
ಚಿತ್ರದುರ್ಗ: ‘ನಗರದ ಮುರುಘರಾಜೇಂದ್ರ ಕ್ರೀಡಾಂಗಣದಲ್ಲಿ ನ.12ರಿಂದ 16ರವರೆಗೆ ಸ್ವದೇಶಿ ಜಾಗರಣಾ ಮಂಚ್ ವತಿಯಿಂದ ನಡೆದ ಸ್ವದೇಶಿ ಮೇಳದಲ್ಲಿ ₹ 5 ಕೋಟಿಗೂ ಹೆಚ್ಚು ವಹಿವಾಟು ನಡೆದಿದೆ. ನಮ್ಮ ನೀರಿಕ್ಷೆಗೂ ಮೀರಿದಂತೆ ಸ್ವದೇಶಿ ಮೇಳ ಯಶಸ್ವಿಯಾಗಿದೆ’ ಎಂದು ಮೇಳದ ಸಂಚಾಲಕ, ವಿಧಾನ ಪರಿಷತ್ ಸದಸ್ಯ ಕೆ.ಎಸ್. ನವೀನ್ ತಿಳಿಸಿದರು.
ಸೋಮವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು ‘ಮೊಟ್ಟ ಮೊದಲ ಬಾರಿಗೆ ಕೋಟೆನಾಡಿನಲ್ಲಿ ನಡೆಯುತ್ತಿರುವ ಸ್ವದೇಶಿ ಮೇಳ ಯಶಸ್ವಿಯಾಗುವುದೇ ಎಂಬ ಪ್ರಶ್ನೆ ಕಾಡಿತ್ತು. ಆದರೆ, ಸಾರ್ವಜನಿಕರು ಅಭೂತಪೂರ್ವ ಸ್ಪಂದನೆ ನೀಡಿದ ಕಾರಣ ಮೇಳ ಬಹಳ ಚೆನ್ನಾಗಿ ನಡೆದಿದೆ. ಸ್ವದೇಶಿ ಜಾಗರಣಾ ಮಂಚ್ನ ಕರ್ನಾಟಕ ಪ್ರಮುಖರಾದ ಜಗದೀಶ್, ನಮ್ಮ ಸಹ ಸಂಚಾಲಕರು, ಕಾರ್ಯಕರ್ತರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ’ ಎಂದರು.
‘2.20 ಲಕ್ಷ ಜನ ಮೇಳಕ್ಕೆ ಭೇಟಿ ನೀಡಿದ್ದಾರೆ. ಸಂತೋಷದ ಸಂಗತಿಯೆಂದರೆ 30,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮೇಳಕ್ಕೆ ಬಂದಿದ್ದಾರೆ. ಮೇಳಕ್ಕೆ ಬಂದಿದ್ದ ಯುವ ಉದ್ಯಮಿಗಳ ಜೊತೆ ವಿದ್ಯಾರ್ಥಿಗಳು ಮಾತನಾಡಿ ಮಾಹಿತಿ ಪಡೆದಿದ್ದಾರೆ. ಯುವ ಸಮಾವೇಶಕ್ಕೂ ಉತ್ತಮ ಪ್ರತಿಕ್ರಿಯೆ ಬಂದಿದೆ. ಸ್ವದೇಶಿ ಮೇಳ ಯುವ ಜನರಿಗೆ ತಲುಪಿರುವುದು ಸಾರ್ಥಕ ಎನಿಸಿದೆ’ ಎಂದರು.
‘ಮೇಳದ ಅಂಗವಾಗಿ ನಡೆದ ಮಹಿಳಾ ಸಮಾವೇಶ, ರೈತ ಸಮಾವೇಶ, ಆಯುರ್ವೆದ ಚಿಕಿತ್ಸಾ ಶಿಬಿರ, ತಾರಸಿ ತೋಟ ತರಬೇತಿ, ಯೋಗ ಶಿಬಿರಕ್ಕೆ ಅಪಾರ ಸಂಖ್ಯೆಯ ಜನ ಭಾಗಿಯಾಗಿದ್ದಾರೆ. ಮಕ್ಕಳು, ಮಹಿಳೆಯರು ವಿವಿಧ ಚಟುವಟಿಕೆಯಲ್ಲಿ ಭಾಗಿಯಾಗಿದ್ದಾರೆ. ಕೋಟೆನಾಡು ಮಾತ್ರವಲ್ಲದೇ ದಾವಣಗೆರೆ, ಶಿವಮೊಗ್ಗ, ಬಳ್ಳಾರಿ, ವಿಜಯನಗರ ಜಿಲ್ಲೆಗಳಿಂದಲೂ ಜನ ಬಂದಿದ್ದಾರೆ’ ಎಂದರು.
‘ನಮ್ಮ ಕಾರ್ಯಕರ್ತರು ಬಹಳ ಚೆನ್ನಾಗಿ ಪ್ರಚಾರ ಮಾಡಿದ ಕಾರಣ ಮೇಳ ಯಶಸ್ವಿಯಾಗಲು ಸಾಧ್ಯವಾಯಿತು. ಒಂದು ತಂಡವಾಗಿ ನಾವೆಲ್ಲರೂ ಕೆಲಸ ಮಾಡಿದ್ದೇವೆ. ಮೇಳದ ಅಂತಿಮ ದಿನ ಮಳಿಗೆಗಳ ಮಾಲೀಕರ ಸಭೆ ನಡೆಸಲಾಯಿತು. ಎಲ್ಲರೂ ತಮ್ಮ ವಹಿವಾಟಿನ ವಿವರ ನೀಡಿದರು. ಎಲ್ಲರೂ ಬಹಳ ಸಂತೋಷ ವ್ಯಕ್ತಪಡಿಸಿದರು. ಇಡೀ ಮೇಳ ಪ್ಲಾಸ್ಟಿಕ್ ಮುಕ್ತವಾಗಿ ನಡೆದದ್ದು ಬಹಳ ಸಂತೋಷ ತಂದಿದೆ’ ಎಂದರು.
‘ದೇಸಿ ಹಸುಗಳ ಪ್ರದರ್ಶನಕ್ಕೂ ಉತ್ತಮ ಬೆಂಬಲ ದೊರೆಯಿತು. ವಿವಿಧ ತಳಿಯ ಗೋವುಗಳನ್ನು ಕಂಡು ಜನರು ಸಂತಸ ವ್ಯಕ್ತಪಡಿಸಿದರು. ರಾಜ್ಯದ ವಿವಿಧೆಡೆಯಿಂದ ಬಂದಿದ್ದ ವಿವಿಧ ಹೋಟೆಲ್, ಆಹಾರ ತಯಾರಕರು ತಮ್ಮ ಪ್ರದೇಶದ ರುಚಿಯನ್ನು ದುರ್ಗದ ಜನರಿಗೆ ತೋರಿಸಿದ್ದಾರೆ. ಮೇಲುಕೋಟೆ ಪುಳಿಯೊಗರೆ ಜನರಿಗೆ ಹೆಚ್ಚು ಆಕರ್ಷಣೀಯವಾಗಿತ್ತು. ಮೇಳದ ಯಶಸ್ಸಿಗೆ ಸಹಕರಿಸಿದ ಎಲ್ಲರಿಗೂ ಅಭಿನಂದಿಸುತ್ತೇನೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.