ಹೊಳಲ್ಕೆರೆ: ಭದ್ರಾ ಮೇಲ್ದಂಡೆ ಕಾಮಗಾರಿಗೆ ಅಜ್ಜಂಪುರ ಸಮೀಪದ ಅಬ್ಬಿನಹೊಳಲು ಗ್ರಾಮದ ರೈತರು ತಮ್ಮ ಭೂಮಿ ನೀಡಲು ಹೆಚ್ಚು ಪರಿಹಾರ ಕೋರಿರುವ ಪ್ರಕರಣ ನ್ಯಾಯಾಲಯದಲ್ಲಿದ್ದು, ಶೀಘ್ರದಲ್ಲೇ ಇತ್ಯರ್ಥವಾಗಲಿದೆ ಎಂದು ಶಾಸಕ ಎಂ.ಚಂದ್ರಪ್ಪ ವಿಶ್ವಾಸ ವ್ಯಕ್ತಪಡಿಸಿದರು.
ತಾಲ್ಲೂಕಿನ ಆಡನೂರಿನಲ್ಲಿ ₹1 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಪ್ರಾಥಮಿಕ ಉಪ ಆರೋಗ್ಯ ಕೇಂದ್ರವನ್ನು ಮಂಗಳವಾರ ಉದ್ಘಾಟಿಸಿ ಮಾತನಾಡಿದರು.
ಪರಿಹಾರ ನೀಡಿಕೆಯಲ್ಲಿ ತಾರತಮ್ಯ ಮಾಡಲಾಗಿದ್ದು, ಇತರ ರೈತರಿಗೆ ಕೊಟ್ಟಷ್ಟೇ ಪರಿಹಾರವನ್ನು ತಮಗೂ ಕೊಡಬೇಕು ಎಂದು ಕೆಲ ರೈತರು ನ್ಯಾಯಾಲಯದ ಮೊರೆ ಹೋಗಿದ್ದಾರೆ. ಈ ಕಾರಣಕ್ಕೆ ಕೇವಲ 120 ಮೀಟರ್ ಕಾಮಗಾರಿ ಸ್ಥಗಿತಗೊಂಡಿದೆ ಎಂದರು.
ತರೀಕೆರೆ ಶಾಸಕ ಶ್ರೀನಿವಾಸ್ ಹಾಗೂ ಭದ್ರಾ ಮೇಲ್ದಂಡೆ ಯೋಜನೆಯ ಎಂಜಿನಿಯರ್ಗಳ ಜತೆ ಚರ್ಚಿಸಿದ್ದೇನೆ. ಆದಷ್ಟು ಬೇಗ ನ್ಯಾಯಾಲಯದ ಪ್ರಕರಣ ಇತ್ಯರ್ಥವಾಗಬೇಕಿದೆ. ₹23,000 ಕೋಟಿ ವೆಚ್ಚದ ಯೋಜನೆಯ ಕಾಮಗಾರಿ ವಿಳಂಬವಾದರೆ ವರ್ಷಕ್ಕೆ ಶೇ 10ರಷ್ಟು ವೆಚ್ಚ ಹೆಚ್ಚಲಿದೆ ಎಂದು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡಲಾಗಿದೆ. ಆದ್ದರಿಂದ ಪ್ರಕರಣ ಶೀಘ್ರ ಇತ್ಯರ್ಥವಾಗಲಿದ್ದು, ಡಿಸೆಂಬರ್ ಒಳಗೆ ನೀರು ಬರುವ ವಿಶ್ವಾಸ ಇದೆ ಎಂದು ತಿಳಿಸಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸತ್ಯಭಾಮಾ, ಪುರಸಭೆ ಮಾಜಿ ಅಧ್ಯಕ್ಷ ಆರ್.ಎ.ಅಶೋಕ್, ತಾಲ್ಲೂಕು ವೈದ್ಯಾಧಿಕಾರಿ ಡಾ.ರವಿಕುಮಾರ್, ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಮಂಜುಳಾ, ಸದಸ್ಯರಾದ ಪುಷ್ಪಾವತಿ, ಮಂಜುನಾಥ, ರವಿಕುಮಾರ್, ಶಾರದಮ್ಮ, ಶ್ರೀನಿವಾಸ್, ಶಂಕರಪ್ಪ, ಮಹೇಶ್ವರಪ್ಪ, ಡಿ.ಸಿ.ಮೋಹನ್, ಡಾ.ಪ್ರದೀಪ್, ಗುರುಮೂರ್ತಿ, ರಾಜಶೇಖರ್, ಶಿವಪುರ ಅಜ್ಜಯ್ಯ, ಮರುಳಸಿದ್ದಪ್ಪ, ಚಂದ್ರಶೇಖರ ನಾಯ್ಕ, ಪಿಡಿಒ ಶ್ರೀನಿವಾಸ್ ಹಾಗೂ ಊರಿನ ಮುಖಂಡರು ಈ ಸಂದರ್ಭದಲ್ಲಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.