ಚಿಕ್ಕಮಗಳೂರು:ಕೊಪ್ಪ ತಾಲ್ಲೂಕಿನ ಅದ್ದಡ ಗ್ರಾಮದ ಪ್ರಬೋಧಿನೀ ಗುರುಕುಲಮ್ ಸಂಸ್ಥೆಯ ಅರ್ಧಮಂಡಲೋತ್ಸವದ ನಿಮಿತ್ತ ಇದೇ 21ರಂದು ಬೆಳಿಗ್ಗೆ 9.30ಕ್ಕೆ ಸಂಸ್ಥೆಯ ಆವರಣದಲ್ಲಿ ‘ರಾಜ್ಯಮಟ್ಟದ ಪರಿಸರ–ಜಲಜಾಗೃತಿ ಸಮಾವೇಶ’ ಏರ್ಪಡಿಸಲಾಗಿದೆ ಎಂದು ಸಂಸ್ಥೆಯ ವ್ಯವಸ್ಥಾಪಕ ಉಮೇಶ್ ರಾವ್ ಇಲ್ಲಿ ಗುರುವಾರ ತಿಳಿಸಿದರು.
ಆರ್ಎಸ್ಎಸ್ ಹಿರಿಯ ಪ್ರಚಾರಕ ಸೀತಾರಾಮ ಕೆದಿಲಾಯ ಅವರು ಸಮಾವೇಶ ಉದ್ಘಾಟಿಸುವರು. ದೂರದರ್ಶನ ವಾಹಿನಿ ನಿವೃತ್ತ ಮಹಾನಿರ್ದೇಶಕ ಮಹೇಶ್ ಜೋಷಿ ಅಧ್ಯಕ್ಷತೆ ವಹಿಸುವರು. ಪರಿಸರವಾದಿ ಅನಂತ ಹೆಗಡೆ ಆಶೀಸರ, ಭಾರತೀಯ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಟಿ.ವಿ.ರಾಮಚಂದ್ರ, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ವಿಜಯಮೋಹನರಾಜ್ ಪಾಲ್ಗೊಳ್ಳುವರು ಎಂದು ಸುದ್ದಿಗೋಷ್ಠಿಯಲ್ಲಿ ಅವರು ಹೇಳಿದರು.
ಹವಾಮಾನ ಬದಲಾವಣೆ, ಪ್ರಕೃತಿ ನಾಶ ಹಾಗೂ ಗಣಿಗಾರಿಕೆ, ನಿಷೇಧಿತ ಕ್ರಿಮಿನಾಶಕಗಳ ಬಳಕೆಯ ದುಷ್ಪರಿಣಾಮಗಳು, ಪರಿಸರ ಸಂರಕ್ಷಣೆಯಲ್ಲಿನ ಸವಾಲುಗಳು, ಅನಿವಾರ್ಯತೆಯ ಬಗ್ಗೆ ಸಮಾವೇಶದಲ್ಲಿ ಅವಲೋಕನ ನಡೆಯಲಿವೆ ಎಂದು ಹೇಳಿದರು.
ಸಂಸ್ಥೆಯ ಗಜೇಂದ್ರ ಗೊರಸುಗೂಡಿಗೆ ಮಾತನಾಡಿ, ಸಂಜೆ 4.30ಕ್ಕೆ ಸಮಾರೋಪ ಸಮಾರಂಭ ನಡೆಯುವುದು. ಹೊರನಾಡು ಅನ್ನಪೂರ್ಣೇಶ್ವರಿ ದೇಗುಲದ ಧರ್ಮದರ್ಶಿ ಭೀಮೇಶ್ವರ ಜೋಶಿ ಅಧ್ಯಕ್ಷತೆ ವಹಿಸುವರು. ಮಾಲಿನ್ಯ ನಿಯಂತ್ರಣ ಮಂಡಳಿ ಮಾಜಿ ಅಧ್ಯಕ್ಷ ವಾಮನಾಚಾರ್ಯ, ಸಮರ್ಥ ಭಾರತ್ ಟ್ರಸ್ಟ್ ನಿರ್ದೇಶಕ ಗಣಪತಿ ಹೆಗಡೆ ಪಾಲ್ಗೊಳ್ಳುವರು ಎಂದರು.
ಸಂಸ್ಥೆಯ ನಾಗಭೂಷಣ್, ಮಲ್ಲಿಕಾರ್ಜುನ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.