ಚಿಕ್ಕಮಗಳೂರು: ತೇಗೂರು ಸಮೀಪಪದ ಅಬ್ದುಲ್ ಕಲಾಂ ವಸತಿ ಶಾಲೆಯಿಂದ ಇಬ್ಬರು ವಿದ್ಯಾರ್ಥಿಗಳು ನಾಪತ್ತೆಯಾಗಿದ್ದಾರೆ.
ಬೆಂಗಳೂರಿನ ತರುಣ್, ಬಾಳೆಹೊನ್ನೂರಿನ ಯಶ್ವಿನ್ ವಸತಿ ನಿಲಯದಿಂದ ಮಾ.3 ರಂದು ನಾಪತ್ತೆಯಾಗಿದ್ದಾರೆ. ಇಬ್ಬರು ವಿದ್ಯಾರ್ಥಿಗಳು ಬಸ್ ನಿಲ್ದಾಣದಲ್ಲಿ ನಿಂತಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ನಿಲಯ ಪಾಲಕ ಗಣೇಶ್ ಆಚಾರ್ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಪೊಲೀಸರು ಹುಡುಕಾಟ ನಡೆಸಿದ್ದಾರೆ.
‘10 ದಿನಗಳಿಂದ ವಿದ್ಯಾರ್ಥಿಗಳು ನಾಪತ್ತೆಯಾಗಿದ್ದು, ಇದಕ್ಕೆ ನಿಲಯದ ಪಾಲಕರೇ ಕಾರಣ. ಅವರ ವಿರುದ್ಧ ಕೂಡಲೇ ಕ್ರಮ ಕೈಗೊಂಡು ಮಕ್ಕಳನ್ನು ಹುಡುಕಿಕೊಡಬೇಕು’ ಎಂದು ಯಶ್ಚಿತ್ ತಂದೆ ಸತೀಶ್ ಒತ್ತಾಯಿಸಿದ್ದಾರೆ.
‘ಮಾ.3ರಂದು ಮಧ್ಯರಾತ್ರಿ 1.15ರ ವೇಳೆಗೆ ವಿದ್ಯಾರ್ಥಿ ನಿಲಯದಿಂದ ಹೊರ ಹೋಗಿದ್ದಾರೆ. ಮುಖ್ಯದ್ವಾರದಲ್ಲಿ ಕಾವಲುಗಾರರು ಇದ್ದರು, ಬೇರೆ ಕಡೆಯಿಂದ ಹೊರ ಹೋಗಿದ್ದಾರೆ. ಬಸ್ ನಿಲ್ದಾಣದಲ್ಲಿ 3 ಗಂಟೆ ಸುಮಾರಿಗೆ ಕಡೂರು ಕಡೆಯ ಬಸ್ ಹತ್ತಿರುವುದು ದಾಖಲಾಗಿದೆ. ಪೊಲೀಸರು ಹುಡುಕಾಡುತ್ತಿದ್ದಾರೆ. ಪ್ರಾಂಶುಪಾಲರು ಮತ್ತು ನಿಲಯ ಪಾಲಕರಿಗೆ ನೋಟಿಸ್ ನೀಡಲಾಗಿದೆ’ ಎಂದು ಗಿರಿಜನ ಕಲ್ಯಾಣಾಧಿಕಾರಿ ಭಾಗೀರತಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.