ಕಡೂರು: ತಾಲ್ಲೂಕಿನ ಬೀರೂರು ಹೋಬಳಿಯ ಯರೇಹಳ್ಳಿ ಗ್ರಾಮದಲ್ಲಿ ಜಮೀನು ವಿವಾದದ ಹಿನ್ನೆಲೆಯಲ್ಲಿ ಬಹಿಷ್ಕಾರ ಹಾಕಿರುವ ಪ್ರಕರಣಕ್ಕೆ ಸಂಬಂಧಿಸಿ ಗ್ರಾಮದಲ್ಲಿ ಮಂಗಳವಾರ ಬೀರೂರು ಸಿಪಿಐ, ಪಿಎಸ್ಐ ಮತ್ತು ಕಡೂರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಅಧಿಕಾರಿ ನೇತೃತ್ವದಲ್ಲಿ ಶಾಂತಿ ಸಭೆ ನಡೆಯಿತು.
2021ರಲ್ಲಿ ಕಡೂರು ತಾಲ್ಲೂಕಿನ ಗ್ರಾಮವೊಂದರ ಬಾಲಕಿ ಮತ್ತು ದೊಡ್ಡಘಟ್ಟದ ಯುವಕನ ನಡುವೆ ಪ್ರೀತಿ ಬೆಳೆದು ವಿವಾಹ ನಡೆದಿತ್ತು. ಬಳಿಕ, ಈ ವಿಷಯ ಠಾಣೆ ಮೆಟ್ಟಿಲೇರಿ ಅಲ್ಲಿ ಬಾಲ್ಯವಿವಾಹ ಕಾಯ್ದೆಯಡಿ ಯುವಕನ ವಿರುದ್ಧ ಪ್ರಕರಣವೂ ದಾಖಲಾಗಿತ್ತು. ಈ ವಿಷಯವನ್ನು ಯರೇಹಳ್ಳಿಯ ಅಂಗನವಾಡಿ ಕಾರ್ಯಕರ್ತೆ ತೇಜಸ್ವಿನಿ ಅಧಿಕಾರಿಗಳ ಗಮನಕ್ಕೆ ತಂದಿದ್ದರು ಎಂಬ ಕಾರಣದಿಂದ ಕುಟುಂಬಕ್ಕೆ ಬಹಿಷ್ಕಾರ ಹಾಕಲಾಗಿದೆ ಎಂದು ತೇಜಸ್ವಿನಿ ಅವರ ಅತ್ತೆ ಸೋಮಮ್ಮ ಗ್ರಾಮಸ್ಥರ ವಿರುದ್ಧ ಬೀರೂರು ಠಾಣೆಯಲ್ಲಿ ದೂರು ನೀಡಿದ್ದರು.
ಈ ಸಂಬಂಧ ಬೀರೂರು ಸಿಪಿಐ ಎಸ್.ಎನ್.ಶ್ರೀಕಾಂತ್, ಪಿಎಸ್ಐ ತಿಪ್ಪೇಶ್ ಮತ್ತು ಸಿಡಿಪಿಒ ಶಿವಪ್ರಕಾಶ್ ಮಂಗಳವಾರ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಬಳಿಕ, ಗ್ರಾಮಸ್ಥರು ಮತ್ತು ತೇಜಸ್ವಿನಿ ಕುಟುಂಬದವರ ನಡುವೆ ಗ್ರಾಮದ ಶಾಲೆಯ ಆವರಣದಲ್ಲಿ ಶಾಂತಿಸಂಧಾನ ಸಭೆ ನಡೆಸಲಾಯಿತು.
ಗ್ರಾಮದಲ್ಲಿ ಜಮೀನು ಹಂಚಿಕೆ ವಿಷಯವಾಗಿ ಗ್ರಾಮಸ್ಥರಿಗೂ ಮತ್ತು ಸೋಮಮ್ಮ ಅವರಿಗೂ ತಿಕ್ಕಾಟವಿತ್ತು. ಬಾಲಕಿಯ ವಿವಾಹ ವಿಷಯದಲ್ಲಿ ಕಾರ್ಯಕರ್ತೆ ಯಾರಿಗೂ ಮಾಹಿತಿ ನೀಡಿಲ್ಲ ಮತ್ತು ಅವರನ್ನು ಅಧಿಕಾರಿಗಳು ಸ್ಥಳ ಪರಿಶೀಲನೆಗೂ ಕರೆದಿರಲಿಲ್ಲ. ಬಗರ್ಹುಕುಂ ಜಮೀನು ಹಂಚಿಕೆ ಸಂಬಂಧಿಸಿ ಇದ್ದ ಮುನಿಸನ್ನು ಈ ರೀತಿ ಬಿಂಬಿಸಲಾಗಿದೆ ಎಂಬುದು ಸಭೆಯಲ್ಲಿ ಬಹಿರಂಗಗೊಂಡಿತು.
ಬೀರೂರು ಸರ್ಕಲ್ ಇನ್ಸ್ಪೆಕ್ಟರ್ ಎಸ್.ಎನ್.ಶ್ರೀಕಾಂತ್ ಮಾತನಾಡಿ, ‘ಬಹಿಷ್ಕಾರ ಅಥವಾ ದಂಡ ವಿಧಿಸುವ ಅಧಿಕಾರ ಗ್ರಾಮಸ್ಥರಿಗೆ ಇಲ್ಲ ಹಾಗೂ ಇದು ಕಾನೂನು ವಿರೋಧಿ ಕೃತ್ಯವಾಗಿರುತ್ತದೆ. ಇಂಥ ಪ್ರಕರಣ ನಡೆದರೆ ಕಾನೂನು ಕ್ರಮ ಜರುಗಿಸಬೇಕಾಗುತ್ತದೆ’ ಎಂದು ಗ್ರಾಮಸ್ಥರಿಗೆ ಎಚ್ಚರಿಸಿದರು.
ಸಿಡಿಪಿಒ ಶಿವಪ್ರಕಾಶ್ ಮಾತನಾಡಿ, ಬಾಲ್ಯವಿವಾಹ ಮತ್ತು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗುವುದು ತೀವ್ರತರವಾದ ಅಪರಾಧವಾಗಿದೆ. ಇಂಥ ವಿಷಯಗಳನ್ನು ಇಲಾಖೆಯ ಗಮನಕ್ಕೆ ತರಬೇಕು. ಬಹಿಷ್ಕಾರ ಎನ್ನುವುದು ಸಮಾಜ ವಿರೋಧಿ ನಡೆಯಾಗಿದೆ. ಈ ವಿಷಯವಾಗಿ ಗ್ರಾಮಸ್ಥರು ಎಚ್ಚರಿಕೆಯಿಂದ ಇರಬೇಕು ಎಂದು ತಿಳಿಸಿ, ಕಾರ್ಯಕರ್ತೆಯನ್ನು ಘಟನೆಯ ವಿಷಯವಾಗಿ ವಿಚಾರಿಸಿದರು.
ತಮ್ಮನ್ನು ಬಾಲ್ಯವಿವಾಹದ ಪ್ರಕರಣದಲ್ಲಿ ಯಾರನ್ನೂ ಗುರುತಿಸಲು ಕರೆದೊಯ್ದಿರಲಿಲ್ಲ. ಈ ವಿಷಯವಾಗಿ ಯಾರಿಗೂ ಮಾಹಿತಿ ನೀಡಿಲ್ಲ ಎಂದು ತೇಜಸ್ವಿನಿ ತಿಳಿಸಿದರು.
ಗ್ರಾಮಸ್ಥರಾದ ವೆಂಕಟೇಶ್ ಮತ್ತು ಲೋಕೇಶ್ ಮಾತನಾಡಿ, ‘ಇಲ್ಲಿ ಯಾರಿಗೂ ಬಹಿಷ್ಕಾರ ಹಾಕಿಲ್ಲ. ಕಾರ್ಯಕರ್ತೆ ಮತ್ತು ಅವರ ಕುಟುಂಬದವರೇ ಸುಳ್ಳು ಹೇಳಿಕೆ ನೀಡಿದ್ದಾರೆ. ಅವರ ಪತಿಯ ವಿರುದ್ಧವೇ ಹಲ್ಲೆ ಪ್ರಕರಣ ದಾಖಲಾಗಿದೆ. ಅತ್ತೆ ಸೋಮಮ್ಮ ಜಮೀನು ವಿಚಾರವಾಗಿ ಇದ್ದ ವಿಷಯಕ್ಕೆ ಬಹಿಷ್ಕಾರದ ಬಣ್ಣ ಹಚ್ಚಿದ್ದಾರೆ. ಅಗತ್ಯವಿದ್ದರೆ ಅಧಿಕಾರಿಗಳು ಅವರ ಮನೆ ಬಳಿ ಪರಿಶೀಲನೆ ನಡೆಸಲಿ, ನಾವು ಅವರಿಗೆ ತೊಂದರೆ ನೀಡಿದ್ದರೆ ಕ್ರಮವಹಿಸಲಿ’ ಎಂದು ಹೇಳಿದರು.
ನಂತರ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ, ಸಮಾಧಾನಕರ ವಾತಾವರಣ ಇರುವುದನ್ನು ದೃಢ ಪಡಿಸಿದರು.
ಈ ಸಂದರ್ಭದಲ್ಲಿ ಬೀರೂರು ಪಿಎಸ್ಐ ತಿಪ್ಪೇಶ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಕಚೇರಿಯ ಅನಿತಾ, ಗ್ರಾಮಸ್ಥರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.