
ಮೊಳಕಾಲ್ಮುರು: ದಿನೇ, ದಿನೇ ಕುಸಿಯುತ್ತಿರುವ ಉಷ್ಣಾಂಶದ ಪರಿಣಾಮ ರೇಷ್ಮೆಹುಳುಗಳು ಗೂಡುಕಟ್ಟುವ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತಿದ್ದು ರೇಷ್ಮೆಗೂಡು ಉತ್ಪಾದಕರು ಕಂಗಾಲಾಗಿದ್ದಾರೆ.
ರಾಜ್ಯದಲ್ಲಿ ಹೆಚ್ಚು ರೇಷ್ಮೆಗೂಡು ಉತ್ಪಾದನೆ ಮಾಡುವ ಜಿಲ್ಲೆಗಳಲ್ಲಿ ಚಿತ್ರದುರ್ಗ ಜಿಲ್ಲೆಯೂ ಒಂದು, ಜಿಲ್ಲೆಯಲ್ಲಿ ಹೆಚ್ಚು ರೇಷ್ಮೆ ಅದರಲ್ಲೂ ಬಿಳಿಗೂಡು (ಬೈವೋಲ್ಟೇನ್) ಗೂಡು ಉತ್ಪಾದನೆಯಲ್ಲಿ ಮೊಳಕಾಲ್ಮುರು ಪ್ರಥಮ ಸ್ಥಾನದಲ್ಲಿದೆ. ಕಳೆದ ವರ್ಷಗಳಿಗೆ ಹೋಲಿಸಿದಲ್ಲಿ ಈ ವರ್ಷ ಶೀತಗಾಳಿ ಹೆಚ್ಚಿರುವುದು ಈ ರೇಷ್ಮೆ ಕೃಷಿ ಮೇಲೆ ಮಾರಕ ಪರಿಣಾಮ ಬೀರಿದೆ ಎನ್ನಲಾಗಿದೆ.
‘ಈ ಭಾಗದಲ್ಲಿ ತುಂಬಾ ವ್ಯವಸ್ಥಿತವಾಗಿ ಗೂಡು ಉತ್ಪಾದನೆ ಕೃಷಿ ಮಾಡಲಾಗುತ್ತಿದೆ, ಹೈಟೆಕ್ ಹುಳು ಸಾಕಣೆ ಮನೆಗಳು, ನೂತನ ತಾಂತ್ರಿಕತೆ ಅಳವಡಿಕೆ, ರೊಟೇಟರ್ ಚಂದ್ರಿಕೆಗಳ ಬಳಕೆ, ಅಗತ್ಯ ಗಾಳಿ, ಬೆಳಕಿನ ವ್ಯವಸ್ಥೆ ಮಾಡಲಾಗಿದೆ. ಆದರೂ ಸಹ ಚಳಿಯ ತೀವ್ರತೆಗೆ ಹುಳುಗಳು ಚಟುವಟಿಕೆ ಇಲ್ಲದೇ ಗೂಡು ಕಟ್ಟುತ್ತಿಲ್ಲ. ಮಧ್ಯರಾತ್ರಿ ಸಮಯದಲ್ಲಿ ಕಾಡುವ ಕೊರೆಯುವ ಚಳಿಗೆ ಹುಳುಗಳು ರೋಗಕ್ಕೆ ತುತ್ತಾಗುತ್ತಿವೆ’ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
‘ಸಾಮಾನ್ಯವಾಗಿ 12-13ನೇ ಮೇವಿಗೆ ಹುಳುಗಳು ಹಣ್ಣಾಗುತ್ತದೆ. ಆಗ ಚಂದ್ರಿಕೆಗಳಿಗೆ ಹುಳು ಬಿಡುತ್ತೇವೆ. ನಂತರ ಗೂಡು ಕಟ್ಟುವ ಪ್ರಕ್ರಿಯೆ ಆರಂಭವಾಗುತ್ತದೆ. ಆದರೆ ಚಳಿಯಿಂದ 19ರಿಂದ 20ನೇ ಮೇವಿಗೆ ಬಂದರೂ ಹುಳುಗಳು ಹಣ್ಣಾಗುತ್ತಿಲ್ಲ, ಚಂದ್ರಿಕೆಗೆ ಬಿಟ್ಟರೂ ಗೂಡು ಕಟ್ಟುತ್ತಿಲ್ಲ. ಇದರಿಂದ ಮೇವು ಹೆಚ್ಚು ಖರ್ಚಾಗುವ ಜತೆಗೆ ಗೂಡಿನ ಇಳುವರಿ ಕುಸಿತವಾಗಿದೆ’ ಎಂದು ಬೆಳೆಗಾರ ಎಚ್.ಎನ್. ಮಂಜುನಾಥ್ ಹೇಳಿದರು.
ರೇಷ್ಮೆಸೊಪ್ಪಿನ ಇಳುವರಿಯೂ ರೋಗಕ್ಕೆ ತುತ್ತಾಗಿ ಕಡಿಮೆಯಾಗಿದೆ. 3 ಎಕರೆ ರೇಷ್ಮೆ ಬೆಳೆ ಇದ್ದಲ್ಲಿ 450 ಮೊಟ್ಟೆ ಹುಳು ಮೇಯಿಸಲು ಸಾಧ್ಯವಿತ್ತು. ಆದರೆ ಈಗ 200ರಿಂದ 220 ಮೊಟ್ಟೆ ಮಾತ್ರ ಮೇಯಿಸುತ್ತಿದ್ದೇವೆ. ಈ ಮೂಲಕ ಶೇ 30ಕ್ಕೂ ಹೆಚ್ಚು ಇಳುವರಿ ಕುಸಿತವಾಗಿದೆ. ಚಳಿ ಹೆಚ್ಚಳವು ಗಾಯದ ಮೇಲೆ ಬರೆ ಎಳೆದಂತಾಗಿದೆ. ಗೂಡು ದರ ಕುಸಿತವಾಗಿಲ್ಲ. ಉಷ್ಣಾಂಶ ಕಾಪಾಡಲು ದೊಡ್ಡ ಬಲ್ಪ್ಗಳನ್ನು ಹಾಕಿದರೂ ಪ್ರಯೋಜನವಾಗುತ್ತಿಲ್ಲ ಎಂದು ಬೆಳೆಗಾರರು ಹೇಳುತ್ತಾರೆ.
ಗಿಡ ಮತ್ತು ಹುಳು ರೋಗಬಾಧೆಯಿಂದ ಸಾಕಷ್ಟು ರೈತರು ಬೆಳೆ ನಾಶ ಮಾಡಿದ್ದಾರೆ. ಹೊಸ ಬೆಳೆಗಾರರು ಸಹವಾಸ ಸಾಕು ಎನ್ನುವಂತಾಗಿದ್ದಾರೆ. ಇಲಾಖೆಯಲ್ಲಿ ಸಿಬ್ಬಂದಿ ಕೊರತೆಯಿಂದಾಗಿ ಅಧಿಕಾರಿಗಳು ಸ್ಥಳಕ್ಕೆ ಬಂದು ತಾಂತ್ರಿಕ ಸಲಹೆ ನೀಡುತ್ತಿಲ್ಲ ಎಂದು ಬೆಳೆಗಾರರು ದೂರಿದ್ದಾರೆ.
‘ಹೀಟರ್, ಕೂಲರ್ ಸೇರಿದಂತೆ ಅಗತ್ಯ ಪರಿಕರಗಳನ್ನು ರಿಯಾಯಿತಿ ದರದಲ್ಲಿ ಬೆಳೆಗಾರರಿಗೆ ಸಿಗುವ ವ್ಯವಸ್ಥೆಯನ್ನು ಸರ್ಕಾರ ಮಾಡಬೇಕು. ತಾಂತ್ರಿಕತೆ ಹೆಚ್ಚಳ ಮಾಡಿಕೊಳ್ಳಿ ಎಂಬ ಸಲಹೆ ಬರೀ ಹೇಳಿಕೆಗೆ ಸೀಮಿತವಾಗಬಾರದು’ ಎಂದು ಬೆಳೆಗಾರ ಎಚ್.ಸಿ.ಪ್ರದೀಪ್ ಹೇಳಿದರು.
‘ರೇಷ್ಮೆಗೂಡು ಉತ್ಪಾದನೆಯು ಸೂಕ್ಷತೆಯಿಂದ ಕೂಡಿದೆ, ಹೆಚ್ಚು ತರಬೇತಿ ಮೂಲಕ ಹೊಸ ಬೆಳೆಗಾರರನ್ನು ರಕ್ಷಿಸಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ಇಲಾಖೆ ಹೆಚ್ಚು ಹೆಚ್ಚು ತರಬೇತಿಗಳನ್ನು ಹಮ್ಮಿಕೊಂಡು ನೆರವಿಗೆ ಬರಬೇಕು’ ಎಂದು ಮಂಜುನಾಥ್ ಹೇಳಿದರು.
ಹೀಟರ್ ಬಳಕೆಗೆ ತಜ್ಞರ ಸೂಚನೆ
‘ತಾಲ್ಲೂಕಿನ ತುಮಕೂರ್ಲಹಳ್ಳಿ, ಕೊಂಡ್ಲಹಳ್ಳಿಯಲ್ಲಿ ಕೆಲವರು ಉಶ್ಣಾಂಶ ಹಾಪಾಡಲು ಸಾಕಣೆ ಮನೆಗಳಲ್ಲಿ ಹೀಟರ್ ಬಳಕೆ ಮಾಡುತ್ತಿದ್ದಾರೆ. ಇದರಿಂದ ಸ್ವಲ್ಪ ಸುಧಾರಣೆಯಾಗಲು ಸಾಧ್ಯವಿದೆ. ಕೊಠಡಿಗೆ ಅಗತ್ಯದಷ್ಟು ಬಳಕೆ ಮಾಡಬೇಕು. ಕಾರ್ಯಾಗಾರಗಳಲ್ಲಿ ಈ ಬಗ್ಗೆ ಜಾಗೃತಿ ಮೂಡಿಸಲಾಗಿದೆ. ಒಟ್ಟಾರೆಯಾಗಿ ಚಳಿ ಹೆಚ್ಚಳದಿಂದ ಈ ವರ್ಷ ಶೇ 20ರಷ್ಟು ಇಳುವರಿ ಕುಸಿತವಾಗಿದೆ ಎಂದು ರೇಷ್ಮೆ ಕೃಷಿ ವಿಸ್ತರಣಾಧಿಕಾರಿ ಮಹೇಶ್ ಮಾಹಿತಿ ನೀಡಿದರು. ‘ಬೆಳೆಗಾರರು ಕಾಲಕ್ಕೆ ತಕ್ಕಂತೆ ಸಿದ್ಧತೆ ಮಾಡಿಕೊಂಡು ರೇಷ್ಮೆ ಕೃಷಿ ಮಾಡುವುದು ಉತ್ತಮ. ಜಾಗತಿಕ ತಾಪಮಾನದ ಪ್ರಭಾವದಿಂದಾಗಿ ವಾತಾವರಣದಲ್ಲಿ ಸಾಕಷ್ಟು ಏರುಪೇರು ಆಗುತ್ತಿದೆ. ರೇಷ್ಮೆ ಕೃಷಿಗೆ 26 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ಸೂಕ್ತ. ಆದರೆ ಈ ವರ್ಷ ಮಧ್ಯರಾತ್ರಿ 14 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗುತ್ತಿದೆ. ಈ ಸಮಯದಲ್ಲಿ ಉಷ್ಣಾಂಶ ಕಾಪಾಡಲು ಹೀಟರ್ ಬೆಳಕಿನ ಶಾಖ ವ್ಯವಸ್ಥೆ ಮಾಡಿಕೊಳ್ಳಬೇಕು. ತಿಳಿವಳಿಕೆ ನೀಡಿದರೂ ರೈತರು ಅನುಷ್ಠಾನ ಮಾಡಿಕೊಳ್ಳುತ್ತಿಲ್ಲ’ ಎಂದು ರೇಷ್ಮೆಕೃಷಿ ವಿಜ್ಞಾನಿ ಶ್ರೀನಿವಾಸ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.