ADVERTISEMENT

ಸಾರಿಗೆ ನೌಕರರ ಮುಷ್ಕರ: ಬೆದರಿಕೆಗೆ ಸರ್ಕಾರ ಮಣಿಯಲ್ಲ ಎಂದ ಶಾಸಕ ಸಿ.ಟಿ. ರವಿ

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2021, 11:07 IST
Last Updated 7 ಏಪ್ರಿಲ್ 2021, 11:07 IST
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ    

ಚಿಕ್ಕಮಗಳೂರು: ‘ರೈತ ನಾಯಕರಾಗಿದ್ದ ಕೋಡಿಹಳ್ಳಿ ಚಂದ್ರಶೇಖರ್‌ ಅವರು ಈಗ ಕಾರ್ಮಿಕ ನಾಯಕರಾಗಿದ್ದಾರೆ. ಅರಾಜಕತೆ ಸೃಷ್ಟಿಸುವುದು ನಾಯಕತ್ವದ ಲಕ್ಷಣವಲ್ಲ, ಸಂದರ್ಭ ಮತ್ತು ಪರಿಸ್ಥಿತಿ ಅರ್ಥಮಾಡಿಕೊಂಡು ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಮುಂದಾಗಬೇಕು’ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಶಾಸಕ ಸಿ.ಟಿ.ರವಿ ಪ್ರತಿಕ್ರಿಯಿಸಿದರು.

ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಅತಿ ಒತ್ತಡ ಹೇರಿದರೆ ಸಂಬಂಧ ಮುರಿದುಹೋಗುತ್ತದೆ. ಬೆದರಿಕೆಗಳ ಮೂಲಕ ಸರ್ಕಾರವನ್ನು ಮಣಿಸಲು ಸಾಧ್ಯವಿಲ್ಲ’ ಎಂದು ಉತ್ತರಿಸಿದರು.

‘ಕೋವಿಡ್‌ ಸಂಕಷ್ಟದ ನಡುವೆಯೂ ಕೆಎಸ್‌ಆರ್‌ಟಿಸಿ ನೌಕರರ ಬೇಡಿಕೆಗಳನ್ನು ಈಡೇರಿಸಲು ಮುಖ್ಯಮಂತ್ರಿ ಮತ್ತು ಸಾರಿಗೆ ಸಚಿವರು ಸಹಾನುಭೂತಿ ವ್ಯಕ್ತಪಡಿಸಿದ್ದಾರೆ. ಸಾರಿಗೆ ಸಚಿವರು ಮೇ 2ರವರೆಗೆ ಕಾಲಾವಕಾಶ ನೀಡುವಂತೆ ನೌಕರರಿಗೆ ಕೇಳಿದ್ದಾರೆ. ನೌಕರರು ಇನ್ನೊಂದು ತಿಂಗಳು ಸಮಯ ನೀಡಿ, ಕಾಯಬೇಕು. ಮುಷ್ಕರ ವಾಪಸ್‌ ಪಡೆಯಬೇಕು’ ಎಂದು ಮನವಿ ಮಾಡಿದರು.

ADVERTISEMENT

‘2018ರಲ್ಲಿ ಟಿಕೆಟ್‌ ನೀಡಿಕೆ ಸಂದರ್ಭದಲ್ಲಿ ಚರ್ಚೆಯಾದಾಗ ಬಿ.ಎಸ್‌.ಯಡಿಯೂರಪ್ಪ ಅವರೇ ಬಸನಗೌಡ ಯತ್ನಾಳ್‌ ಅವರನ್ನು ಸಮರ್ಥಿಸಿಕೊಂಡಿದ್ದರು. ಮುಖ್ಯಮಂತ್ರಿ ಮತ್ತು ಯತ್ನಾಳ್‌ ಅವರಿಗೆ ವ್ಯಕ್ತಿಗತ ಸಂಬಂಧ ಇದೆ, ಅವರೇ ಸಮಸ್ಯೆ ಬಗೆಹರಿಸಿಕೊಳ್ಳುತ್ತಾರೆ’ ಎಂದು ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.