ADVERTISEMENT

ಬಿಸಿಲಿಗೆ ಬಾಡುತ್ತಿರುವ ಪುಷ್ಪ: ಕಡೂರಿನಲ್ಲಿ ಹೂವಿನ ದರ ದುಪ್ಪಟ್ಟು

ಬಾಲು ಮಚ್ಚೇರಿ
Published 28 ಮಾರ್ಚ್ 2025, 7:35 IST
Last Updated 28 ಮಾರ್ಚ್ 2025, 7:35 IST
ಕಡೂರಿನ ಮರವಂಜಿ ವೃತ್ತದ ಹೂವಿನ ವ್ಯಾಪಾರಿ ಗೋವಿಂದಪ್ಪ
ಕಡೂರಿನ ಮರವಂಜಿ ವೃತ್ತದ ಹೂವಿನ ವ್ಯಾಪಾರಿ ಗೋವಿಂದಪ್ಪ   

ಕಡೂರು: ಯುಗಾದಿ ಹಬ್ಬದ ಎದುರಿನಲ್ಲಿ ಹೂವಿನ ದರ ಏರಿಕೆಯಾಗಿದೆ. ಬಿರುಬಿಸಿಲಿನಿಂದಾಗಿ ಮಾರಾಟಗಾರರಿಗೆ ಬಹಳಷ್ಟು ನಷ್ಟವಾಗುತ್ತಿದೆ. ಹೂವಿನ ಬೆಲೆ 15 ದಿನದಲ್ಲಿ ದುಪ್ಪಟ್ಟಾಗಿದೆ.

ಯುಗಾದಿ ಮತ್ತು ರಂಜಾನ್ ಹಬ್ಬ ಒಟ್ಟಿಗೆ ಬಂದಿರುವುದರಿಂದ ಹೂವಿನ ಬೇಡಿಕೆ ಹೆಚ್ಚತೊಡಗಿದೆ. ದುಂಡುಮಲ್ಲಿಗೆ ಒಂದು ಕೆ.ಜಿ.ಗೆ ₹1,200, ಕನಕಾಂಬರ ₹1,500, ಕಾಕಡಾ ಮಲ್ಲಿಗೆ ₹1,000ದಿಂದ 1,100, ಸೇವಂತಿಗೆ ₹200 ಬೆಲೆಯಿದೆ. ಗುಲಾಬಿ (ಸಣ್ಣದು) ಒಂದು ಕೆ.ಜಿ.ಗೆ ₹350, ಚೆಂಡು ಹೂವು ಕೆ.ಜಿ‌ಗೆ ₹200 ಇದೆ. ಹೂವು ಮತ್ತು ಗಾತ್ರವನ್ನಾಧರಿಸಿ ಹಾರಕ್ಕೆ ₹60 ರಿಂದ ₹300 ತನಕ ದರ ಸಿಗುತ್ತಿದೆ.

ಕನಕಾಂಬರ, ದುಂಡುಮಲ್ಲಿಗೆ ಒಂದು ಮಾರು ಹೂವಿಗೆ ₹80-100, ಕಾಕಡಾ ಮಲ್ಲಿಗೆ ಒಂದು ಮಾರಿಗೆ ₹60-80, ಸೇವಂತಿಗೆ ಒಂದು ಮಾರು ಹೂವಿಗೆ ₹ 60-70, ಕಲರ್ ಸೇವಂತಿಗೆ ₹50, ಗುಲಾಬಿ 1ಕ್ಕೆ ₹10, ಕಣಗಲೆ ಮತ್ತು ತುಳಸಿ ಒಂದು ಮಾರಿಗೆ ₹50-60 ಬೆಲೆಯಲ್ಲಿ ಮಾರಾಟವಾಗುತ್ತಿದೆ.

ADVERTISEMENT

ಕಡೂರು ಭಾಗದಲ್ಲಿ ಹೂ ಬೆಳೆಯುವುದು ಬಹು ಕಡಿಮೆ. ಕೆಲವೆಡೆ ಸೇವಂತಿಗೆ, ಕನಕಾಂಬರ ಮತ್ತು ಕಾಕಡ ಹೂವನ್ನು ಅಲ್ಪ ಪ್ರಮಾಣದಲ್ಲಿ ಅಂದರೆ ದಿನಕ್ಕೆ ಎರಡು ಅಥವಾ ಮೂರು ಕೆ.ಜಿ ಸಿಗುವಷ್ಟು ಬೆಳೆಯುತ್ತಾರೆ. ಹಾಗೆ ಬೆಳೆದವರಿಗೆ ಒಳ್ಳೆಯ ಧಾರಣೆ ದೊರೆಯುತ್ತಿದೆ.

ಆದರೆ, ಹೂವು ಮಾರಾಟಗಾರರಿಗೆ ಬಿರು ಬಿಸಿಲು ಸಂಕಷ್ಟ ತಂದಿದೆ. ಎಷ್ಟೇ ನೀರು ಹಾಕಿದರೂ, ತಂಪಾಗಿಟ್ಟರೂ ವಾತಾವರಣದಲ್ಲಿನ ಬಿಸಿಯಿಂದಾಗಿ ಸಂಜೆ ವೇಳೆಗೆ ಹೂವು ಕಂದಿ ಹೋಗುತ್ತಿದೆ.

‘ಹೂವು ಒಣಗಿ ವ್ಯರ್ಥ’
‘ಬೆಂಗಳೂರು ಚಿಕ್ಕಬಳ್ಳಾಪುರ ಮುಂತಾದೆಡೆಯಿಂದ ಹೂವು ತರಿಸುತ್ತೇವೆ. ಆದರೆ ಬಿಸಿಲಿಗೆ ಹೂವು ತಡೆಯುತ್ತಿಲ್ಲ. ದೊಡ್ಡ ಪ್ರಮಾಣದ ಹೂವು ಒಣಗಿ ವ್ಯರ್ಥವಾಗುತ್ತಿದೆ. ಹೂವಿಗೆ ಬೇಡಿಕೆಯಿದ್ದರೂ ಹೆಚ್ಚು ತರಿಸಲು ಧೈರ್ಯವಾಗುತ್ತಿಲ್ಲ’ ಎನ್ನುತ್ತಾರೆ ಅಂಬೇಡ್ಕರ್ ವೃತ್ತದ ಹೂವಿನ ವ್ಯಾಪಾರಿ ಗೋವಿಂದಪ್ಪ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.