ADVERTISEMENT

ದೇಗುಲಗಳು ಸಾಮರಸ್ಯದ ಶಕ್ತಿಕೇಂದ್ರಗಳಾಗಲಿ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2011, 8:25 IST
Last Updated 17 ಫೆಬ್ರುವರಿ 2011, 8:25 IST

ಮೊಳಕಾಲ್ಮುರು: ದೇವಸ್ಥಾನಗಳು ಕೇವಲ ಪ್ರಾರ್ಥನೆ ಸಲ್ಲಿಸುವ ಸ್ಥಳವಾಗದೇ ಸಾಮರಸ್ಯ ಬೆಸೆಯುವ ಶಕ್ತಿಕೇಂದ್ರವಾಗಿ ಹೊರಹೊಮ್ಮಬೇಕು ಎಂದು ಶಾಸಕ ಎನ್.ವೈ. ಗೋಪಾಲಕೃಷ್ಣ ಹೇಳಿದರು.ಪಟ್ಟಣದಲ್ಲಿ ಬುಧವಾರ ಶಿರಡಿ ದ್ವಾರಕರಾಮಯಿ ಟ್ರಸ್ಟ್ ನೂತನವಾಗಿ ನಿರ್ಮಿಸಿರುವ ಶಿರಡಿ ಸಾಯಿಬಾಬಾ ದ್ವಾರಕಾ ಮಂದಿರ ಲೋಕಾರ್ಪಣೆ ಕಾರ್ಯಕ್ರಮದಲ್ಲಿ  ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ದೇವರ ಹೆಸರಿನಲ್ಲಿ ವಂತಿಕೆ ಸಂಗ್ರಹಿಸುವುದು, ಜಾತಿ, ಸ್ವಾರ್ಥ ರಾಜಕೀಯ ಮಾಡುವುದು ಹೆಚ್ಚುತ್ತಿದೆ. ಸ್ವಾರ್ಥವನ್ನು ಬದಿಗೊತ್ತಿ ಸಾರ್ವಜನಿಕ ಸೇವೆ ಮಾಡಬೇಕು.ನೀತಿ, ಶಿಸ್ತು ಅಳವಡಿಸಿಕೊಂಡಲ್ಲಿ ಮಾತ್ರ ಆಧ್ಯಾತ್ಮಿಕ ಕ್ಷೇತ್ರಕ್ಕೆ ಕಾಲಿಡಬೇಕು. ರಾಜಕೀಯ ಭಾಷಣ ಮಾಡಿದಷ್ಟು ಸುಲಭವಲ್ಲ ಆಧ್ಯಾತ್ಮಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸುವುದು ಎಂದು ಹೇಳಿದರು.

ನೇತೃತ್ವ ವಹಿಸಿ ಮಾತನಾಡಿದ ಮೈಸೂರಿನ ಸಾಯಿ ಸೇವಾ ಟ್ರಸ್ಟ್ ಸಂಸ್ಥಾಪಕ ಸಾಯಿ ಚಂದ್ರಶೇಖರ್ ರಾವ್‌ಬಾಬಾ ಮಾತನಾಡಿ, ‘ಮಾನವ ಜನ್ಮವನ್ನು ಪ್ರತಿದಿನ ಉತ್ತಮ ಕಾರ್ಯಗಳನ್ನು ಮಾಡುವ ಮೂಲಕ ಮುಕ್ತಿಯ ಕಡೆಗೆ ಕರೆದೊಯ್ಯಬೇಕು. ಪ್ರಪಂಚದ ಎಲ್ಲಾ ಧರ್ಮಗಳ ಗ್ರಂಥಗಳು ಒಳ್ಳೆಯದನ್ನು ಸ್ವೀಕರಿಸಿ ಕೆಟ್ಟದನ್ನು ತ್ಯಜಿಸಿ ಎಂದು ಹೇಳುತ್ತವೆ, ಇದನ್ನು ಅರಿತು ಜೀವನ ನಡೆಸಬೇಕು’ ಎಂದರು.

ತುಮಕೂರು ಜಿಲ್ಲಾ ಸೆಷನ್ ನ್ಯಾಯಾಧೀಶ ಜೆ.ವಿ. ಅಂಗಡಿ ಹಿರೇಮಠ್ ಮಾತನಾಡಿ, ಮೊಳಕಾಲ್ಮುರಿನಂತಹ ಹಿಂದುಳಿದ ಪ್ರದೇಶದಲ್ಲಿ ಇಂತಹ ಭವ್ಯ ದೇವಸ್ಥಾನ ನಿರ್ಮಿಸಿರುವುದು ಶ್ಲಾಘನೀಯ ಎಂದರು.ಇದೇ ವೇಳೆ ಟ್ರಸ್ಟ್‌ನ ಸಂಸ್ಥಾಪಕರಾದ ಎಂ.ಎಸ್. ಪ್ರಸನ್ನಕುಮಾರ್, ಎಂ.ಎಸ್. ಮಾರ್ಕಂಡೇಯ ಅವರನ್ನು ಸನ್ಮಾನಿಸಲಾಯಿತು.ಕೆ. ರಾಯಾಪುರ ಮಠದ ಶಿವಣ್ಣ ತಾತಾ, ಬ್ರಹ್ಮಗಿರಿ ಬೆಟ್ಟದ ಮಹಾದೇವಪ್ಪ ತಾತಾ, ತಹಶೀಲ್ದಾರ್ ರೇಣುಕಾಂಬಾ, ನ್ಯಾಯಾಧೀಶ ಕೆ. ಮಹಾದೇವ, ಪ.ಪಂ. ಅಧ್ಯಕ್ಷೆ ಸಮೀರಾನಾಜ್, ಉಪಾಧ್ಯಕ್ಷೆ ಅನ್ನಪೂರ್ಣಮ್ಮ, ಕೋದಂಡರಾಮಯ್ಯ, ಎನ್.ವಿ. ಮೃತ್ಯುಂಜಯ, ರಾಘವೇಂದ್ರ, ದೊಡ್ಡರಾಮಣ್ಣ, ವಿ. ಮಾರನಾಯಕ, ಆರ್.ಎಚ್. ಗಂಗಾಧರಪ್ಪ, ಸನಾವುಲ್ಲಾ,  ಫಾದರ್ ಆಲ್ಸಿನ್‌ಜೋಸೆಫ್, ಪಿ.ಕೆ. ಕುಮಾರಸ್ವಾಮಿ, ಸೂರ್ಯ ಅಂಜಿನಪ್ಪ  ವೇದಿಕೆಯಲ್ಲಿದ್ದರು.ಬಿ.ಜಿ. ಸೂರ್ಯನಾರಾಯಣ ಸ್ವಾಗತಿಸಿದರು, ಕೆ. ಶಾಂತವೀರಣ್ಣ  ಕಾರ್ಯಕ್ರಮ ನಿರೂಪಿಸಿದರು, ಎಂ.ಎನ್. ವಿಜಯಲಕ್ಷ್ಮೀ ವಂದಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.