ADVERTISEMENT

ಚಿತ್ರದುರ್ಗ | ಜಿಲ್ಲೆಯಲ್ಲಿ ಪತ್ತೆ ಆಗುತ್ತಿಲ್ಲ ‘ಭಾಗ್ಯಲಕ್ಷ್ಮಿ’ಯರು

ಬದಲಾದ ವಿಳಾಸ, ದೂರವಾಣಿ ಸಂಖ್ಯೆ ; ಮೆಚ್ಯುರಿಟಿ ಮೊತ್ತ ಪಡೆಯಲು ಅ.31 ಕೊನೆ ದಿನ

ಕೆ.ಪಿ.ಓಂಕಾರಮೂರ್ತಿ
Published 5 ಸೆಪ್ಟೆಂಬರ್ 2025, 6:16 IST
Last Updated 5 ಸೆಪ್ಟೆಂಬರ್ 2025, 6:16 IST
ಚಿತ್ರದುರ್ಗದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕಚೇರಿ
ಚಿತ್ರದುರ್ಗದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕಚೇರಿ   

ಚಿತ್ರದುರ್ಗ: ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳ ಹೆಣ್ಣುಮಕ್ಕಳನ್ನು ಉತ್ತೇಜಿಸುವ ಉದ್ದೇಶದಿಂದ ಬಿ.ಎಸ್‌.ಯಡಿಯೂರಪ್ಪ ಅವರು ತಮ್ಮ ಆಡಳಿತದ ಅವಧಿಯಲ್ಲಿ ಜಾರಿಗೊಳಿಸಿದ್ದ ‘ಭಾಗ್ಯಲಕ್ಷ್ಮಿ’ ಯೋಜನೆಗೆ 18 ವರ್ಷ ತುಂಬಿದೆ. ಆದರೆ ಜಿಲ್ಲೆಯಲ್ಲಿ ಫಲಾನುಭವಿಗಳನ್ನು ಹುಡುಕುವಲ್ಲಿ ಅಧಿಕಾರಿಗಳು ಹೈರಾಣಾಗಿದ್ದಾರೆ.

ಯೋಜನೆಗೆ ನೋಂದಾಯಿಸಿದ ಹೆಣ್ಣುಮಕ್ಕಳಿಗೆ ಸದ್ಯ 18 ವರ್ಷ ತುಂಬಿದೆ. ದಾಖಲೆ ಪರಿಶೀಲನೆ ಬಳಿಕ ಅರ್ಹ ಫಲಾನುಭವಿಗಳ ಖಾತೆಗೆ ನೇರವಾಗಿ ಮೆಚ್ಯುರಿಟಿ ಮೊತ್ತ ಜಮೆ ಆಗುತ್ತಿದೆ. ಯೋಜನೆಯಡಿ ಜಿಲ್ಲೆಯಲ್ಲಿ 8,855 ಬಾಂಡ್ ಸ್ವೀಕರಿಸಲಾಗಿತ್ತು. ಆದರೆ ಈವರೆಗೆ 7,352 ಫಲಾನುಭವಿಗಳ ಖಾತೆಗೆ ಮಾತ್ರ ಹಣ ಜಮೆಗೊಂಡಿದೆ.

ನೋಂದಣಿಯಾದ ಹೆಣ್ಣುಮಕ್ಕಳು ಕಡ್ಡಾಯವಾಗಿ 8ನೇ ತರಗತಿವರೆಗೆ ಶಿಕ್ಷಣ ಪಡೆದಿರಬೇಕು. ಬಾಲ ಕಾರ್ಮಿಕರಾಗಿರಬಾರದು, ಬಾಲ್ಯವಿವಾಹ ಆಗಿರಬಾರದು. ಪಡಿತರ ಕಾರ್ಡ್‌, ಜನನ ಪ್ರಮಾಣ ಪತ್ರ, 3ಕ್ಕಿಂತ ಹೆಚ್ಚು ಮಕ್ಕಳಿರುವುದು, ಮರಣ ಹೊಂದಿರುವವರು, ಎರಡು ಬಾರಿ ನೋಂದಣಿ ಆಗಿರುವವರು ಸೇರಿದಂತೆ ಇನ್ನಿತರೆ ಕಾರಣಗಳಿಂದ 1,329 ಬಾಂಡ್‌ಗಳನ್ನು ಅನರ್ಹಗೊಳಿಸಲಾಗಿದೆ. ಇದರ ನಡುವೆ 215 ಫಲಾನುಭವಿಗಳು ಪತ್ತೆ ಆಗದಿರುವುದು ದೊಡ್ಡ ಸಮಸ್ಯೆಯಾಗಿದೆ.

ADVERTISEMENT

‘ನೋಂದಣಿ ವೇಳೆ ನೀಡಿದ್ದ ವಿಳಾಸವನ್ನು ಹುಡುಕಿಕೊಂಡು ಹೋದರೂ ಬಾಂಡ್‌ ಪಡೆದವರು ಪತ್ತೆ ಆಗುತ್ತಿಲ್ಲ. ಜತೆಗೆ ದೂರವಾಣಿ ಸಂಖ್ಯೆ ಬದಲಾಗಿರುವುದೂ ಸಮಸ್ಯೆ ತಂದೊಡ್ಡಿದೆ. ಗ್ರಾಮೀಣ ಭಾಗಕ್ಕಿಂತ ನಗರ ವ್ಯಾಪ್ತಿಯಲ್ಲಿ ಸಮಸ್ಯೆ ಹೆಚ್ಚಾಗಿದೆ. ಬಾಂಡ್‌ ಪಡೆದವರು ಖುದ್ದಾಗಿ ಬಂದು ದಾಖಲೆ ಪರಿಶೀಲನೆ ಪೂರ್ಣಗೊಳಿಸಿದರೆ ಮಾತ್ರ ಖಾತೆಗೆ ಹಣ ಜಮೆ ಆಗಲಿದೆ’ ಎನ್ನುತ್ತಾರೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು.

‘18 ವರ್ಷದ ಹಿಂದೆ ಬಾಂಡ್‌ ಪಡೆದ ಕೆಲವರು ದಾಖಲೆಗಳನ್ನು ಕಳೆದುಕೊಂಡಿದ್ದಾರೆ. ಬ್ಯಾಂಕ್‌ ಪಾಸ್‌ಬುಕ್‌ ಇಲ್ಲದಿರುವುದು ಸಮಸ್ಯೆಗೆ ಕಾರಣವಾಗಿದೆ. ದೂರವಾಣಿ ಸಂಖ್ಯೆ ಸಿಕ್ಕರೂ ಸಂಪರ್ಕಿಸಿ ಹಣ ತಲುಪಿಸುವ ಕೆಲಸ ಮಾಡುತ್ತೇವೆ. ಏಕೆಂದರೆ 2006–2007ನೇ ಸಾಲಿನ ‘ಮೆಚ್ಯುರಿಟಿ ಮೊತ್ತ’ ಜಮೆಗೆ ನೋಂದಾಯಿಸಲು ಅಕ್ಟೋಬರ್‌ 31 ಕೊನೆ ದಿನವಾಗಿದೆ. ಬಳಿಕ ಹಣ ಜಮೆ ಆಗುವುದಿಲ್ಲ’ ಎನ್ನುತ್ತಾರೆ ಸಿಡಿಪಿಒ ವೀಣಾ.

ಭಾಗ್ಯಲಕ್ಷ್ಮಿ ಬಾಂಡ್‌, ಬ್ಯಾಂಕ್‌ ಪಾಸ್‌ ಬುಕ್‌, ಮಗುವಿನ ಜನನ ಪ್ರಮಾಣ ಪತ್ರ, ಶಾಲಾ ವ್ಯಾಸಂಗ ಪ್ರಮಾಣ ಪತ್ರ, ನೈಸರ್ಗಿಕ ವಿಕೋಪ ಕಾರಣದಿಂದ ಬಾಂಡ್‌ ಕಳೆದುಹೋಗಿದ್ದಲ್ಲಿ ಸಿಡಿಪಿಒ ದೃಢೀಕರಣ ಪತ್ರ, ತಂದೆ-ತಾಯಿ, ಫಲಾನುಭವಿಯ ಆಧಾರ್‌ ಕಾರ್ಡ್, ಫಲಾನುಭವಿಯ ತಾಯಿಯ ಸಂತಾನ ಶಕ್ತಿಹರಣ ಶಸ್ತ್ರಚಿಕಿತ್ಸೆಯ ಪ್ರತಿ, ಬಾಲ ಕಾರ್ಮಿಕಳಾಗದಿರುವ ಹಾಗೂ ಬಾಲ್ಯವಿವಾಹ ಆಗದಿರುವ ಬಗ್ಗೆ ದೃಢೀಕರಣ ಪತ್ರಗಳನ್ನು ಕಡ್ಡಾಯವಾಗಿ ನೀಡಬೇಕು.

ಅಂಗನವಾಡಿ ಶಿಕ್ಷಕರು ಎಲ್ಲ ದಾಖಲೆಗಳನ್ನು ಪರಿಶೀಲಿಸಿ, ದೃಢೀಕರಿಸಿದ ನಂತರ ಸಿಡಿಪಿಒಗಳು ಪುನಃ ಪರಿಶೀಲಿಸಿ, ಕಚೇರಿಗೆ ಸಲ್ಲಿಸುತ್ತಾರೆ. ದಾಖಲೆ ಸಲ್ಲಿಕೆ ಸಂದರ್ಭದಲ್ಲಿ ಕಡ್ಡಾಯವಾಗಿ ಫಲಾನುಭವಿಗಳು ಹಾಜರಿರಬೇಕು.

ಕಾಲಕಾಲಕ್ಕೆ ಯೋಜನೆಯಲ್ಲಿ ಬದಲಾವಣೆ ಮಾಡಿ, ನೀಡುವ ಮೊತ್ತವನ್ನು ಏರಿಕೆ ಮಾಡಲಾಗಿದೆ. 2006–07ರಲ್ಲಿ ನೋಂದಣಿಯಾದವರಿಗೆ 18 ವರ್ಷ ಪೂರೈಸಿದ ನಂತರ ದೊರೆಯುವ ಮೊತ್ತ ₹ 32,351 ಎಂದು ಉಲ್ಲೇಖಿಸಲಾಗಿತ್ತು. ನಂತರ 2019–20ರ ಅವಧಿಯಲ್ಲಿ ನೋಂದಾಯಿಸಿದವರಿಗೆ ಅಂದಾಜು ಮೊತ್ತವನ್ನು ₹ 1 ಲಕ್ಷಕ್ಕೆ ಏರಿಕೆ ಮಾಡಲಾಯಿತು. 2020-21ನೇ ಸಾಲಿನಿಂದ ಭಾಗ್ಯಲಕ್ಷ್ಮಿ ಯೋಜನೆಯನ್ನು ಅಂಚೆ ಇಲಾಖೆಯ ಸುಕನ್ಯಾ ಸಮೃದ್ಧಿ ಯೋಜನೆಯೊಂದಿಗೆ ವಿಲೀನಗೊಳಿಸಿ, ‘ಭಾಗ್ಯಲಕ್ಷ್ಮಿ–ಸುಕನ್ಯಾ ಸಮೃದ್ಧಿ’ ಎಂದು ರೂಪಾಂತರಗೊಳಿಸಲಾಯಿತು. ಇದರಡಿ ನೋಂದಣಿ ಮಾಡಿಕೊಂಡ ಫಲಾನುಭವಿಗೆ 21 ವರ್ಷ ಪೂರ್ಣಗೊಂಡ ನಂತರ ಅಂದಾಜು ₹ 1.27 ಲಕ್ಷ ನೀಡಲಾಗುತ್ತದೆ.

ಕೆ.ಎಚ್‌.ವಿಜಯ ಕುಮಾರ್‌
ಜಿಲ್ಲೆಯಲ್ಲಿ ಭಾಗ್ಯಲಕ್ಷ್ಮೀ ಬಾಂಡ್‌ ಪಡೆದ 215 ಫಲಾನುಭವಿಗಳ ಪಾಲಕರು ಸಂಪರ್ಕಕ್ಕೆ ಸಿಗುತ್ತಿಲ್ಲ. ‘ಮೆಚ್ಯುರಿಟಿ ಮೊತ್ತ’ಕ್ಕೆ ನೋಂದಣಿ ಮಾಡಿಸಲು ಅ.31 ಕೊನೆ ದಿನ. ಪತ್ತೆ ಮಾಡುವ ಕೆಲಸ ಮಾಡಲಾಗುತ್ತಿದೆ
ಕೆ.ಎಚ್‌.ವಿಜಯ ಕುಮಾರ್‌ ಉಪನಿರ್ದೇಶಕರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.