ಚಿತ್ರದುರ್ಗ: ಇಲ್ಲಿನ ಜಿಲ್ಲಾ ಆಸ್ಪತ್ರೆಯ ಯುರಾಲಾಜಿಸ್ಟ್ ಕೊಠಡಿಯಲ್ಲಿ ಶನಿವಾರ ಮೇಲ್ಛಾವಣಿಯ ಸಿಮೆಂಟ್ ಚಪ್ಪಡಿ ದಿಢೀರನೇ ಕುಸಿದಿದ್ದು, ಅದೃಷ್ಟವಶಾತ್ ಕೆಳಗೆ ಮಲಗಿದ್ದ ರೋಗಿಯೊಬ್ಬರು ಬಚಾವ್ ಆಗಿದ್ದಾರೆ.
ಜಿಲ್ಲೆಯ ಪರಶುರಾಂಪುರದ ಹನುಮಂತರಾಯ ಎಂಬುವವರು ಹಸು ತುಳಿತಕ್ಕೆ ಒಳಗಾಗಿ ಕಾಲಿಗೆ ಪೆಟ್ಟು ಮಾಡಿಕೊಂಡು ಇಲ್ಲಿ 15 ದಿನಗಳಿಂದ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಮೇಲೆ ಚಪ್ಪಡಿ ಬಿದ್ದಿದೆ.
ಬಿದ್ದಿರುವ ಚಪ್ಪಡಿ ಕೆಳಭಾಗದಲ್ಲಿನ ಮಂಚದ ಮೇಲೆ ಸದಾ ಮಲಗುತ್ತಿದ್ದ ಅವರು ಮಧ್ಯಾಹ್ನ ತಲೆ ಹಾಗೂ ಕಾಲು ಆಚೆ-ಈಚೆ ಮಾಡಿಕೊಂಡು ಮಲಗಿದ್ದರ ಪರಿಣಾಮ ಕಾಲಿನ ಮೇಲೆ ಚಪ್ಪಡಿ ಬಿದ್ದಿದ್ದು, ಮಂಚದ ಮೇಲೆಲ್ಲಾ ಚೆಲ್ಲಾಪಿಲ್ಲಿಯಾಗಿ ಚದುರಿದೆ. ಪುನ ಅದೇ ಕಾಲಿಗೆ ಸ್ವಲ್ಪ ಪೆಟ್ಟಾಗಿದೆ. ತಲೆಯ ಮೇಲೆ ಬಿದ್ದಿದ್ದರೆ ಹೆಚ್ಚಿನ ಅನಾವುತ ಸಂಭವಿಸುತ್ತಿತ್ತು ಎಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ.
ಅಕ್ಕಪಕ್ಕದಲ್ಲೂ ಹತ್ತಾರು ರೋಗಿಗಳು ಮಲಗಿದ್ದರು ಕೂಡ ಯಾರ ಮೇಲೂ ಬಿದ್ದಿಲ್ಲ. ಚಾವಣಿ ಕುಸಿತದಿಂದ ಗಾಬರಿಗೊಂಡ ಹನುಮಂತರಾಯ ಕುಂಟುತ್ತಲೇ ಹೊರಗೆ ಬರಲು ಯತ್ನಿಸಿದ್ದಾರೆ. ನಂತರ ಪುಡಿ ಪುಡಿಯಾದ ಸಿಮೆಂಟ್ ಸ್ಲ್ಯಾಬ್ಗಳನ್ನು ಸಿಬ್ಬಂದಿ ತೆರವುಗೊಳಿಸಿದ್ದಾರೆ. ಪೆಟ್ಟು ತಿಂದ ರೋಗಿಯ ಮಂಚವನ್ನು ಹಿಂದಕ್ಕೆ ಸ್ಥಳಾಂತರಿಸಲಾಗಿದೆ.
ಕೊಠಡಿಯ ಮೇಲ್ಛಾವಣಿ ಬಿರುಕು ಬಿಟ್ಟಿರುವುದಕ್ಕೆ ಕಿಟಕಿಗಳನ್ನು ತೆಗೆಯದೇ ಹಾಗೆಯೇ ಮುಚ್ಚಿರುವುದು ಪ್ರಮುಖ ಕಾರಣ. ಗಾಳಿಯಾಡದ ಕಾರಣ ಚಾವಣಿ ಹಂತ ಹಂತವಾಗಿ ಬಿರುಕು ಬಿಟ್ಟಿರಬಹುದು. ದುರಸ್ತಿ ಪಡಿಸದ ಕಾರಣ ಏಕಾಏಕಿ ಬಿದ್ದಿದೆ ಎಂದು ಅಲ್ಲಿದ್ದ ಕೆಲವರು ಅಭಿಪ್ರಾಯಪಟ್ಟಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.