
ಚಳ್ಳಕೆರೆ: ರಾಷ್ಟ್ರೀಯ ಹೆದ್ದಾರಿ ವೀರದಿಮ್ಮನಹಳ್ಳಿ ಕ್ರಾಸ್ ಬಳಿ ಸೋಮವಾರ ಲಾರಿ ನಿಲ್ಲಿಸಿ ಶೌಚಾಲಯಕ್ಕೆ ತೆರಳುವ ವೇಳೆ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಲಾರಿ ಕ್ಲೀನರ್ ಎಸ್. ಚಂದ್ರಣ್ಣ ಮೃತಪಟ್ಟಿದ್ದಾರೆ.
ಬ್ಯಾಡಗಿ ಮಾರುಕಟ್ಟೆಯಲ್ಲಿ ಮಣಿಸಿನಕಾಯಿ ಮಾರಾಟ ಮಾಡಿಕೊಂಡು, ಶಿವರಾಜ್, ಚಾಲಕ ನಾಗರಾಜ್ ಹಾಗೂ ಕ್ಲೀನರ್ ಚಂದ್ರಣ್ಣ ಲಾರಿಯಲ್ಲಿ ಮರಳುತ್ತಿದ್ದರು. ಈ ವೇಳೆ ಶೌಚಾಲಯಕ್ಕೆ ಎಂದು ಚಂದ್ರಣ್ಣ ಲಾರಿ ನಿಲ್ಲಿಸಿ ಹೋಗುತ್ತಿದ್ದಾಗ, ಚಳ್ಳಕೆರೆ ಕಡೆಯಿಂದ ಬಳ್ಳಾರಿ ಕಡೆಗೆ ಹೋಗುತ್ತಿದ್ದ ಕಾರು ವೇಗವಾಗಿ ಬಂದು ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಲಾರಿಗೆ ಡಿಕ್ಕಿ ಹೊಡೆದಿದೆ. ಬಳಿಕ ಚಂದ್ರಣ್ಣನಿಗೂ ಗುದ್ದಿ ಪಲ್ಟಿಯಾಗಿದೆ.
ಕ್ಲೀನರ್ ಚಂದ್ರಣ್ಣ ತಲೆಗೆ ಬಲವಾದ ಪೆಟ್ಟು ಬಿದ್ದಿದ್ದು, ಚಳ್ಳಕೆರೆ ಸರ್ಕಾರಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಅಪಘಾತದಲ್ಲಿ ಕಾರು ಜಖಂಗೊಂಡಿದೆ. ಕಾರಿನಲ್ಲಿದ್ದ ನಾಯಕನಹಟ್ಟಿಯ ಶಿವಕುಮಾರ್, ಚಂದನ್ಗೆ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ಚಳ್ಳಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.