ಚಿತ್ರದುರ್ಗ: ಅಧಿಕಾರಿ ವರ್ಗ ಹಾಗೂ ರಾಜಕಾರಣಿಗಳು ತಮಗೆ ಸಿಕ್ಕ ಅವಕಾಶವನ್ನು ದುರ್ಬಳಕೆ ಮಾಡಿಕೊಳ್ಳುವುದೇ ಹೆಚ್ಚು. ಆದರೆ, ಅಂಬೇಡ್ಕರ್ ರಾಷ್ಟ್ರದ ಹಿತ ಕಾಪಾಡುವ ಉದ್ದೇಶದಿಂದ ಸಿಕ್ಕ ಅವಕಾಶವನ್ನು ಬಳಸಿಕೊಂಡು ಶ್ರೇಷ್ಠ ಸಂವಿಧಾನ ರಚಿಸಿದರು ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಚಾರಕ ಸು.ರಾಮಣ್ಣ ಅಭಿಪ್ರಾಯಪಟ್ಟರು.
ಇಲ್ಲಿನ ವಿ.ಪಿ.ಬಡಾವಣೆಯಲ್ಲಿನ ವಿಶ್ವ ಹಿಂದು ಪರಿಷತ್ ಮತ್ತು ಬಜರಂಗದಳ ಕಚೇರಿಯಲ್ಲಿ ಬುಧವಾರ ಏರ್ಪಡಿಸಿದ್ದ ಅಂಬೇಡ್ಕರ್ ಜಯಂತಿಯಲ್ಲಿ ಅವರು ಮಾತನಾಡಿದರು.
‘ಅಂಬೇಡ್ಕರ್ ಅವರು ದಲಿತ ನಾಯಕರಾಗಿ ವಿಜೃಂಭಿಸಲಿಲ್ಲ. ಶೋಷಿತರಿಗೆ ನ್ಯಾಯ ದೊರಕಿಸಲು ಶ್ರಮಿಸಿ ರಾಷ್ಟ್ರ ನಾಯಕರಾದರು. ನಾವೆಲ್ಲರೂ ಒಂದೇ ಎಂಬುದನ್ನು ಮರೆತಿರುವಂತೆ ಕಾಣುತ್ತಿದೆ. ದಲಿತರು ಸಹ ರಾಷ್ಟ್ರದ ಒಂದು ಭಾಗ. ಅವರಿಗೆ ಎಲ್ಲರೂ ಮನ್ನಣೆ ನೀಡಬೇಕು. ಅವರಲ್ಲಿ ರಾಷ್ಟ್ರ ಭಾವನೆ, ರಾಷ್ಟ್ರಾಭಿಮಾನ ಬೆಳೆಸಬೇಕು’ ಎಂದು ಹೇಳಿದರು.
‘ರಾಮರಾಜ್ಯದ ಕನಸು ಕಂಡಿದ್ದ ಮಹಾತ್ಮ ಗಾಂಧೀಜಿ ಸಂವಿಧಾನ ರಚಿಸುವ ಜವಾಬ್ದಾರಿಯನ್ನು ಅಂಬೇಡ್ಕರ್ ಅವರಿಗೆ ನೀಡಿದರು. ಸಂವಿಧಾನ ರಚನೆಯಲ್ಲಿ ಅವರದ್ದು ಸಿಂಹಪಾಲು. ಭಾರತದ ಶಕ್ತಿಯನ್ನು ಅರಿಯದ ಜವಾಹರಲಾಲ್ ನೆಹರೂ ಅಮೆರಿಕ ಹಾಗೂ ರಷ್ಯಾ ವಿಚಾರಗಳನ್ನು ನಕಲು ಮಾಡಲು ಪ್ರಯತ್ನಿಸಿದರು. ಸಂವಿಧಾನ ರಚನೆಯ ಹೊಣೆಯನ್ನು ವಿದೇಶಿಯರಿಗೆ ನೀಡಲು ಮುಂದಾಗಿದ್ದರು’ ಎಂದರು.
ಪತ್ರಕರ್ತ ರವಿ ಮಲ್ಲಾಪುರ ಅಧ್ಯಕ್ಷತೆ ವಹಿಸಿದ್ದರು. ವಕೀಲ ವಿಶ್ವನಾಥ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.