ADVERTISEMENT

ಮೆಗಾ ಲೋಕ್ ಅದಾಲತ್‌ ಬಳಕೆಗೆ ಕರೆ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2013, 5:39 IST
Last Updated 24 ಸೆಪ್ಟೆಂಬರ್ 2013, 5:39 IST

ಹೊಸದುರ್ಗ: ರಾಜಿ ಸಂಧಾನದ ಮೂಲಕ ನ್ಯಾಯ ತೀರ್ಪು ನೀಡಲು ಬಳಕೆಗೆ ಬಂದಿರುವ ಮೆಗಾ ಲೋಕ್ ಅದಾಲತ್‌ ಅನ್ನು ಬಳಸಿಕೊಳ್ಳಬೇಕು ಎಂದು ಪಟ್ಟಣದ ಪ್ರಧಾನ ಸಿವಿಲ್‌ ನ್ಯಾಯಾಧೀಶ ಡಿ.ವೇಣುಗೋಪಾಲ್‌ ಸಲಹೆ ನೀಡಿದರು.

ತಾಲ್ಲೂಕಿನ ಕಾನೂನು ಸೇವಾ ಸಮಿತಿ ಹಾಗೂ ವಕೀಲರ ಸಂಘದ ವತಿಯಿಂದ ಸೋಮವಾರ ಆಯೋಜಿಸಿದ್ದ ಮೆಗಾ ಲೋಕ್ ಅದಾಲತ್‌ನ ಪ್ರಾರಂಭೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಹಿಂದಿನ ಕಾಲದಲ್ಲಿ ಗ್ರಾಮ ಸಭೆಗಳ ಮೂಲಕವೇ ಗ್ರಾಮದ ಹಿರಿಯರ ಸಮ್ಮುಖದಲ್ಲಿ ಪರಿಹಾರ ಕಂಡುಕೊಳ್ಳಲಾಗುತ್ತಿತ್ತು. ಆದರೆ ಪ್ರಸ್ತುತ ಈ ಪದ್ಧತಿ ಸಂಪೂರ್ಣ ಮರೆಯಾಗುತ್ತಿದ್ದು, ಎಲ್ಲಾ ಸಮಸ್ಯೆಗಳಿಗೂ ನ್ಯಾಯಾಲಯದ ಮೂಲಕವೇ ಪರಿಹಾರ ಕಂಡುಕೊಳ್ಳಲು ಜನರು ಮುಂದಾಗಿದ್ದಾರೆ ಎಂದರು.

ಇದರಿಂದ ನ್ಯಾಯಾಲಯಗಳಲ್ಲಿ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಇಂತಹ ಹೆಚ್ಚಿನ ಪ್ರಕರಣಗಳನ್ನು ಸಂಧಾನದ ಮೂಲಕ ಬಗೆಹರಿಸಲು ಮೆಗಾ ಲೋಕ್ ಅದಾಲತ್‌ ವ್ಯವಸ್ಥೆಯನ್ನು ಅನುಷ್ಠಾನ ಗೊಳಿಸಲಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವಕೀಲರ ಸಂಘದ ಅದ್ಯಕ್ಷ ಬಿ.ಜೆ.ಭರತ್‌, ವಕೀಲರಾದ ಡಿ.ವಿ.ಅಂಜನ್‌ಕುಮಾರ್‌ ಹಾಗೂ ಸಿ.ಬಸವರಾಜಪ್ಪ ಮಾತನಾಡಿದರು.

ಹೆಚ್ಚುವರಿ ಸಿವಿಲ್‌ ನ್ಯಾಯಾಧೀಶ ಮಹಾಂತೇಶ್‌ ಸಂಗಪ್ಪ ದರಗದ, ವಕೀಲ ಸಂಘದ ಕಾರ್ಯದರ್ಶಿ ಎನ್‌.ಗುರುಬಸಪ್ಪ, ನಿರಂಜನಮೂರ್ತಿ, ಎಚ್‌.ಎಸ್.ರುಕ್ಮಿಣಿ, ಕಂಬೇಶ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.