ADVERTISEMENT

ಅತಂತ್ರ ಪ.ಪಂ ಅಧ್ಯಕ್ಷರ ಆಯ್ಕೆ ಅತಂತ್ರ!

15ರಂದು ಪಟ್ಟಣ ಪಂಚಾಯಿತಿ ಅಧ್ಯಕ್ಷರ ಚುನಾವಣೆ

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2014, 6:05 IST
Last Updated 12 ಮಾರ್ಚ್ 2014, 6:05 IST

ನರಸಿಂಹರಾಜಪುರ: ಇಲ್ಲಿನ ಪಟ್ಟಣ ಪಂಚಾಯಿತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆಯು ಇದೇ 15ರ ಶನಿವಾರ ನಡೆಯಲಿದೆ. ಪಟ್ಟಣ ಪಂಚಾಯಿತಿ ಚುನಾವಣೆ ನಡೆದು ಫಲಿತಾಂಶ ಪ್ರಕಟ­ವಾಗಿ (ಮಾ. 11ಕ್ಕೆ) ಒಂದು ವರ್ಷವಾಗಿದೆ.

ಇಲ್ಲಿನ ಪ.ಪಂ 11 ಸದಸ್ಯರಿದ್ದಾರೆ, ಇದರಲ್ಲಿ ಕಾಂಗ್ರೆಸ್ 4, ಬಿಜೆಪಿ 4, ಜೆಡಿಎಸ್ 2 ಹಾಗೂ ಪಕ್ಷೇತರ 1 ಸದಸ್ಯರಿದ್ದು ಯಾವು­ದೇ ಪಕ್ಷಕ್ಕೂ ಸ್ಪಷ್ಟ ಬಹುಮತವಿಲ್ಲ. ಕಳೆದ ವರ್ಷ ಚುನಾವಣೆ ಫಲಿತಾಂಶ ಪ್ರಕಟವಾದಾಗ ಕಾಂಗ್ರೆಸ್, ಜೆಡಿಎಸ್ ಜತೆ ಗೂಡಿ ಅಧಿಕಾರದ ಚುಕ್ಕಾಣಿ ಹಿಡಿಯಬಹುದೆಂದು ಭಾವಿಸಲಾಗಿತ್ತು. ಪ್ರಸ್ತುತ ಪರಿಸ್ಥಿತಿ ಬದಲಾಗಿದೆ. ಇಲ್ಲಿನ ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಹಾಗೂ ಉಪಾಧ್ಯಕ್ಷ ಸ್ಥಾನ ಬಿಸಿಎಂ (ಎ)ಗೆ ಮೀಸ­ಲಿಡ­ಲಾಗಿದೆ. ಯಾರೇ ಅಧಿಕಾರದ ಗದ್ದುಗೆ ಏರಬೇಕಾದರೂ ಜೆಡಿ­ಎಸ್ ನಿರ್ಣಾಯಕ ಪಾತ್ರ ವಹಿಸಲಿದೆ.

ಪ್ರಸ್ತುತ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆ­ಸ್‌ನ ಲೇಖಾ­ವಸಂತ್ ಹಾಗೂ ಚುನಾ­ವಣೆ ಸಂದರ್ಭ­ದಲ್ಲಿ ಕಾಂಗ್ರೆ­ಸ್ ನಿಂದ ಟಿಕೆಟ್ ದೊರೆ­ಯದೆ ಪಕ್ಷೇತರ ಅಭ್ಯರ್ಥಿಯಾಗಿ ಗೆಲುವು ಸಾಧಿಸಿರುವ ಸಮೀರಾ­ನಹೀಂ ನಡುವೆ ತೀವ್ರ ಪೈಪೋಟಿ ಏರ್ಪ­ಟ್ಟಿದೆ. ಕಾಂಗ್ರೆಸ್ ನಲ್ಲಿ ‘ಮನೆಯೊಂದು ಮೂರು­ಬಾಗಿಲು’ ಎಂಬ ಸ್ಥಿತಿ ನಿರ್ಮಾಣವಾಗಿದ್ದು ಅಧ್ಯಕ್ಷರ ಆಯ್ಕೆಗೆ ಸಂಬಂಧಿಸಿದಂತೆ ಒಮ್ಮತದ ಅಭಿಪ್ರಾಯ­ವಿಲ್ಲದಾಗಿದೆ ಎಂಬ ಮಾತು ಪಟ್ಟಣದ ಬಹುತೇಕ ನಾಗರಿಕರಲ್ಲಿ ಕೇಳಿ ಬರುತ್ತಿದೆ.

ಈ ನಡುವೆ, ‘ನಾನು ಇಂದಿಗೂ ಕಾಂಗ್ರೆಸ್ ನಲ್ಲಿಯೇ ಇದ್ದು, ನನಗೂ ಅಧ್ಯಕ್ಷ ಸ್ಥಾನಕ್ಕೆ ಅವಕಾಶ ಮಾಡಿಕೊಡ ಬೇಕು’ ಎಂದು ಸಮೀರಾ ಪಟ್ಟುಹಿಡಿದಿದ್ದಾರೆನ್ನಲಾಗಿದೆ. ಜೆಡಿಎಸ್ ಸದಸ್ಯರ ಬೆಂಬಲವನ್ನು ಇವರು ಯಾಚಿಸಿದ್ದಾರೆಂದು ಮೂಲಗಳು ಖಚಿತ ಪಡಿಸಿವೆ. ಅಧ್ಯಕ್ಷರ ಆಯ್ಕೆ ಚುನಾವಣೆ ನಡೆಯದೆ ಸರ್ವಾನು­ಮತದಿಂದಾಗ ಬೇಕೆಂಬ ಇಂಗಿತವನ್ನೂ ಕಾಂಗ್ರೆಸ್ ನಾಯಕರು ಹೊಂದಿದ್ದಾರೆನ್ನಲಾಗಿದೆ. ಪರಿಸ್ಥಿತಿ ಯನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವ ಬಿಜೆಪಿಯ ಮುಖಂಡರು ತಾವು ಸಹ ರಾಜಕೀಯ ದಾಳ ಬಳಸಲು ಸನ್ನದ್ದಾರಾಗಿದ್ದಾರೆ.

ಲೋಕಸಭೆಯ ಚುನಾವಣೆಯು ಸಮೀಪಿಸುತ್ತಿರುವುದರಿಂದ ಮತಬ್ಯಾಂಕ್ ನತ್ತ ಎಲ್ಲ ಪಕ್ಷದ ಮುಖಂಡರು ತಮ್ಮ ಚಿತ್ತವನ್ನು ಹರಿಸಿದ್ದಾರೆ. ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಹೊಂದಾ­ಣಿಕೆಯಾದರೆ ಅಧ್ಯಕ್ಷ ಸ್ಥಾನ ಕಾಂಗ್ರೆಸ್ ಹಾಗೂ ಉಪಾಧ್ಯಕ್ಷ ಸ್ಥಾನ ಜೆಡಿಎಸ್ ಗೆ ಒಲಿಯಲಿದೆ. ಇಲ್ಲವಾದಲ್ಲಿ ಅನಿರೀಕ್ಷಿತ ಫಲಿತಾಂಶ ಬರುವ ಸಾಧ್ಯತೆಯಿದೆ. ಒಟ್ಟಿನಲ್ಲಿ ಅಧ್ಯಕ್ಷ, ಉಪಾಧ್ಯಕ್ಷ ಆಯ್ಕೆ ಕುತೂಹಲ ಕೆರಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.