ADVERTISEMENT

ಕಾಂಗ್ರೆಸ್‌ ರೂಪಿಸಿದ್ದ ಬಿಪಿಎಲ್‌ ಕಾರ್ಡ್‌ ನಿಯಮಾವಳಿ ಪುನರುಚ್ಚಾರ: ಸಿ.ಟಿ. ರವಿ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2021, 10:19 IST
Last Updated 16 ಫೆಬ್ರುವರಿ 2021, 10:19 IST
   

ಚಿಕ್ಕಮಗಳೂರು: ‘ಆರ್‌ಸಿಸಿ ಮನೆ, ಕಲರ್‌ ಟಿ.ವಿ, ಬೈಕು, ಕಾರು ಇದ್ದವರು ಬಿಪಿಎಲ್‌ ಕಾರ್ಡ್‌ ಹೊಂದುವಂತಿಲ್ಲ ಎಂದು 2016–17ನೇ ಸಾಲಿನಲ್ಲಿ ನಿಯಮಾವಳಿ ರೂಪಿಸಲಾಗಿತ್ತು. ಕಾಂಗ್ರೆಸ್‌ ಸರ್ಕಾರ ರೂಪಿಸಿದ್ದ ನಿಯಮಾವಳಿಯನ್ನು ಈಗಿನ ಸಚಿವ ಉಮೇಶ್‌ ಕತ್ತಿ ಪುನರುಚ್ಚರಿಸಿದ್ದಾರೆ. ನಿಯಮ ರೂಪಿಸಿದಾಗ ಕಾಂಗ್ರೆಸ್‌ನವರು ಪ್ರಜ್ಞಾವಸ್ಥೆಯಲ್ಲಿ ಇರಲಿಲ್ಲವೇ?’ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಪ್ರಶ್ನಿಸಿದರು.

‘ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್‌ ನಡುವೆ ಮುಸುಕಿನ ಗುದ್ದಾಟ ಇದೆ. ಆ ಕಾರಣಕ್ಕೆ ಸಿದ್ದರಾಮಯ್ಯ ನವದೆಹಲಿಗೆ ತೆರಳಿರಬಹುದು’ ಎಂದು ಉತ್ತರಿಸಿದರು.

ಕಾಂಗ್ರೆಸ್‌ನವರಿಗೆ ನಾಚಿಕೆಯಾಗಬೇಕು’: ‘ಅರಾಜಕತೆ ಸೃಷ್ಟಿ ಸಂಚಿನಲ್ಲಿ ಭಾಗಿಯಾಗಿದ್ದರು ಎಂಬ ಮಾಹಿತಿ ಆಧರಿಸಿ ದಿಶಾ ರವಿ ಅವರನ್ನು ಬಂಧಿಸಲಾಗಿದೆ. ಅರಾಜಕತೆ ಹುಟ್ಟುಹಾಕುವುದು ಪ್ರಜಾಪ್ರಭುತ್ವದ ಲಕ್ಷಣವೇ? ಕಾಂಗ್ರೆಸ್‌ನವರಿಗೆ ನಾಚಿಕೆಯಾಗಬೇಕು’ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಕುಹಕವಾಡಿದರು.

‘ಜ.26ರಂದು ಏನೇನಾಗುತ್ತೆ, ಅದರ ಮುಂದೆ ಏನೇನು ಮಾಡಬೇಕು ಎಂಬ ‘ಆಕ್ಷನ್‌ ಪ್ಲಾನ್‌’ ಸಂಚಿನ ಭಾಗವಾಗಿತ್ತು. ದಿಶಾರವಿ ಹೆಸರು ಈ ಹಿಂದೆ ಯಾರಿಗೆ ಗೊತ್ತಿತ್ತು? ನಿಮಗೆ ಸಿ.ಟಿ.ರವಿ ಗೊತ್ತಿತ್ತು. ಆ ಹೆಸರು ಈಗ ಚರ್ಚೆಗೆ ಬಂದಿದೆ, ವೈಭವೀಕರಿಸಿ ಮಾತನಾಡುತ್ತಿದ್ದಾರೆ’ ಎಂದು ವ್ಯಂಗ್ಯವಾಡಿದರು.

‘ಬಿಂದ್ರನ್‌ ವಾಲೆಗೆ ಬೆಂಬಲ ಕೊಟ್ಟಿದ್ದಕ್ಕೆ ಇಂದಿರಾಗಾಂಧಿ, ಎಲ್‌ಟಿಟಿಇ ಬೆಂಬಲಿಸಿ ಹಾವು–ಏಣಿ ಆಡಿದ ಕಾರಣಕ್ಕೆ ರಾಜೀವ್‌ ಗಾಂಧಿ ಬಲಿಯಾದರು ಎಂಬುದನ್ನು ಕಾಂಗ್ರೆಸ್‌ನವರು ನೆನಪಿಟ್ಟುಕೊಳ್ಳಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.