ADVERTISEMENT

ಚಿತ್ರದುರ್ಗ: ಎಸಿಬಿ ಬಲೆಗೆ ಬಿದ್ದ ಪಿಡಿಒ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2022, 16:18 IST
Last Updated 7 ಮಾರ್ಚ್ 2022, 16:18 IST

ಚಿತ್ರದುರ್ಗ: ತಾಲ್ಲೂಕಿನ ಮದಕರಿಪುರ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಸುಷ್ಮಾರಾಣಿ ಹಾಗೂ ಕಚೇರಿ ಸಿಬ್ಬಂದಿ ವಿಜಯಲಕ್ಷ್ಮಿ ಎಂಬುವರು ಲಂಚ ಸ್ವೀಕರಿಸುವಾಗ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಬಲೆಗೆ ಬಿದ್ದಿದ್ದಾರೆ.

ಇಬ್ಬರನ್ನೂ ಎಸಿಬಿ ಪೊಲೀಸರು ವಶಕ್ಕೆ ಪಡೆದಿದ್ದು, ಲಂಚದ ರೂಪದಲ್ಲಿ ಪಡೆದ ₹ 6 ಸಾವಿರ ಹಣವನ್ನು ಜಪ್ತಿ ಮಾಡಿದ್ದಾರೆ. ಪಿಡಿಒ ಅವರ ಮನೆಯಲ್ಲಿ ಶೋಧಕಾರ್ಯ ನಡೆಸಿದ್ದಾರೆ.

ಚಿತ್ರದುರ್ಗ ನಗರದ ಶ್ರೀರಾಮ ಬಡಾವಣೆಯ ನಿವಾಸಿಯಾಗಿರುವ ಶಿಕ್ಷಕ ಟಿ.ಆರ್‌.ಸುರೇಶ್‌ ಅವರು ಮದಕರಿಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜಯನಗರ ಬಡಾವಣೆಯಲ್ಲಿ ನಿವೇಶನವೊಂದನ್ನು ಹೊಂದಿದ್ದಾರೆ. ಈ ನಿವೇಶನದ ಇ–ಖಾತೆಗೆ ಸೆ.28ರಂದು ಅರ್ಜಿ ಸಲ್ಲಿಸಿದ್ದರು. ಈ ಬಗ್ಗೆ ವಿಚಾರಿಸಲು ಜ.20ರಂದು ಗ್ರಾಮ ಪಂಚಾಯಿತಿ ಕಚೇರಿಗೆ ಭೇಟಿ ನೀಡಿದಾಗ ಪಿಡಿಒ ₹ 6 ಸಾವಿರಕ್ಕೆ ಬೇಡಿಕೆ ಇಟ್ಟಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ADVERTISEMENT

ಸುರೇಶ್‌ ಅವರು ಲಂಚದ ಹಣ ನೀಡದ ಕಾರಣ ಪಿಡಿಒ ಒಂದು ತಿಂಗಳು ಕಾಲಾವಕಾಶ ಪಡೆದಿದ್ದರು. ಮಾರ್ಚ್‌ 2ರಂದು ಕಚೇರಿ ಸಿಬ್ಬಂದಿ ವಿಜಯಲಕ್ಷ್ಮಿ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿದಾಗ ಸೋಮವಾರ ಕಚೇರಿಗೆ ಬರುವಂತೆ ಸೂಚಿಸಿದ್ದರು. ಸುಷ್ಮಾರಾಣಿ ಅವರ ಸೂಚನೆಯಂತೆ ವಿಜಯಲಕ್ಷ್ಮಿ ಅವರು ಲಂಚ ಪಡೆಯುತ್ತಿದ್ದ ಸಂದರ್ಭದಲ್ಲಿ ಪೊಲೀಸರು ದಾಳಿ ನಡೆಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.