ಮೂಡಿಗೆರೆ: ತಾಲ್ಲೂಕಿನ ಹ್ಯಾಂಡ್ ಪೋಸ್ಟ್ ಬಳಿಯ ಖಾಸಗಿ ಕಾಫಿ ತೋಟದ ಕೆರೆಯಲ್ಲಿ ಮೀನು ಹಿಡಿಯಲು ಹೋಗಿದ್ದ ಹಾಸನ ಮೂಲದ ಪುನೀತ್ (18), ತನ್ಮಯ್ (17) ಎಂಬುವರು ಸಾವನ್ನಪ್ಪಿದ್ದಾರೆ.
ಹ್ಯಾಂಡ್ ಪೋಸ್ಟ್ನ ರಿಯಾಜ್ ಎಂಬುವರ ಕಾಫಿ ಲೈನಿನಲ್ಲಿ ಹಾಸನ ಮೂಲದ ಎರಡು ಕುಟುಂಬಗಳು ವಾಸವಿದ್ದು, ಶನಿವಾರ ಸಂಜೆ ಸಂದೀಪ್, ಪುನೀತ್, ದಿವಾಕರ್ ಹಾಗೂ ತನ್ಮಯ್ ಮಾಲೀಕರ ಕೆರೆಯಲ್ಲಿ ಮೀನು ಹಿಡಿಯಲು ತೆರಳಿದ್ದಾರೆ. ಈ ವೇಳೆ ಪುನೀತ್ ಕೆರೆಯಲ್ಲಿ ಸಿಲುಕಿಕೊಂಡಿದ್ದು, ಆತನನ್ನು ರಕ್ಷಿಸಲು ಹೋದ ತನ್ಮಯ್ ಕೂಡ ನೀರಿನಲ್ಲಿ ಸಿಲುಕಿ ಪ್ರಾಣ ಕಳೆದುಕೊಂಡಿದ್ದಾನೆ.
ತಕ್ಷಣವೇ ಸಂದೀಪ್ ಹಾಗೂ ದಿವಾಕರ್ ಕಾಫಿ ಎಸ್ಟೇಟ್ ಮಾಲೀಕರು ಹಾಗೂ ಅಕ್ಕಪಕ್ಕದವರಿಗೆ ಮಾಹಿತಿ ನೀಡಿದ್ದು, ತಡರಾತ್ರಿ ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ, ಧರ್ಮಸ್ಥಳ ವಿಪತ್ತು ನಿರ್ವಹಣಾ ತಂಡ ಹಾಗೂ ಸಕ್ರಿಯ ಸಮಾಜ ಸೇವಕರು, ಕಾಫಿನಾಡು ಸಮಾಜ ಸೇವಕರ ತಂಡದ ಕಾರ್ಯಕರ್ತರು ಕಾರ್ಯಾಚರಣೆ ನಡೆಸಿ ಮೃತದೇಹಗಳನ್ನು ಕೆರೆಯಿಂದ ಹೊರ ತೆಗೆದಿದ್ದಾರೆ.
ಮೃತ ದೇಹಗಳನ್ನು ಪಟ್ಟಣದ ಎಂಜಿಎಂ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಹಸ್ತಾಂತರಿಸಲಾಯಿತು. ಘಟನೆಗೆ ಸಂಬಂಧಿಸಿದಂತೆ ಮೂಡಿಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.