
ನರಸಿಂಹರಾಜಪುರ: ತಾಲ್ಲೂಕಿನ ಲಿಂಗಾಪುರ ಗ್ರಾಮದಲ್ಲಿ ಮಂಗಳವಾರ ಜ್ವಾಲಾಮಾಲಿನಿ ಜೆಸಿಐ ಸಂಸ್ಥೆಯಿಂದ ಸೆಲ್ಯೂಟ್ ದ ಸೈಲೆಂಟ್ ವರ್ಕರ್ ಕಾರ್ಯಕ್ರಮದ ಭಾಗವಾಗಿ ಪ್ರಗತಿಪರ ಕೃಷಿಕ ಮಹಿಳೆ ಎಂ.ಎಸ್.ರಜನಿ ಅವರನ್ನು ಸನ್ಮಾನಿಸಲಾಯಿತು.
ಲಿಂಗಾಪುರ ಗ್ರಾಮದ ಎಂ.ಎಸ್.ರಜನಿ ಅವರು ಪ್ರಚಾರವಿಲ್ಲದೆ ಕೋಳಿ ಫಾರಂ, ತೋಟ ನಿರ್ಮಿಸಿ ಕೃಷಿ ಸಾಧನೆ ಮಾಡಿದ್ದಾರೆ. ರಜನಿ ಅವರು 10 ಸಾವಿರ ಕೋಳಿ ಮರಿಗಳನ್ನು ಸಾಕಿದ್ದಾರೆ. ತಮ್ಮ ತೋಟಗಳಿಗೆ ಸಾವಯವ ಗೊಬ್ಬರವನ್ನು ಬಳಸಿ ಉತ್ತಮ ಬೆಳೆ ಬೆಳೆಯುತ್ತಿದ್ದಾರೆ. ಅವರ ಸಾಧನೆಯನ್ನು ಸಂಸ್ಥೆ ಗುರುತಿಸಿ ಸನ್ಮಾನಿಸುತ್ತಿದೆ ಎಂದು ಜ್ವಾಲಾಮಾಲಿನಿ ಜೇಸಿ ಸಂಸ್ಥೆ ಅಧ್ಯಕ್ಷ ಆದರ್ಶ ಬಿ.ಗೌಡ ಹೇಳಿದರು.
ಜೇಸಿ ಸಂಸ್ಥೆಯ ಪೂರ್ವಾಧ್ಯಕ್ಷ ಅಭಿನವ ಗಿರಿರಾಜ್ ಮಾತನಾಡಿ, ರಜನಿ ಅವರು ತಮ್ಮ ಜಮೀನಿನಲ್ಲಿ ಮಿಶ್ರ ಬೆಳೆ ಬೆಳೆದು ಆರ್ಥಿಕವಾಗಿ ಲಾಭ ಪಡೆದಿದ್ದಾರೆ ಎಂದರು.
ಜೇಸಿ ನಿರ್ದೇಶಕ ಹೊನ್ನೇಕೊಡಿಗೆ ಎಲ್ದೋ ಮಾತನಾಡಿ, ಕೃಷಿಕ ಮಹಿಳೆ ಎಂ.ಎಸ್.ರಜನಿ ಅವರು ಸ್ವಾವಲಂಬಿಯಾಗಿ ಹೇಗೆ ಬದುಕಬಹುದು ಎಂಬುದನ್ನು ತೋರಿಸಿದ್ದಾರೆ. ತೋಟವನ್ನು ವ್ಯವಸ್ಥಿತವಾಗಿ ನಿರ್ವಹಿಸಿ ಇತರ ಮಹಿಳೆಯರಿಗೆ ಆದರ್ಶವಾಗಿದ್ದಾರೆ ಎಂದರು.
ಜೆಸಿಐ ಪೂರ್ವಾಧ್ಯಕ್ಷ ಚರಣರಾಜ್, ಕಾರ್ಯದರ್ಶಿ ರಜತ್ ವಗಡೆ, ಸಹ ಕಾರ್ಯದರ್ಶಿ ನವೀನ್, ನಿರ್ದೇಶಕರಾದ ಪುರುಷೋತ್ತಮ್, ಪವನ್ ಕರ್, ವಿನಯ್, ಜೋಯಿ ಬ್ರೋ, ಶ್ರೀಹರಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.