ADVERTISEMENT

ಆರ್‌ಎಸ್‌ಎಸ್ ಸಂಸ್ಥಾಪಕ ಹೆಡಗೇವಾರ್ ಪಠ್ಯ ಕೈಬಿಡುವುದಿಲ್ಲ: ಸಿಎಂ ಬೊಮ್ಮಾಯಿ

​ಪ್ರಜಾವಾಣಿ ವಾರ್ತೆ
Published 4 ಜೂನ್ 2022, 7:02 IST
Last Updated 4 ಜೂನ್ 2022, 7:02 IST
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಚಿತ್ರದುರ್ಗಕ್ಕೆ ಭೇಟಿ ನೀಡಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಚಿತ್ರದುರ್ಗಕ್ಕೆ ಭೇಟಿ ನೀಡಿದ್ದಾರೆ.   

ಚಿತ್ರದುರ್ಗ: ಆರ್‌ಎಸ್‌ಎಸ್ ಸಂಸ್ಥಾಪಕಕೇಶವ ಬಲಿರಾಮ್ ಹೆಡಗೇವಾರ್ ಅವರಿಗೆ ಸಂಬಂಧಿಸಿದ ಪಠ್ಯವನ್ನು ಕೈಬಿಡುವುದಿಲ್ಲ. ಅವರ ಪಠ್ಯ ಇದ್ದರೆ ತಪ್ಪೇನು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಶ್ನಿಸಿದರು.

ಹಿರಿಯೂರು ತಾಲ್ಲೂಕಿನ ದೇವರಕೊಟ್ಟ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೋಹಿತ ಚಕ್ರತೀರ್ಥ ನೇತೃತ್ವದ ಪಠ್ಯಪುಸ್ತಕ ಸಮಿತಿ ಕಾರ್ಯ ಮುಗಿದಿದೆ. ಹೀಗಾಗಿ ಅದನ್ನು ವಿಸರ್ಜನೆ ಮಾಡಲಾಗಿದೆಯೇ ಹೊರತು ರದ್ದು ಮಾಡಿಲ್ಲ. ಹೊಸ ಸಮಿತಿ ರಚನೆಯ ಅವಶ್ಯಕತೆ ಇಲ್ಲ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡಿದರು.

‘ಪಠ್ಯಪುಸ್ತಕ ವಿಚಾರದಲ್ಲಿ ಚರ್ಚೆ ನಡೆದ ಬಳಿಕ ಪರಿಶೀಲಿಸುವುದಾಗಿ ಆರಂಭದಲ್ಲೇ ಹೇಳಿದ್ದೆ. ವಾಸ್ತವಾಂಶದ ಆಧಾರದ ಮೇರೆಗೆ ಕೆಲ ಬದಲಾವಣೆ ಮಾಡಲಾಗುತ್ತಿದೆ. ಮಠಾಧೀಶರ ಒತ್ತಡಕ್ಕೆ ಮಣಿದು ಈ ತೀರ್ಮಾನ ಕೈಗೊಂಡಿಲ್ಲ’ಎಂದು ಹೇಳಿದರು.

ADVERTISEMENT

‘ಪಠ್ಯಪುಸ್ತಕವನ್ನು ನಾನೂ ಗಮನಿಸಿರಲಿಲ್ಲ. ಶುಕ್ರವಾರ ಪಠ್ಯಪುಸ್ತಕ ಪರಿಶೀಲನೆ ಮಾಡಿದೆ. ಬರಗೂರು ರಾಮಚಂದ್ರಪ್ಪ ಸಮಿತಿ ರಚಿಸಿದ್ದ ಪಠ್ಯಕ್ಕೂ ಪರಿಷ್ಕೃತ ಪಠ್ಯಕ್ಕೂ ಒಂದು ವಾಕ್ಯ ಮಾತ್ರ ವ್ಯತ್ಯಾಸವಿದೆ. ಸಾಣೇಹಳ್ಳಿಯ ಪಂಡಿತಾರಾಧ್ಯ ಸ್ವಾಮೀಜಿ ಅವರು ಪ್ರಶ್ನಿಸಿದ ಲಿಂಗದೀಕ್ಷೆ ಬರಗೂರು ಸಮೀತಿಯ ಪಠ್ಯದಲ್ಲಿಯೇ ಇತ್ತು. ಇದನ್ನು ಮಠಾಧೀಶರಿಗೆ ಮನವರಿಕೆ ಮಾಡಿಕೊಡಲಾಗಿದೆ’ಮದು ಹೇಳಿದರು.

‘ನಮ್ಮದು ಬಸವ ಪಥದ ಸರ್ಕಾರ ಎಂದು ಮೊದಲೇ ಹೇಳಿದ್ದೇನೆ. ಬಸವಣ್ಣನವರು ರಚಿಸಿದ ಹಲವಾರು ಅತ್ಯುತ್ತಮ ವಚನಗಳು ಪಠ್ಯದಲ್ಲಿವೆ. ಆದಷ್ಟು ಶೀಘ್ರದಲ್ಲಿ ಮಕ್ಕಳಿಗೆ ಪರಿಷ್ಕೃತ ಪಠ್ಯ ಪುಸ್ತಕ ಒದಗಿಸುತ್ತೇವೆ’ಎಂದರು.

ಶ್ರೀರಂಗಪಟ್ಟಣದ ಮಂದಿರ ಮತ್ತು ಮಸೀದಿ ವಿವಾದಕ್ಕೆ ಸಂಬಂದಿಸಿದ ಪ್ರಶ್ನೆಗೆ ಪ್ರತಿಕ್ರಿಯಿಸಲು ನಿರಾಕರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.