರದಲ್ಲಿ ಮೌನ ಮೆರವಣಿಗೆ ನಡೆಸಲಾಗುವುದು. ಮುಸ್ಲಿಂ ಸಮುದಾಯದವರು ಸ್ವಯಂ ಪ್ರೇರಿತವಾಗಿ ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 3 ಗಂಟೆವರೆಗೆ ಅಂಗಡಿ, ಮಳಿಗೆಗಳನ್ನು ಬಂದ್‌ ಮಾಡುವುದಾಗಿ ತಿಳಿಸಿದ್ಧಾರೆ’ ಎಂದು ಸಂಸ್ಥೆ ಅಧ್ಯಕ್ಷ ಇಸ್ಮಾಯಿಲ್‌ ತಮಟಗಾರ ತಿಳಿಸಿದರು.

ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 22ರಂದು ಬೆಳಿಗ್ಗೆ 10 ಗಂಟೆಗೆ ಅಂಜುಮನ್‌ ಸಂಸ್ಥೆ ಆವರಣದಿಂದ ಮೆರವಣಿಗೆ ಹೊರಟು ಜುಬಿಲಿ ವೃತ್ತ, ಕೋರ್ಟ್‌ವೃತ್ತ ಮಾರ್ಗವಾಗಿ ಜಿಲ್ಲಾಧಿಕಾರಿ ಕಚೇರಿ ತಲುಪಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು.

ಸ್ವಯಂಪ್ರೇರಿತವಾಗಿ ಅಂಗಡಿ, ಮಳಿಗೆಗಳನ್ನು ಬಂದ್‌ ಮಾಡುವುದಾಗಿ ಸಮುದಾಯದವರು ಹೇಳಿದ್ದಾರೆ. ಅಂಗಡಿ, ಮಳಿಗೆಗಳನ್ನು ಮುಚ್ಚುವಂತೆ ಯಾರಿಗೂ ತಾಕೀತು ಮಾಡುವುದಿಲ್ಲ ಎಂದು ಅವರು ಹೇಳಿದರು.

ADVERTISEMENT

ನೇಹಾ ಕೊಲೆ ಅತ್ಯಂತ ಅಮಾನವೀಯ ಕೃತ್ಯ. ಇಂಥ ಕೃತ್ಯ ಯಾರೇ ಮಾಡಿದರೂ ಖಂಡನೀಯ. ಇಂಥ ಪ್ರಕರಣಗಳನ್ನು ತ್ವರಿತವಾಗಿ ವಿಚಾರಣೆ ನಡೆಸಿ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದರು.

ಅಂಜುಮನ್‌ ಸಂಸ್ಥೆಯ ವಿದ್ಯಾಲಯದ ಒಂದು ಬ್ಲಾಕ್‌ ಅಥವಾ ಕೊಠಡಿಗೆ ನೇಹಾ ಅವರ ಹೆಸರಿಡಲು ಚಿಂತನೆ ನಡೆದಿದೆ. ಮುಂದಿನ ಶೈಕ್ಷಣಿಕ ವರ್ಷ ಆರಂಭದೊಳಗೆ ಈ ನಿಟ್ಟಿನಲ್ಲಿ ಕ್ರಮ ವಹಿಸುತ್ತೇವೆ ಎಂದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.