ಚಿಕ್ಕಜಾಜೂರು: ಸಮೀಪದ ಅರೇನಹಳ್ಳಿ ಗ್ರಾಮದ ರೈತ ಪರಮೇಶ್ವರಪ್ಪ (65) ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮಳೆ ಕೊರತೆ, ಕೊಳವೆಬಾವಿಗಳಲ್ಲಿ ಅಂತರ್ಜಲ ಕುಸಿತ, ಮೆಕ್ಕೆಜೋಳದ ಫಸಲಿಗೆ ಹಾನಿ ಹಾಗೂ ಸಾಲದಿಂದ ಬೇಸತ್ತಿದ್ದ ಅವರು ತೋಟದಲ್ಲಿ ವಿಷ ಸೇವಿಸಿದ್ದರು. ಹೊಳಲ್ಕೆರೆ ಆಸ್ಪತ್ರೆಗೆ ಕರೆದೊಯ್ದು ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ವೈದ್ಯರ ಸಲಹೆ ಮೇರೆಗೆ ಚಿತ್ರದುರ್ಗ ಆಸ್ಪತ್ರೆಗೆ ಕರೆದೊಯ್ಯುವಾಗ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದರು ಎಂದು ಅವರ ಪುತ್ರಿ ಗೀತಾ ದೂರಿನಲ್ಲಿ ತಿಳಿಸಿದ್ದಾರೆ.
6 ಎಕರೆ ಜಮೀನಿನ ಪೈಕಿ ಎರಡು ಎಕರೆಯಲ್ಲಿ ಅಡಿಕೆ ತೋಟ ಮಾಡಿದ್ದರು. ಕೊಳವೆ ಬಾವಿ ಕೊರೆಸಲು, ತೋಟದ ಅಭಿವೃದ್ಧಿ ಹಾಗೂ ಇನ್ನಿತರ ಕೃಷಿ ಚಟುವಟಿಕೆಗಳಿಗಾಗಿ ಹೊಳಲ್ಕೆರೆಯ ಪ್ರಗತಿ ಕೃಷ್ಣಾ ಗ್ರಾಮೀಣ ಬ್ಯಾಂಕ್ನಲ್ಲಿ ಒಡವೆ ಅಡ ಇಟ್ಟು ₹2 ಲಕ್ಷ ಸಾಲ ಪಡೆದಿದ್ದರು. ಜಮೀನಿನ ಮೇಲೆ ₹5 ಲಕ್ಷ ಬೆಳೆ ಸಾಲವನ್ನೂ ಮಾಡಿದ್ದರು. ಗೆಳೆಯರು ಹಾಗೂ ಸಂಬಂಧಿಕರ ಬಳಿ ₹3 ಲಕ್ಷ ಕೈಸಾಲ ಮಾಡಿದ್ದರು ಎನ್ನಲಾಗಿದೆ.
‘ಮೂರು ಕೊಳವೆ ಬಾವಿಗಳ ಪೈಕಿ ಎರಡು ಸಂಪೂರ್ಣವಾಗಿ ಬತ್ತಿ ಹೋಗಿದ್ದವು. ಇನ್ನೊಂದರಲ್ಲಿ ಅಲ್ಪ ಪ್ರಮಾಣದ ನೀರು ಬರುತ್ತಿದ್ದು, ತೋಟಕ್ಕೆ ಸರಿಯಾಗಿ ನೀರು ಸಾಕಾಗುತ್ತಿರಲಿಲ್ಲ. 4 ಎಕರೆಯಲ್ಲಿ ಬಿತ್ತನೆ ಮಾಡಿದ್ದ ಮೆಕ್ಕೆಜೋಳ ಮಳೆ ಇಲ್ಲದೇ ಹಾಳಾಯಿತು. ಸಾಲದಿಂದ ಅವರು ಬೇಸತ್ತಿದ್ದರು’ ಎಂದು ಗೀತಾ ತಿಳಿಸಿದ್ದಾರೆ.
ಚಿಕ್ಕಜಾಜೂರು ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.