
ಚಿತ್ರದುರ್ಗ: ಬಿ.ಡಿ ರಸ್ತೆಯಲ್ಲಿ ಕೆಎಸ್ಆರ್ಟಿಸಿ ಬಸ್ ಸಂಚಾರ ಬಂದ್ ಮಾಡಿದ ನಂತರ ದಾವಣಗೆರೆ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ತೀವ್ರಗೊಂಡಿದೆ. ರೈಲ್ವೆ ಗೇಟ್ ಹಾಕಿದಾಗ ಬಸ್ಗಳು ಬಸ್ ನಿಲ್ದಾಣದವರೆಗೂ ಸಾಲುಗಟ್ಟಿ ನಿಲ್ಲುತ್ತಿವೆ.
ವಿದ್ಯಾರ್ಥಿಗಳು, ರೈತರು, ಜಿಲ್ಲಾಸ್ಪತ್ರೆ ರೋಗಿಗಳ ವಿರೋಧವನ್ನೂ ಲೆಕ್ಕಿಸದ ಪೊಲೀಸರು ಬೆಂಗಳೂರು, ಚಳ್ಳಕೆರೆ, ಶಿವಮೊಗ್ಗ ಮಾರ್ಗದ ಬಸ್ಗಳನ್ನು ದಾವಣಗೆರೆ ರೈಲ್ವೆ ಗೇಟ್ ಮೂಲಕವೇ ಕಳುಹಿಸುತ್ತಿದ್ದಾರೆ. ನೂರಾರು ಬಸ್ಗಳು ಕಿರಿದಾದ ರಸ್ತೆಯಲ್ಲೇ ತೆರಳಬೇಕಾಗಿದ್ದು, ಟ್ರಾಫಿಕ್ ಜಾಮ್ನಿಂದಾಗಿ ಜನರು ಕಂಗಾಲಾಗುತ್ತಿದ್ದಾರೆ. ಸ್ಥಳೀಯ ಬಡಾವಣೆಗಳ ಜನರಿಗೂ ಇದರಿಂದ ತೊಂದರೆಯಾಗಿದ್ದು ಓಡಾಡಲು ಅನ್ಯಮಾರ್ಗ ಹುಡುಕುವಂತಾಗಿದೆ.
ರೈಲ್ವೆ ಗೇಟ್ ಹಾಕಿದಾಗ ಟ್ರಾಫಿಕ್ ಜಾಮ್ನಲ್ಲಿ ಅರ್ಧಗಂಟೆಗೂ ಹೆಚ್ಚು ಕಾಲ ವ್ಯರ್ಥವಾಗುತ್ತಿದೆ. ರೈಲ್ವೆ ಗೇಟ್ ತೆರೆದ ನಂತರವೂ ವಾಹನಗಳ ಓಡಾಟ ಸಹಜ ಸ್ಥಿತಿಗೆ ಬರುತ್ತಿಲ್ಲ. ಗೇಟ್ನಿಂದ ಬಸ್ ನಿಲ್ದಾಣದವರೆಗೂ ಬಸ್ಗಳು ಮುಂದೆ ಚಲಿಸಲು ಸಾಧ್ಯವಾಗದೇ ನಿಲ್ಲುತ್ತಿವೆ. ಇದರಿಂದ ನಿಲ್ದಾಣಕ್ಕೆ ಬರುವ ಇತರ ಬಸ್ಗಳಿಗೂ ತೊಂದರೆಯುಂಟಾಗುತ್ತಿದೆ. ಚಿತ್ರದುರ್ಗ– ದಾವಣಗೆರೆ ನಡುವೆ ಓಡಾಡುವ ಬಸ್ಗಳು ತಡವಾಗಿ ಚಲಿಸುತ್ತಿವೆ.
‘ರೈಲು ನಿಲ್ದಾಣ ರಸ್ತೆ, ಜಯಲಕ್ಷ್ಮಿ ಬಡಾವಣೆ, ಗಾರೆಹಟ್ಟಿ, ಅಸ್ಗರ್ ಮೊಹಲ್ಲಾ, ಜಿಟಿಆರ್ ಬಡಾವಣೆಗಳ ನಿವಾಸಿಗಳು ಓಡಾಡಲು ತೊಂದರೆಯಾಗಿದೆ. ಟ್ರಾಫಿಕ್ ಜಾಮ್ನಿಂದ ಶಾಲಾ ವಾಹನಗಳು ಟ್ರಾಫಿಕ್ ಜಾಮ್ನಲ್ಲಿ ಸಿಲುಕುತ್ತಿವೆ’ ಎಂದು ಜಯಲಕ್ಷ್ಮಿ ಬಡಾವಣೆ ನಿವಾಸಿಗಳು ತಿಳಿಸಿದರು.
ವಾರ ಗಡುವು: ಬಿ.ಡಿ ರಸ್ತೆಯಲ್ಲಿ ಬಸ್ ಸಂಚಾರ ಸ್ಥಗಿತಗೊಳಿಸಿರುವುದಕ್ಕೆ ಆಕ್ರೊಶ ವ್ಯಕ್ತಪಡಿಸಿರುವ ರೈತಸಂಘದ ಮುಖಂಡರು ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಾರದೊಳಗೆ ಬಿ.ಡಿ ರಸ್ತೆಯಲ್ಲಿ ಬಸ್ ಓಡಿಸದಿದ್ದರೆ ಪ್ರತಿಭಟನೆ ನಡೆಸಲಾಗುವುದು ಎಂದು ಗಡುವು ನೀಡಿದ್ದಾರೆ.
‘ಈ ಕುರಿತು ನಾವು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜೊತೆ ಮಾತನಾಡಿದ್ದೇವೆ. ಈಗಾಗಲೇ ವಿಫಲವಾಗಿರುವ ಅವೈಜ್ಞಾನಿಕ ಕ್ರಮವನ್ನು ಹಿಂದಕ್ಕೆ ಪಡೆಯುವಂತೆ ಒತ್ತಾಯಿಸಿದ್ದೇವೆ. ಜಿಲ್ಲಾಧಿಕಾರಿಯೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳುವುದಾಗಿ ಅವರು ತಿಳಿಸಿದ್ದಾರೆ. ವಾರದೊಳಗೆ ಬಿ.ಡಿ ರಸ್ತೆಯಲ್ಲಿ ಬಸ್ ಬಿಡದಿದ್ದರೆ ಪ್ರತಿಭಟನೆ ಅನಿವಾರ್ಯವಾಗಲಿದೆ’ ಎಂದು ರೈತಸಂಘದ ಉಪಾಧ್ಯಕ್ಷ ಕೆ.ಪಿ. ಭೂತಯ್ಯ ಹೇಳಿದರು.
‘ನಿಲ್ದಾಣದಿಂದ ಚಳ್ಳಕೆರೆ ಗೇಟ್ವರೆಗೆ ಬಸ್ಗಳು 10 ಕಡೆ ಪ್ರಯಾಣಿಕರನ್ನು ಹತ್ತಿಸಿಕೊಳ್ಳುತ್ತವೆ. ಇಲ್ಲಿ ಬಸ್ ಬಂದ್ ಮಾಡಿರುವ ಕಾರಣ ಎಲ್ಲರಿಗೂ ತೀವ್ರ ತೊಂದರೆಯಾಗಿದೆ. ಪೊಲೀಸರು ತಮ್ಮ ಕರ್ತವ್ಯದಿಂದ ತಪ್ಪಿಸಿಕೊಳ್ಳಲು ಬಿ.ಡಿ ರಸ್ತೆಯಲ್ಲಿ ಬಸ್ ಬಂದ್ ಮಾಡಿದ್ದಾರೆ’ ಎಂದು ವಿದ್ಯಾರ್ಥಿಗಳು ಆರೋಪಿಸುತ್ತಾರೆ.
‘ಪ್ರಾಯೋಗಿಕವಾಗಿ ಮಾರ್ಗ ಬದಲಾವಣೆ ಮಾಡಲಾಗಿದೆ. ಜನರ ಪ್ರತಿಕ್ರಿಯೆ ನೋಡಿಕೊಂಡು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಜಿಲ್ಲಾಧಿಕಾರಿ ಕ್ರಮ ಕೈಗೊಳ್ಳಲಿದ್ದಾರೆ’ ಎಂದು ಟ್ರಾಫಿಕ್ ಪೊಲೀಸ್ ಠಾಣೆ ಸಿಬ್ಬಂದಿಯೊಬ್ಬರು ತಿಳಿಸಿದರು.
ಮೇಲ್ಸೇತುವೆ ನಿರ್ಮಾಣ ಯಾವಾಗ?
ದಾವಣಗೆರೆ ರಸ್ತೆಯ ರೈಲ್ವೆ ಕ್ರಾಸಿಂಗ್ ಸಮಸ್ಯೆ ಶೀಘ್ರ ಇತ್ಯರ್ಥಕ್ಕೆ ರೈಲ್ವೆ ಮೇಲ್ಸೇತುವೆ ನಿರ್ಮಾಣಕ್ಕೆ ಅನುಮತಿ ದೊರೆತಿದೆ. ‘ಆದಷ್ಟು ಬೇಗ ರೈಲ್ವೆ ಎಂಜಿನಿಯರಿಂಗ್ ವಿಭಾಗದಿಂದ ಶೀಘ್ರ ಕಾಮಗಾರಿ ಆರಂಭಗೊಳ್ಳಲಿದೆ’ ಎಂದು ಸಂಸದ ಗೋವಿಂದ ಕಾರಜೋಳ ಹೇಳಿದ್ದಾರೆ. ಆದರೆ ದ್ವಿಪಥ ಹಾಗೂ ಚತುಷ್ಫಥ ಮೇಲ್ಸೇತುವೆ ನಿರ್ಮಾಣ ಭೂಸ್ವಾಧೀನ ಸಂಬಂಧ ಗೊಂದಲಗಳಿರುವ ಕಾರಣ ಕಾಮಗಾರಿ ಆರಂಭವಾಗಿಲ್ಲ ಎಂದು ಮೂಲಗಳೂ ತಿಳಿಸಿವೆ. ದಿನಕ್ಕೆ ಹಲವು ಬಾರಿ ಟ್ರಾಫಿಕ್ ಜಾಮ್ನಲ್ಲಿ ಸಿಲುಕುತ್ತಿರುವ ಜನರು ‘ಮೇಲ್ಸೇತುವೆ ಕಾಮಗಾರಿ ಆರಂಭವಾಗುವುದು ಯಾವಾಗ’ ಎಂದು ಪ್ರಶ್ನಿಸುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.