ADVERTISEMENT

ಶಾಸಕ ಎಂ.ಪಿ.ಕುಮಾರಸ್ವಾಮಿಯಿಂದ ಕೊಲೆ ಬೆದರಿಕೆ: ಸಚಿನ್‌ ಮರ್ಕಲ್‌ ಆರೋಪ

ಸಚಿನ್‌ ಮರ್ಕಲ್‌ ಫೇಸ್‌ಬುಕ್‌ನಲ್ಲಿ ಹಾಕಿರುವ ಪೋಸ್ಟ್‌

​ಪ್ರಜಾವಾಣಿ ವಾರ್ತೆ
Published 17 ಜುಲೈ 2021, 11:30 IST
Last Updated 17 ಜುಲೈ 2021, 11:30 IST
ಸಚಿನ್‌ ಮರ್ಕಲ್‌ ಮತ್ತು ಶಾಸಕ ಎಂ.ಪಿ.ಕುಮಾರಸ್ವಾಮಿ
ಸಚಿನ್‌ ಮರ್ಕಲ್‌ ಮತ್ತು ಶಾಸಕ ಎಂ.ಪಿ.ಕುಮಾರಸ್ವಾಮಿ   

ಚಿಕ್ಕಮಗಳೂರು: ‘ಮೂಡಿಗೆರೆ ಕ್ಷೇತ್ರದ ಶಾಸಕ ಎಂ.ಪಿ.ಕುಮಾರಸ್ವಾಮಿ ಅವರು ನನಗೆ ಕೊಲೆ ಬೆದರಿಕೆ ಹಾಕಿದ್ದಾರೆ. ಅವರ ವಿರುದ್ಧ ಎಸ್ಪಿಗೆ ದೂರು ನೀಡುತ್ತೇನೆ’ ಎಂದು ಪ್ರಜಾಕೀಯ ಪಕ್ಷದ ಕಾರ್ಯಕರ್ತರೂ ಆಗಿರುವ ನಿಡುವಾಳೆ ಗ್ರಾಮ ಪಂಚಾಯಿತಿ ಸದಸ್ಯ ಸಚಿನ್‌ ಮರ್ಕಲ್‌ ಹೇಳಿರುವ ವಿಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗಿದೆ.

‘ಪ್ರವಾಹ ಪರಿಹಾರದ ಹಣ ಕೊಳ್ಳೆ ಹೊಡೆದಿದ್ದಾರೆ ಎಂದು ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಹಾಕಿದ್ದೆ. ಯಾವದೇ ಶಾಸಕ, ಎಂಜಿನಿಯರ್‌, ಗುತ್ತಿಗೆದಾರನ ಹೆಸರು ಅದರಲ್ಲಿ ಇರಲಿಲ್ಲ. ಕುಂಬಳಕಾಯಿ ಕಳ್ಳ ಎಂದಾಗ ಹೆಗಲುಮುಟ್ಟಿ ನೋಡಿಕೊಂಡರು ಎಂಬಂತೆ, ಕುಮಾರಸ್ವಾಮಿ ನನ್ನನ್ನು ಐಬಿಗೆ ಕೆರೆಸಿ ಫೇಸ್‌ಬುಕ್‌ನಲ್ಲಿದ್ದ ಫೋಸ್ಟ್‌ ಡಿಲಿಟ್‌ ಮಾಡಿಸಿದ್ದಾರೆ’ ಎಂದು ಸಚಿನ್‌ ದೂರಿದ್ದಾರೆ.

‘ಠಾಣೆಗೆ ನನ್ನನ್ನು ಕರೆಸಿ ಎಚ್ಚರಿಕೆ ನೀಡುವಂತೆ ಪೊಲೀಸರಿಗೆ ಸೂಚಿಸಿದ್ದಾರೆ. ನನ್ನ ಅಂಗಡಿ ರೇಡ್‌ ಮಾಡುವಂತೆ ತಿಳಿಸಿದ್ದಾರೆ. ಪೊಲೀಸರನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ’ ಎಂದು ಆರೋಪಿಸಿದ್ದಾರೆ.

‘ಮರ್ಕಲ್‌ ರಸ್ತೆ ಹಾಳಾಗಿದೆ ರಿಪೇರಿ ಮಾಡಿಸಿ ಎಂದು ಕೇಳಿದ್ದು ತಪ್ಪೇ? ಕುಮಾರಸ್ವಾಮಿ ಅವರೇ ಕಮಿಷನ್‌ ಲೆಕ್ಕದಲ್ಲಿ ನಿಮಗೆ ದುಡ್ಡು ಸಂದಾಯವಾಗುತ್ತಿರುವುದು ಸುಳ್ಳಾ?’ ಎಂದು ಪ್ರಶ್ನಿಸಿದ್ದಾರೆ.

‘ನನಗೆ ಏನಾದರೂ ಹೆಚ್ಚು ಕಡಿಮೆ ಆದ್ರೆ ಅದಕ್ಕೆ ಕುಮಾರಸ್ವಾಮಿ ನೇರಹೊಣೆ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.