ಚಿತ್ರದುರ್ಗ: ಇಲ್ಲಿನ ಅಂಬೇಡ್ಕರ್ ನಗರದಲ್ಲಿ ಮೈಲಾರಲಿಂಗೇಶ್ವರ ದೋಣಿ ಪೂಜಾ ಮಹೋತ್ಸವ ಶನಿವಾರ ವಿಜೃಂಭಣೆಯಿಂದ ನಡೆಯಿತು. ಕಾರ್ಯಕ್ರಮದಲ್ಲಿ ಗೊರಪ್ಪರು ತ್ರಿಶೂಲವನ್ನು ನಾಲಿಗೆಗೆ ಕೈಗಳಿಗೆ ಚುಚ್ಚಿಕೊಳ್ಳುವ ಪವಾಡಗಳು ಜರುಗಿದವು. ಗೊರಪ್ಪರ ಕುಣಿತ, ಡೊಳ್ಳು ವಾದ್ಯ, ಡಮರು ಕಾಳಗ, ಕಾಯಿಕೋಲು ದೀಪ ಹಚ್ಚುವುದು ವಿವಿಧ ಆಚರಣೆ ನಡೆದವು. ಸುಲಿದ ಬಾಳೆಹಣ್ಣು, ತುಪ್ಪ, ಹಾಲು, ಮೊಸರು, ಹೊಳಿಗೆಯನ್ನು ದೋಣಿಗಳಿಗೆ ಹಾಕಿ ಭಕ್ತರು ಭಕ್ತಿ ಸಮರ್ಪಿಸಿ ವಿಶೇಷ ಪೂಜೆ ಸಲ್ಲಿಸಿದರು.
ಮಹಿಳೆಯರು, ಯುವತಿಯರು ಮೈಲಾರಲಿಂಗೇಶ್ವರ ದೇವರಿಗೆ ಅರತಿ ಬೆಳಗಿದರು. ಜಿಲ್ಲೆಯ ಗೊರಪ್ಪರ ನೃತ್ಯಗಳು, ವಿವಿಧ ಪವಾಡಗಳು, ಗೆಜ್ಜೆ ಕುಣಿತ ಮಹೋತ್ಸವದ ಆಕರ್ಷಣೆಯಾಗಿದ್ದವು. ಮಹೋತ್ಸವ ಅಂಗವಾಗಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ರಂಗೋಲಿ ಸ್ಪರ್ಧೆ ಆಯೋಜಿಸಲಾಗಿತ್ತು. ನಗರಸಭೆ ಮಾಜಿ ಅಧ್ಯಕ್ಷ ಡಿ.ಎನ್. ಮೈಲಾರಪ್ಪ ಇತರರು ಹಾಜರಿದ್ದರು.
ಬಡ್ತಿ ನೀಡಲು ಆಗ್ರಹ
ಪೌರಕಾರ್ಮಿಕರಿಗೆ ಮತ್ತು ‘ಡಿ’ ವೃಂದ ನೌಕರರಿಗೆ ಮುಂದಿನ ಹುದ್ದೆಗೆ ಬಡ್ತಿ ನೀಡಲು ಜಿಲ್ಲಾಡಳಿತ ಅನಗತ್ಯ ವಿಳಂಬ ಮಾಡುತ್ತಿದೆ ಎಂದು ಬಿಜೆಪಿ ನಿವೃತ್ತ ಸರ್ಕಾರಿ ನೌಕರರ ಪ್ರಕೋಷ್ಠ ವಿಭಾಗ ಆರೋಪಿಸಿದೆ.ಪೌರಕಾರ್ಮಿಕರು ಹಾಗೂ ಲೋಡರಸ್ ಹುದ್ದೆಯಿಂದ ಸ್ಯಾನಿಟರಿ ಸೂಪರ್ವೈಸರ್ ಹುದ್ದೆಗೆ ಬಡ್ತಿ ನೀಡಬೇಕು. ‘ಡಿ’ ವೃಂದದ ನೌಕರರಿಗೆ ದ್ವಿತೀಯದರ್ಜೆ ಸಹಾಯಕ ಹುದ್ದೆಗಳಿಗೆ ಬಡ್ತಿ ನೀಡಬೇಕು ಎಂದು ಪ್ರಕೋಷ್ಠದ ರಾಜ್ಯ ಸಮಿತಿ ಸದಸ್ಯ ಎಲ್. ನಾರಾಯಣಾಚಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಗಳು ಈ ವೃಂದದ ನೌಕರರಿಗೆ ಬಡ್ತಿ ನೀಡಿದ್ದಾರೆ. ಬಡ್ತಿ ನೀಡುವ ಕುರಿತ ನಿಯಮಗಳನ್ನು ಜಾರಿಗೊಳಿಸಿ ಆರು ವರ್ಷಗಳು ಕಳೆದಿದ್ದರೂ ಈ ಕೆಳದರ್ಜೆ ನೌಕರರ ಬಗ್ಗೆ ಚಿತ್ರದುರ್ಗ ಜಿಲ್ಲಾಡಳಿತ ಕಾಳಜಿ ವಹಿಸದಿರುವುದು ಶೋಚನೀಯ ಸಂಗತಿ ಎಂದು ತಿಳಿಸಿದ್ದಾರೆ.ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕರು 2008ರ ಜನವರಿ 5ರಂದು ಮತ್ತು 2010ರ ಜೂನ್ 29ರಂದು ಪತ್ರಗಳನ್ನು ಬರೆದು ನಿರ್ದೇಶನ ನೀಡಿ ಬಡ್ತಿ ನೀಡಲು ಸೂಚಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ದೂರಿದ್ದಾರೆ.
ಅಂತಿಮ ಜೆಷ್ಠತಾ ಪಟ್ಟಿಯನ್ನು ಪ್ರಚುರಪಡಿಸುವ ಮೂಲಕ ಜಿಲ್ಲಾಡಳಿತ ನೌಕರರ ಬಗ್ಗೆ ಕಾಳಜಿ ವಹಿಸಿ ಅನೇಕ ವರ್ಷಗಳಿಂದ ಬಡ್ತಿಗೆ ವಂಚಿತರಾಗಿರುವ ಅರ್ಹ ಪೌರಕಾರ್ಮಿಕರು ಹಾಗೂ ಡಿ ದರ್ಜೆ ನೌಕರರಿಗೆ ಬಡ್ತಿ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.