
ಹಿರಿಯೂರು: ಶಸ್ತ್ರ ಚಿಕಿತ್ಸೆ ನಡೆಸಲು, ಅಪಘಾತದಲ್ಲಿ ಗಾಯಗೊಂಡವರ ಪ್ರಾಣ ಉಳಿಸಲು ಸಕಾಲದಲ್ಲಿ ಅಗತ್ಯ ಇರುವ ಗುಂಪಿನ ರಕ್ತ ಸಿಗದೆ ಎಷ್ಟೋ ಜನ ಪ್ರಾಣ ಕಳೆದುಕೊಳ್ಳುತ್ತಾರೆ. ಹಾಗಾಗಿ ಹಣವಂತರು ತಮ್ಮ ಜನ್ಮದಿನ, ವಿವಾಹ ವಾರ್ಷಿಕೋತ್ಸವಗಳ ದಿನದಂದು ರಕ್ತದಾನ ಶಿಬಿರ ಏರ್ಪಡಿಸಿದಲ್ಲಿ ಹಲವು ಜೀವಗಳನ್ನು ಉಳಿಸಬಹುದು ಎಂದು ತಾಲ್ಲೂಕು ಬಿಜೆಪಿ ಅಧ್ಯಕ್ಷ ಕೆ. ಅಭಿನಂದನ್ ಹೇಳಿದರು.
ನಗರದ ನೆಹರೂ ಮೈದಾನದಲ್ಲಿರುವ ರೋಟರಿ ಭವನದಲ್ಲಿ ಬುಧವಾರ ಪ್ರಧಾನಿ ನರೇಂದ್ರ ಮೋದಿಯರ ಹುಟ್ಟುಹಬ್ಬದ ಪ್ರಯುಕ್ತ ಬಿಜೆಪಿ ವತಿಯಿಂದ ಏರ್ಪಡಿಸಿದ್ದ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.
ಮೋದಿಯವರ ಜನ್ಮದಿನಾಚರಣೆ ಅಂಗವಾಗಿ ಸೇವಾ ಮನೋಭಾವದಿಂದ ಸ್ವಯಂ ಪ್ರೇರಿತರಾಗಿ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿದೆ. ಯಾರಿಗೆ ಯಾವ ಸಂದರ್ಭದಲ್ಲಿ ರಕ್ತದ ಅವಶ್ಯಕತೆ ಬೀಳುತ್ತದೆ ಎಂದು ಹೇಳಲಾಗದು. ರಕ್ತದ ಕೊರತೆಯನ್ನು ನೀಗಿಸಲು ಶುಭ ಸಮಾರಂಭಗಳಲ್ಲೂ ರಕ್ತದಾನ ಶಿಬಿರ ಆಯೋಜಿಸುವಂತೆ ಸಲಹೆ ನೀಡಿದರು.
ರಕ್ತದಾನ ಮಾಡುವುದರಿಂದ ಹೊಸ ರಕ್ತ ಉತ್ಪತ್ತಿಯಾಗುತ್ತಿದೆ. ಆರೋಗ್ಯ ಸುಧಾರಿಸುತ್ತದೆ. ಜೊತೆಗೆ ಜೀವದಾನ ಮಾಡಿದ ಪುಣ್ಯ ಪ್ರಾಪ್ತಿಯಾಗುತ್ತದೆ. ಯುವಕರು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಲು ಮುಂದಾಗಬೇಕು. ಈ ಶಿಬಿರದಲ್ಲಿ 149ಕ್ಕೂ ಹೆಚ್ಚು ಯುವಕರು, ಮಹಿಳೆಯರು ಸೇರಿದಂತೆ ವಿವಿಧ ವರ್ಗದವರು ಸ್ವಯಂ ಆಸಕ್ತಿಯಿಂದ ರಕ್ತದಾನ ಮಾಡಿದ್ದು, ಸಂತಸ ತಂದಿದೆ ಎಂದು ಬಿಜೆಪಿ ಹಿರಿಯ ಮುಖಂಡ ಎನ್.ಆರ್. ಲಕ್ಷ್ಮೀಕಾಂತ್ ಹೇಳಿದರು.
ಮುಖಂಡರಾದ ವಿ. ವಿಶ್ವನಾಥ್, ಎಂ.ಎಸ್. ರಾಘವೇಂದ್ರ, ಎರಾಘವೇಂದ್ರ, ಬಸವರಾಜ್, ಜೆ.ಬಿ. ರಾಜು, ರಾಜೇಶ್ವರಿ, ನಿತಿನ್ ಗೌಡ, ಯೋಗೇಶ್, ಮಂಜುನಾಥ್ ಮುರಳೀಧರ, ಕೆ.ಟಿ. ಹನುಮಂತ, ಜೋಧಾ, ದ್ಯಾಮಣ್ಣ, ಶ್ರೀನಿವಾಸ್, ತಮ್ಮಣ್ಣ, ಗೋವಿಂದಪ್ಪ, ವೇದಮೂರ್ತಿ, ಮದ್ದನಕುಂಟೆ ಜನಾರ್ದನ್, ಪ್ರಜ್ವಲ್, ಸಿದ್ದಮ್ಮ, ತಾಹೀರಬಾನು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.