ADVERTISEMENT

ಮೂಡಿಗೆರೆ | ಮೀನು ಹಿಡಿಯಲು ಹೋದ ಇಬ್ಬರು ಯುವಕರು ಸಾವು

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2023, 14:23 IST
Last Updated 6 ಆಗಸ್ಟ್ 2023, 14:23 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮೂಡಿಗೆರೆ: ತಾಲ್ಲೂಕಿನ ಹ್ಯಾಂಡ್ ಪೋಸ್ಟ್ ಬಳಿಯ ಖಾಸಗಿ ಕಾಫಿ ತೋಟದ ಕೆರೆಯಲ್ಲಿ ಮೀನು ಹಿಡಿಯಲು ಹೋಗಿದ್ದ ಹಾಸನ ಮೂಲದ ಪುನೀತ್ (18), ತನ್ಮಯ್ (17) ಎಂಬುವರು ಸಾವನ್ನಪ್ಪಿದ್ದಾರೆ.

ಹ್ಯಾಂಡ್ ಪೋಸ್ಟ್‌ನ ರಿಯಾಜ್ ಎಂಬುವರ ಕಾಫಿ ಲೈನಿನಲ್ಲಿ ಹಾಸನ ಮೂಲದ ಎರಡು ಕುಟುಂಬಗಳು ವಾಸವಿದ್ದು, ಶನಿವಾರ ಸಂಜೆ ಸಂದೀಪ್, ಪುನೀತ್, ದಿವಾಕರ್ ಹಾಗೂ ತನ್ಮಯ್ ಮಾಲೀಕರ ಕೆರೆಯಲ್ಲಿ ಮೀನು ಹಿಡಿಯಲು ತೆರಳಿದ್ದಾರೆ. ಈ ವೇಳೆ ಪುನೀತ್ ಕೆರೆಯಲ್ಲಿ ಸಿಲುಕಿಕೊಂಡಿದ್ದು, ಆತನನ್ನು ರಕ್ಷಿಸಲು ಹೋದ ತನ್ಮಯ್ ಕೂಡ ನೀರಿನಲ್ಲಿ ಸಿಲುಕಿ ಪ್ರಾಣ ಕಳೆದುಕೊಂಡಿದ್ದಾನೆ.

ತಕ್ಷಣವೇ ಸಂದೀಪ್ ಹಾಗೂ ದಿವಾಕರ್ ಕಾಫಿ ಎಸ್ಟೇಟ್ ಮಾಲೀಕರು ಹಾಗೂ ಅಕ್ಕಪಕ್ಕದವರಿಗೆ ಮಾಹಿತಿ ನೀಡಿದ್ದು, ತಡರಾತ್ರಿ ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ, ಧರ್ಮಸ್ಥಳ ವಿಪತ್ತು ನಿರ್ವಹಣಾ ತಂಡ ಹಾಗೂ ಸಕ್ರಿಯ ಸಮಾಜ ಸೇವಕರು, ಕಾಫಿನಾಡು ಸಮಾಜ ಸೇವಕರ ತಂಡದ ಕಾರ್ಯಕರ್ತರು ಕಾರ್ಯಾಚರಣೆ ನಡೆಸಿ ಮೃತದೇಹಗಳನ್ನು ಕೆರೆಯಿಂದ ಹೊರ ತೆಗೆದಿದ್ದಾರೆ.

ಮೃತ ದೇಹಗಳನ್ನು ಪಟ್ಟಣದ ಎಂಜಿಎಂ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಹಸ್ತಾಂತರಿಸಲಾಯಿತು. ಘಟನೆಗೆ ಸಂಬಂಧಿಸಿದಂತೆ ಮೂಡಿಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.