ಚಿಕ್ಕಜಾಜೂರು: ಹೊಳಲ್ಕೆರೆ ತಾಲ್ಲೂಕಿನ ಹನುಮನಕಟ್ಟೆ -ಕೇಶವಾಪುರ ಗ್ರಾಮ ದೇವತೆ ಕೆಂಚಮ್ಮ ದೇವಿಯ ರಥೋತ್ಸವ ಶುಕ್ರವಾರ ಅದ್ದೂರಿಯಾಗಿ ನಡೆಯಿತು.
ಬೆಳಿಗ್ಗೆ ದೇವಿ ಜತೆ ಬಿಜ್ಜನಾಳು ಗ್ರಾಮದ ಆಂಜನೇಯ ಸ್ವಾಮಿ ಮತ್ತು ನೆಲ್ಲಿಕಟ್ಟೆಯ ಕರಿಯಮ್ಮ ದೇವಿಯರ ಉತ್ಸವ ಮೂರ್ತಿಗಳನ್ನು ಅಲಂಕರಿಸಿ ದೇವಾಲಯದ ಮುಂಭಾಗದಲ್ಲಿರುವ ಕಲ್ಲಿನ ಬೃಹತ್ ಉಯ್ಯಾಲೆ ಕಂಬದಲ್ಲಿ ಕೂರಿಸಿ ತೂಗಲಾಯಿತು.
ನಂತರ ದೇವರ ಮೂರ್ತಿಗಳನ್ನು ಹೂವಿನಿಂದ ಅಲಂಕರಿಸಲ್ಪಟ್ಟ ರಥದಲ್ಲಿ ಕೂರಿಸಿ ರಥಕ್ಕೆ ದೊಡ್ಡೆಡೆ ಸೇವೆ ಮಾಡಲಾಯಿತು. ಈ ರೀತಿ ಒಂದೇ ರಥದಲ್ಲಿ ಒಂದಕ್ಕಿಂತ ಹೆಚ್ಚು ದೇವತೆಗಳನ್ನು ಇರಿಸಿ ರಥೋತ್ಸವ ನಡೆಯುವುದು ಇಲ್ಲಿನ ವಿಶೇಷ ಸಂಪ್ರದಾಯ.
ನಂತರ ಮಹಾಮಂಗಳಾರತಿ ಮಾಡುತ್ತಲೇ ನೆರೆದಿದ್ದ ಭಕ್ತರು ರಥವನ್ನು ಎಳೆದು ಪುನೀತರಾದರು.ಚಿಕ್ಕಜಾಜೂರು ಪೊಲೀಸ್ ಸಿಬ್ಬಂದಿ ಬಿಗಿ ಬಂದೋಬಸ್ತ್ ಮಾಡಿದ್ದರು. ಶನಿವಾರ ಸಂಜೆ ದೇವಿಯ ಸಿಡಿ ಉತ್ಸವ ನಡೆಯಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.