ADVERTISEMENT

ಚರ್ಮಗಂಟು ರೋಗಕ್ಕೆ ದೇವಸ್ಥಾನದ ಬಸವ ಬಲಿ

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2022, 5:41 IST
Last Updated 1 ನವೆಂಬರ್ 2022, 5:41 IST
ಗ್ರಾಮ ದೇವತೆ ದುರ್ಗಾಂಬಿಕ ದೇವಿ ದೇವಸ್ಥಾನದ ಗೂಳಿ ಬಸವನಿಗೆ ಗ್ರಾಮದ ಮಹಿಳೆ ಪೂಜೆ ಸಲ್ಲಿಸಿದರು.
ಗ್ರಾಮ ದೇವತೆ ದುರ್ಗಾಂಬಿಕ ದೇವಿ ದೇವಸ್ಥಾನದ ಗೂಳಿ ಬಸವನಿಗೆ ಗ್ರಾಮದ ಮಹಿಳೆ ಪೂಜೆ ಸಲ್ಲಿಸಿದರು.   

ಭರಮಸಾಗರ: ಇಲ್ಲಿನ ಗ್ರಾಮ ದೇವತೆ ದುರ್ಗಾಂಬಿಕ ದೇವಿ ದೇವಸ್ಥಾನದ ಗೂಳಿ ಬಸವ ಶನಿವಾರ ರಾತ್ರಿ ಚರ್ಮಗಂಟು ರೋಗಕ್ಕೆ ಬಲಿಯಾಗಿದೆ.

ದೇವರ ಗೂಳಿ ಗಂಟು ರೋಗಕ್ಕೆ ತುತ್ತಾಗಿ ಅನಾರೋಗ್ಯದಿಂದ ಬಳಲುತ್ತಿರುವುದನ್ನು ಗಮನಿಸಿದ ಗ್ರಾಮದ ಯುವಕರು ಪಶು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿ ಗೂಳಿಯನ್ನು ಉಳಿಸಿಕೊಳ್ಳಲು ನಡೆಸಿದ ಯತ್ನ ಫಲಕಾರಿಯಾಗಲಿಲ್ಲ.

17 ವರ್ಷಗಳ ಹಿಂದೆ ಗ್ರಾಮದ ಎಳೆನೀರು ರಾಜು ಎಂಬುವರು ಈ ಗೂಳಿಯನ್ನು ಗ್ರಾಮ ದೇವತೆ ದೇವಸ್ಥಾನಕ್ಕೆ ದಾನವಾಗಿ ನೀಡಿದ್ದರು. ಯಾರಿಗೂ ತೊಂದರೆ ನೀಡದೆ ಜನರು ನೀಡಿದ್ದನ್ನು ತಿನ್ನುತ್ತ ಗ್ರಾಮದ ಬೀದಿಗಳಲ್ಲಿ ರಾಜಗಾಂಭೀರ್ಯದಿಂದ ನಡೆಯುತ್ತಿದ್ದ ಬಸವ ಗ್ರಾಮಸ್ಥರ ಪ್ರೀತಿ, ವಿಶ್ವಾಸಕ್ಕೆ ಪಾತ್ರವಾಗಿತ್ತು. ಈಗ ಬಸವನ ಸಾವು ಗ್ರಾಮಸ್ಥರಲ್ಲಿ ದುಃಖ ಉಂಟು ಮಾಡಿದೆ.

ADVERTISEMENT

ಭಾನುವಾರ ಬೆಳಿಗ್ಗೆ ಸಾಂಪ್ರದಾಯಿಕ ವಿಧಿ ವಿಧಾನಗಳಂತೆ ಗೂಳಿ ಬಸವನಿಗೆ ಪೂಜೆ ಸಲ್ಲಿಸಲಾಯಿತು. ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಡಿ.ವಿ.ಶರಣಪ್ಪ, ಕೆಪಿಸಿಸಿ ಸದಸ್ಯ ಎಚ್.ಎನ್.ತಿಪ್ಪೇಸ್ವಾಮಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಂಜುಳಾ, ಕೋಗುಂಡೆ ಕರಿಬಸಪ್ಪ, ವಿವಿಧ ಮುಖಂಡರು ಅಂತಿಮ ನಮನ ಸಲ್ಲಿಸಿದರು.

ನಂತರ ಮಂಗಳವಾದ್ಯದೊಂದಿಗೆ ಗೂಳಿಬಸವನ ಮೃತ ದೇಹವನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ಕೊಂಡೊಯ್ದು ದುರ್ಗಾಂಬಿಕಾ ದೇವಸ್ಥಾನದ ಸಮೀಪದಲ್ಲಿ ಸಮಾದಿ ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.