ಹಿರಿಯೂರು: ಸಾವಿರಾರು ಜನರಿಗೆ ಅಕ್ಷರದ ಅರಿವು ನೀಡಿ, ಉದ್ಯೋಗ ಕಲ್ಪಿಸಿರುವ ಸರ್ಕಾರಿ ಶಾಲೆಗೆ ಹಳೇ ವಿದ್ಯಾರ್ಥಿಗಳು ಹೊಸ ರೂಪ ನೀಡಿದ್ದಾರೆ. 1925ರಲ್ಲಿ ಆರಂಭಗೊಂಡು ಶಿಥಿಲಾವಸ್ಥೆಗೆ ತಲುಪಿದ್ದ ಶಾಲೆಗೆ ಈಗ ಕಾಯಕಲ್ಪ ಒದಗಿ ಬಂದಿದೆ.
ತಾಲ್ಲೂಕಿನಲ್ಲಿ ಅತಿ ಹೆಚ್ಚು ವಿದ್ಯಾವಂತರು, ವಿವಿಧ ಕ್ಷೇತ್ರಗಳಲ್ಲಿ ಉದ್ಯೋಗದಲ್ಲಿರುವವರ ಪಟ್ಟಿಯಲ್ಲಿ ಗನ್ನಾಯಕನಹಳ್ಳಿಗೆ ಮೊದಲ ಸ್ಥಾನ. ತಮ್ಮ ಊರನ್ನು ಬಹಳಷ್ಟು ಜನ ‘ವಿದ್ಯಾನಗರ’ ಎಂದೇ ಹೆಮ್ಮೆಯಿಂದ ಕರೆದುಕೊಳ್ಳುತ್ತಾರೆ. ಹಬ್ಬ–ಹರಿದಿನಗಳಿಗೆ ಬಂದು ಹೋಗುವ ಪ್ರತಿಯೊಬ್ಬರೂ ಗ್ರಾಮದ ಪ್ರವೇಶದ ಹಾದಿಯಲ್ಲಿ ಮುಖ್ಯ ರಸ್ತೆಗೆ ಹೊಂದಿಕೊಂಡಂತಹ ಸ್ಥಳದಲ್ಲಿರುವ ತಾವು ಕಲಿತ ಸರ್ಕಾರಿ ಶಾಲೆಯನ್ನು ನೋಡುತ್ತಲೇ ಮನೆಗಳತ್ತ ಸಾಗಬೇಕು. ಶಾಲೆಯ ದುಃಸ್ಥಿತಿ ಕಂಡು ತಮ್ಮ ಬಗೆಗೇ ಬೇಸರ ಬಂದು ಮನಸ್ಸನ್ನು ಹಿಂಡಿದ ಪರಿಣಾಮ ಶಾಲೆ ಹೊಸರೂಪ ಪಡೆಯಲು ಕಾರಣವಾಗಿದೆ.
ಗನ್ನಾಯಕನಹಳ್ಳಿಯಲ್ಲಿ 1925ರಲ್ಲಿ ಆರಂಭಗೊಂಡಿದ್ದ ಸರ್ಕಾರಿ ಶಾಲೆಯ ಕಟ್ಟಡ ಸಂಪೂರ್ಣವಾಗಿ ಶಿಥಿಲಗೊಂಡಿತ್ತು. ವಿದ್ಯಾರ್ಥಿಗಳಿಗೆ ಕುಳಿತುಕೊಳ್ಳಲು ಬೆಂಚ್ ಇರಲಿಲ್ಲ, ಟೇಬಲ್ಗಳಿರಲಿಲ್ಲ, ಆಟದ ಸಾಮಗ್ರಿಗಳಿರಲಿಲ್ಲ, ಕಲಿಕಾ ಉಪಕರಣಗಳನ್ನಿಡಲು ಶಿಕ್ಷಕರಿಗೆ ಅಲ್ಮೆರಾಗಳಿರಲಿಲ್ಲ. ಏನಿಲ್ಲದಿದ್ದರೂ ಹೆಸರಿಗೆ ನಮ್ಮೂರಿನಲ್ಲಿಯೂ ಒಂದು ಶಾಲೆ ಇದೆ ಎಂದು ತೋರಿಸುವ ಅವಶೇಷದಂತಿತ್ತು.
ಹಳೆಯ ವಿದ್ಯಾರ್ಥಿಗಳ ಸಂಘದ ಮುಖಂಡರಾದ ಟಿ. ಲಿಂಗರಾಜು, ಆರ್. ಬಸವರಾಜ್, ಡಿ.ವಿ. ಶಿವಶಂಕರ್ ಮೊದಲಾದವರು ಸೇರಿ ‘ನಮ್ಮ ಶಾಲೆ ನಮ್ಮ ಜವಾಬ್ದಾರಿ’ ಯೋಜನೆಯಡಿ ಜೀರ್ಣೋದ್ಧಾರ ಮಾಡಲು ಮುಂದಾದರು. ಈ ನಿಟ್ಟಿನಲ್ಲಿ ಹಳೆಯ ವಿದ್ಯಾರ್ಥಿಗಳು ಒಂದೆಡೆ ಸೇರಿ ಅಂದಾಜು ₹ 5 ಲಕ್ಷ ರೂಪಾಯಿ ನಿಧಿ ಸಂಗ್ರಹಿಸಿ, ಶಾಲೆಯ ನಾಲ್ಕು ತರಗತಿ ಕೊಠಡಿಗಳ ನೆಲಕ್ಕೆ ಸಿಮೆಂಟ್ ಪ್ಲಾಸ್ಟರಿಂಗ್, ಕಿತ್ತುಹೋಗಿದ್ದ ಕಿಟಕಿ, ಬಾಗಿಲ ಬದಲು ಹೊಸ ಕಿಟಕಿ ಬಾಗಿಲು, ಸೋರುತ್ತಿದ್ದ ಚಾವಣಿ ದುರಸ್ತಿ, ಗೋಡೆಗೆ ಸುಣ್ಣ ಬಣ್ಣ, ಕುಡಿಯುವ ನೀರಿನ ವ್ಯವಸ್ಥೆ, ಶಾಲಾ ಕೈತೋಟ ನಿರ್ಮಿಸುವ ಮೂಲಕ ಅಕ್ಷರ ಕಲಿಸಿದ ಶಾಲೆಯ ಋಣ ತೀರಿಸಿದ್ದಾರೆ.
‘ನಮ್ಮೂರಿನ ಶಾಲೆ ಈಗ ಯಾವುದೇ ಖಾಸಗಿ ಶಾಲೆಗೆ ಕಡಿಮೆ ಇಲ್ಲದ ರೀತಿ ಕಂಗೊಳಿಸುತ್ತಿದೆ. ಇಲ್ಲಿಯವರೆಗೆ ಹಳೆಯ ಕೊಠಡಿಯಲ್ಲಿ ಕುಳಿತು ಆತಂಕದಲ್ಲಿ ಪಾಠ ಕೇಳುತ್ತಿದ್ದ ವಿದ್ಯಾರ್ಥಿಗಳು ಹೊಸರೂಪ ಪಡೆದಿರುವ ಶಾಲೆಯಲ್ಲಿ ಖುಷಿಯಿಂದ ಪಾಠ ಕೇಳುತ್ತಿದ್ದಾರೆ. ವಿದ್ಯಾರ್ಥಿಗಳ ದಾಖಲಾತಿ ಹೆಚ್ಚಳವಾಗುವ ನಿರೀಕ್ಷೆ ಇದೆ. ನಮ್ಮೆಲ್ಲರ ಚಿಕ್ಕ ಪ್ರಯತ್ನ ಇಷ್ಟು ಸಂತಸ ಕೊಡುತ್ತದೆ ಅನಿಸಿರಲಿಲ್ಲ. ಒಂದು ರೀತಿಯ ಧನ್ಯತಾಭಾವ ನಮ್ಮನ್ನು ಆವರಿಸಿದೆ’ ಎನ್ನುತ್ತಾರೆ ಹಳೆಯ ವಿದ್ಯಾರ್ಥಿಗಳ ಸಂಘದ ಮುಖಂಡ ಟಿ. ಲಿಂಗರಾಜು.
ಶಾಲೆಯ ಅಭಿವೃದ್ಧಿಗೆ ನೆರವಾದ ಹಳೆ ವಿದ್ಯಾರ್ಥಿಗಳ ಸಂಘದ ಸದಸ್ಯರಿಗೆ ಮುಖ್ಯಶಿಕ್ಷಕ ಎಸ್. ನಾಗರಾಜ್ ಅಭಿನಂದನೆ ಸಲ್ಲಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.