
ಶೃಂಗೇರಿ: ‘ಆರ್ಥಿಕ ನಿರ್ವಹಣೆಯಲ್ಲಿ ಎಡವಿದಾಗ ತೊಂದರೆಯಲ್ಲಿ ಸಿಲುಕಿಕೊಳ್ಳಬೇಕಾಗುತ್ತದೆ. ಸಮರ್ಪಕ ಆರ್ಥಿಕ ವ್ಯವಹಾರ ನಡೆಸುವುದರಿಂದ ಜೀವನಕ್ಕೆ ಭದ್ರತೆ ದೊರಕುತ್ತದೆ’ ಎಂದು ಲೆಕ್ಕ ಪರಿಶೋಧಕಿ ಸುರಕ್ಷಾ ಶ್ಯಾನುಬೋಗ್ ಹೇಳಿದರು.
ಶೃಂಗೇರಿಯ ಮೆಣಸೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರೋಟರಿ ಕ್ಲಬ್ ಮತ್ತು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಆರ್ಥಿಕ ಸಾಕ್ಷರತೆ ಮತ್ತು ಆರ್ಥಿಕ ನಿರ್ವಹಣೆ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.
‘ಆದಾಯಕ್ಕಿಂತ ಹೆಚ್ಚು ಖರ್ಚು ಮಾಡಿದಾಗ ಆರ್ಥಿಕ ಸಂಕಷ್ಟ ಎದುರಾಗುತ್ತದೆ. ಉಳಿತಾಯ ಮಾಡುವುದನ್ನು ರೂಢಿಸಿಕೊಂಡು ಅದನ್ನು ಸಮರ್ಥವಾಗಿ ಹೂಡಿಕೆ ಮಾಡಬೇಕು. ಕೆಲವೊಮ್ಮೆ ಸಾಲ ಮಾಡುವುದು ಅನಿವಾರ್ಯವಾದರೂ ಅನಗತ್ಯವಾಗಿ ದುಂದು ವೆಚ್ಚಕ್ಕಾಗಿ ಸಾಲ ಮಾಡಬಾರದು. ಒಮ್ಮೆ ಸಾಲ ಮಾಡಿದ ನಂತರ ನಿಗದಿತವಾಗಿ ಮರು ಪಾವತಿಯನ್ನು ಸಹ ಮಾಡಬೇಕು. ನಮ್ಮ ದೈನಂದಿನ ಖರ್ಚಿನ ವಿವರವನ್ನು ದಾಖಲಿಸಿಕೊಳ್ಳಬೇಕು. ಜೀವ ವಿಮೆ, ಆರೋಗ್ಯ ವಿಮೆಯನ್ನು ಹೊಂದುವುದರಿಂದ ನಮಗೆ ಹೆಚ್ಚಿನ ಭದ್ರತೆ ದೊರಕುತ್ತದೆ’ ಎಂದರು.
ಆರ್ಥಿಕ ಸಾಕ್ಷರತಾ ಕೇಂದ್ರದ ಸಮಾಲೋಚಕಿ ಸೌಮ್ಯಶ್ರೀ ಮಾತನಾಡಿ, ‘ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಮೇಲ್ವಿಚಾರಣೆಯಲ್ಲಿ ಎಲ್ಲಾ ತಾಲ್ಲೂಕು ಕೇಂದ್ರದಲ್ಲಿ ಸಾಕ್ಷರತಾ ಕೇಂದ್ರವಿದ್ದು, ಜನ ಸಾಮಾನ್ಯರಿಗೆ ಆರ್ಥಿಕ ನಿರ್ವಹಣೆ ಮಾಹಿತಿ ನೀಡಲಾಗುತ್ತದೆ. ತಂತ್ರಜ್ಞಾನ ಬೆಳೆದಂತೆ ಮೋಸ ಮಾಡುವವರ ಜಾಲವು ಹೆಚ್ಚುತ್ತಿದ್ದು, ಮೊಬೈಲ್ಗೆ ಬಂದಿರುವ ಒಟಿಪಿ ಹಂಚಿಕೊಳ್ಳುವುದು, ಎಟಿಎಂ ಕಾರ್ಡ್ ಖಾಸಗಿ ಪಿನ್ ಹೇಳುವುದರಿಂದ ನಮ್ಮ ಖಾತೆಯ ಹಣವನ್ನು ವರ್ಗಾವಣೆ ಮಾಡಿಕೊಳ್ಳುತ್ತಾರೆ. ಒಟಿಪಿ ಹಂಚಿಕೊಳ್ಳುವುದು, ಅಪರಿಚಿತ ವ್ಯಕ್ತಿಗಳಿಗೆ ಬ್ಯಾಂಕಿನ ನಮ್ಮ ಮಾಹಿತಿ ನೀಡಬಾರದು’ ಎಂದು ಸಲಹೆ ನೀಡಿದರು.
ರೋಟರಿ ಕ್ಲಬ್ ಅಧ್ಯಕ್ಷ ಅಂಬಲಮನೆ ಸುಬ್ರಮಣ್ಯ ಅಧ್ಯಕ್ಷತೆ ವಹಿಸಿದ್ದರು. ರೋಟರಿ ಕ್ಲಬ್ನ ಪ್ರಿಯದರ್ಶಿನಿ ಹೆಗ್ಡೆ, ನಟೇಶ್, ಕಾಲೇಜಿನ ಪ್ರಾಂಶುಪಾಲೆ ಭಾರತೀ, ವಾಣಿಜ್ಯ ವಿಭಾಗದ ಮುಖ್ಯಸ್ಥೆ ಆಶಾಲತಾ, ಉಪನ್ಯಾಸಕರಾದ ಮರಿಸ್ವಾಮಿ, ಆಶಾ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.