ADVERTISEMENT

ಚಿತ್ರದುರ್ಗ: ಸತ್ತು ಮರಳಿದ ಸಣ್ಣೀರಜ್ಜನ ಸುತ್ತಲೂ ನಿಗೂಢತೆಯ ಪರದೆ

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2019, 9:17 IST
Last Updated 2 ನವೆಂಬರ್ 2019, 9:17 IST
ಚಳ್ಳಕೆರೆ ನಗರದ ಡಿವೈಎಸ್ಪಿ ಕಚೇರಿಯಲ್ಲಿ ಈರಜ್ಜ(74) ಮತ್ತು ಆತನ ಮಕ್ಕಳನ್ನು ಕರೆಸಿ ವಿಚಾರಣೆ ನಡೆಸಿದ ಪೋಲಿಸ್ ಅಧಿಕಾರಿಗಳು.
ಚಳ್ಳಕೆರೆ ನಗರದ ಡಿವೈಎಸ್ಪಿ ಕಚೇರಿಯಲ್ಲಿ ಈರಜ್ಜ(74) ಮತ್ತು ಆತನ ಮಕ್ಕಳನ್ನು ಕರೆಸಿ ವಿಚಾರಣೆ ನಡೆಸಿದ ಪೋಲಿಸ್ ಅಧಿಕಾರಿಗಳು.   

ಚಳ್ಳಕೆರೆ: ಸತ್ತು ಮರಳಿ ಬಂದ ಸಣ್ಣೀರಜ್ಜನ ಜೀವನ ಗಾಥೆ ಕೇಳಲು ಕೌತುಕವಾಗಿದ್ದರೂ ನೈಜ ಕಥೆಯ ಸುತ್ತಲೂ ನಿಗೂಢತೆಯ ಪರದೆ ಸುತ್ತುಕೊಂಡಂತಿದೆ. ಸತ್ತ ವ್ಯಕ್ತಿ ಮರಳಿ ಬರಲು ಸಾಧ್ಯವಿಲ್ಲ ಇದು ವಿಜ್ಞಾನದ ಸತ್ಯ. ಈರಜ್ಜನ ಬದುಕಿನ ಜೀವಂತಿಕೆಗೆ ಅವರ ಕುಟುಂಬವೇ ಸಾವಿನ ಕಥೆ ಹೆಣಿದಿರುವುದು ಕುತೂಹಲದ ಸಂಗತಿ. ಮತ್ತು ಜೋಗಿ ವೇಷದಲ್ಲಿ ಒಮ್ಮೊಮ್ಮೆ ಬಂದೋಗುತ್ತಿದ್ದ ಎಂಬ ಪತ್ನಿ ಈರಜ್ಜಿಯ(56) ಮಾತು ಈರಜ್ಜನ ಸಾವಿನ ಬಗ್ಗೆ ಅಸ್ಪಷ್ಟತೆ ಜತೆಗೆ ಅನುಮಾನವೂ ಮೂಡಿಸುವಂತಿದೆ.

ಸಂಬಂಧಿತ ಸುದ್ದಿ:ಸತ್ತ ಈರಣ್ಣ ಮರಳಿ ಬಂದ ಕಥೆ

ತಾಲ್ಲೂಕಿನ ಚಿತ್ರನಾಯಕನಹಳ್ಳಿ ಗ್ರಾಮದಲ್ಲಿ ತೋಟದ ಕೃಷಿಯಲ್ಲಿ ತೊಡಗಿದ್ದ ಕಾಡುಗೊಲ್ಲ ಬುಡಕಟ್ಟು ಸಮುದಾಯದ ಈರಜ್ಜ ಬಾಲ್ಯದಲ್ಲಿಯೇ ಜೋಗಿ ಪದಗಳನ್ನು ಗುನುಗಿಕೊಳ್ಳುವ ಹವ್ಯಾಸದ ಜತೆಗೆ ತಿರುಗಾಟದ ಪ್ರವೃತ್ತಿ ಹೊಂದಿದ್ದ ಎಂದು ಆತನ ಸಮಕಾಲೀನರು ಹೇಳುತ್ತಾರೆ.

ADVERTISEMENT

43 ವರ್ಷಗಳ ಹಿಂದೆ ತಾಲ್ಲೂಕಿನ ದಾಸರಹಳ್ಳಿ ಗ್ರಾಮದಲ್ಲಿ ಈರಮ್ಮ ಎಂಬುವರನ್ನು ಮದುವೆಯಾಗಿ ಸಂಸಾರವು ನಡೆಸಿದ್ದ ಈರಜ್ಜ ಅನಾರೋಗ್ಯದಿಂದ ಮೃತಪಟ್ಟಿದ್ದ ಎಂದು ಅವನ ಪತ್ನಿ ಈರಮ್ಮ ಮತ್ತು ತಮ್ಮ ಬೇವಿನಪ್ಪ ಆಸ್ಪಷ್ಟತೆಯ ಮಾಹಿತಿ ನೀಡುತ್ತಾರೆ.

40 ವರ್ಷಗಳ ಬಳಿ ಮರಳಿ ಬಂದ ಸುದ್ದಿ ತಾಲ್ಲೂಕಿನಾದ್ಯಂತ ಹರಡಿದ್ದ ಹಿನ್ನಲೆಯಲ್ಲಿ ಈರಜ್ಜ ಮತ್ತು ಆತನ ಮಕ್ಕಳನ್ನು ಬುಧವಾರ ಠಾಣೆಗೆ ಕರೆಯಿಸಿ ವಿಚಾರಿಸಿದಾಗ ಚಿತ್ರನಾಯಕಹಳ್ಳಿಯಲ್ಲಿ ಈರಮ್ಮನ ಜತೆ ಬದುಕು ಕಟ್ಟಿಕೊಂಡಿದ್ದೆ. ಮತ್ತು ಆನಾರೋಗ್ಯಕ್ಕೆ ಸಿಲುಕಿದ್ದೆ ನಂತರ ಏನಾಯ್ತೋ ಗೊತ್ತಿಲ್ಲ. ಅತ್ತೆ-ಮಾವನ ಹೆಸರು ಹೇಳುತ್ತಿಲ್ಲ. ಆಂಧ್ರದ ಯಾಪಪರ್ತಿ ಬಳಿ ಗುಮ್ಮಗಟ್ಟ ಗ್ರಾಮದಲ್ಲಿ ಗಂಗಮ್ಮ ಮತ್ತು ತಿಮ್ಮಕ್ಕ ಅಕ್ಕ ತಂಗಿಯರನ್ನು ಮದುವೆಯಾಗಿ ಸಂಸಾರ ನಡೆಸುತ್ತಿದ್ದೇನೆ. 13 ಜನ ಮಕ್ಕಳಿದ್ದಾರೆ. 60 ಕುರಿಗಳನ್ನು ಸಾಕಾಣೆಯೊಂದಿಗೆ ಹೊಸಪೇಟೆ, ಸಂಡೂರು, ಬಳ್ಳಾರಿ ಮುಂತಾದ ಕಡೆ ತಿರುಗಾಟ ನಡೆಸುವ ಮೂಲಕ ಅಲೆಮಾರಿ ಜೀವನ ನಡೆಸುತ್ತಿರುವುದಾಗಿ ಸಣ್ಣೀರಜ್ಜ ಆಸ್ಪಷ್ಟ ಮಾಹಿತಿ ನೀಡುತ್ತಾನೆ.

ಸತ್ತ ವ್ಯಕ್ತಿ ಮರಳಿ ಬಂದಿರುವುದರ ಬಗ್ಗೆ ನನಗೆ ನಂಬಿಕೆ ಇಲ್ಲ. ಬುಡಕಟ್ಟು ಸಮುದಾಯಗಳು ಕಳ್ಳುಬಳ್ಳಿ, ಸಂಬಂಧ, ಬೆಡಗು ಮುಂತಾದ ಭಾವನಾತ್ಮಕ ಸಂಬಂಧಗಳಿಗೆ ಬಹುಬೇಗ ಬಲಿಯಾಗುತ್ತಾರೆ. ಈ ಸಂಬಂಧವನ್ನೇ ನಂಬಿ ಆತನ ಮಕ್ಕಳಾದ ಚಿತ್ರನಾಯಕನಹಳ್ಳಿ ಗ್ರಾಮದ ಈರಣ್ಣ ಮತ್ತು ಮರಿಯಪ್ಪ ಈರಜ್ಜ ನಮ್ಮ ತಂದೆ ಎಂದು ಒಪ್ಪಿಕೊಂಡಿರಬಹುದು. ಆದರೆ ಇದು ನೈಜವಲ್ಲ.

ಮಕ್ಕಳು ಮತ್ತು ಆತನ ಸಂಬಂಧಿಗಳು ಒಪ್ಪಿಕೊಂಡ ಮೇಲೆ ಅವರನ್ನು ಯಾವುದೇ ವಿಚಾರಣೆ ನಡೆಸುವ ಅಗತ್ಯವಿಲ್ಲ. ಈ ಪ್ರಕರಣಕ್ಕೂ ಇಲಾಖೆಗೂ ಯಾವುದೇ ಸಂಬಂಧವಿಲ್ಲ. ಕುತೂಹಲಕ್ಕಾಗಿ ವಿಚಾರಣೆ ನಡೆಸಿರುವುದಾಗಿ ಪೋಲಿಸ್ ವೃತ್ತ ನಿರೀಕ್ಷಕ ಈ.ಆನಂದ್ ಸ್ಪಷ್ಟಪಡಿಸಿದರು.

ಊರಿನ ಜನ ಯಾಪಲಪರ್ತಿಗೆ ಹೋಗಿ ಕುರಿ ಗೊಬ್ಬರ ಖರೀದಿ ಮಾಡುವಾಗ ಪುಸಲೋರು ಬೆಡಗಿನವ್ರು ಆಗೆ ಎಂದು ಬೈಗಳು ಆರಂಭಿಸಿದಾಗ ಈರಜ್ಜ, ನೀವು ಆಗೆ ಬೈಬೇಡಿ ನಾನು ಮದುವೆ ಆಗಿರೋದು ಆ ಬೆಡಗಿನಲ್ಲೇ ಎಂದು ಈರಜ್ಜ ಮತ್ತು ಖರೀದಿದಾರರು ಒಬ್ಬರಿಗೊಬ್ಬರು ಪರಸ್ಪರ ಪರಿಚಯ ಮಾಡಿಕೊಂಡು ನಂತರ ಆತನನ್ನು ಅ.12 ರಂದು ಸ್ವಗ್ರಾಮ ಚಿತ್ರನಾಯಕನಹಳ್ಳಿಗೆ ಕರೆದುಕೊಂಡು ಬಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.