ADVERTISEMENT

ಸಂವಿಧಾನ ದಿನಾಚರಣೆ ಅಂಗವಾಗಿ ಅಮೆಜಾನ್‌ನ ಕಿವುಡ, ಮೂಗ ಜೋಡಿ ದಾಂಪತ್ಯ ಜೀವನಕ್ಕೆ

ದಂಪತಿಗಳಿಬ್ಬರೂ ಅಮೆಜಾನ್ ಸಂಸ್ಥೆ ಉದ್ಯೋಗಿಗಳು

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2021, 6:28 IST
Last Updated 27 ನವೆಂಬರ್ 2021, 6:28 IST
ಸಾಣೇಹಳ್ಳಿ ತರಳಬಾಳು ಶಾಖಾ ಮಠದಲ್ಲಿ ಶುಕ್ರವಾರ ನಡೆದ ಸಂವಿಧಾನ ದಿನಾಚರಣೆಯಲ್ಲಿ ಬೆಂಗಳೂರಿನಲ್ಲಿ ಅಮೆಜಾನ್ ಸಂಸ್ಥೆ ಉದ್ಯೋಗಿಗಳಾದ ಎಂ.ಭೂಮಿಕಾ ಮತ್ತು ಎಸ್‌.ಅಶೋಕ್‌ಕುಮಾರ್ ವಿವಾಹ ಜೀವನಕ್ಕೆ ಕಾಲಿಟ್ಟರು
ಸಾಣೇಹಳ್ಳಿ ತರಳಬಾಳು ಶಾಖಾ ಮಠದಲ್ಲಿ ಶುಕ್ರವಾರ ನಡೆದ ಸಂವಿಧಾನ ದಿನಾಚರಣೆಯಲ್ಲಿ ಬೆಂಗಳೂರಿನಲ್ಲಿ ಅಮೆಜಾನ್ ಸಂಸ್ಥೆ ಉದ್ಯೋಗಿಗಳಾದ ಎಂ.ಭೂಮಿಕಾ ಮತ್ತು ಎಸ್‌.ಅಶೋಕ್‌ಕುಮಾರ್ ವಿವಾಹ ಜೀವನಕ್ಕೆ ಕಾಲಿಟ್ಟರು   

ಸಾಣೇಹಳ್ಳಿ (ಹೊಸದುರ್ಗ): ತಾಲ್ಲೂಕಿನಸಾಣೇಹಳ್ಳಿ ತರಳಬಾಳು ಶಾಖಾ ಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯದಲ್ಲಿ ಇಲ್ಲಿನ ಶಿವಕುಮಾರ ರಂಗಮಂದಿರದಲ್ಲಿ ಶುಕ್ರವಾರ ಸಂವಿಧಾನ ದಿನಾಚರಣೆ, ಕಲ್ಯಾಣ ಮಹೋತ್ಸವ ಹಾಗೂ ಸರ್ವಶರಣ ಸಮ್ಮೇಳನ ನಡೆಯಿತು.

ಸಂವಿಧಾನ ದಿನಾಚರಣೆ ಅಂಗವಾಗಿ ಅಂತರ್ಜಾತಿ ಕಿವುಡ, ಮೂಗ ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು ವಿಶೇಷವಾಗಿತ್ತು.

ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ,‘ನಮ್ಮ ದೇಶದಲ್ಲಿ ಅನೇಕ ಧರ್ಮಗಳಿವೆ. ಆದರೆ ಸಂವಿಧಾನವೇ ರಾಷ್ಟ್ರ ಧರ್ಮ. ಧರ್ಮಗಳು ಮತ್ತು ಸಂವಿಧಾನ ಪರಸ್ಪರ ಪೂರಕವೇ ಹೊರತು ವಿರುದ್ಧವಾದವುಗಳಲ್ಲ. ಅದರಲ್ಲೂ ಲಿಂಗಾಯತ ಧರ್ಮದ ಬಹುತೇಕ ಆಶಯಗಳು ಸಂವಿಧಾನದಲ್ಲಿವೆ. ಸಂವಿಧಾನದ ಆಶಯಗಳು ಲಿಂಗಾಯತ ಧರ್ಮದಲ್ಲಿವೆ. ಧರ್ಮಗಳು ಜನರಲ್ಲಿ ಧರ್ಮಾಂಧತೆ ಬೆಳೆಸಿ ಸಂವಿಧಾನದ ಆಶಯಗಳಿಗೆ ಮಸಿ ಬಳಿಯಬಾರದು’ ಎಂದು ತಿಳಿಸಿದರು.

ADVERTISEMENT

‘ಎಂ.ಭೂಮಿಕಾ ಮತ್ತು ಎಸ್‌.ಅಶೋಕ್‌ಕುಮಾರ್ ಬೆಂಗಳೂರಿನ ಅಮೇಜಾನ್ ಕಂಪನಿಯಲ್ಲಿ ಉದ್ಯೋಗಿಗಳಾಗಿದ್ದಾರೆ. ಅವರ ವಿವಾಹ ಸಂವಿಧಾನದಿನದಂದೇ ನಡೆಯುತ್ತಿದೆ. ಇಬ್ಬರೂ ಕಿವುಡರೂ ಮತ್ತು ಮೂಗರೂ ಆಗಿರುವುದು ಹಾಗೂ ಭಿನ್ನ-ಭಿನ್ನ ಜಾತಿಯವರಾಗಿದ್ದರೂ ಪರಸ್ಪರ ಪ್ರೀತಿಸಿ, ಪೋಷಕರ ಸಮ್ಮತಿ ಪಡೆದು ಮದುವೆಯಾಗುತ್ತಿರುವುದು ಅತ್ಯಂತ ವಿಶೇಷವಾದ ಸಂಗತಿ’ ಎಂದರು.

ಸ್ಥಳೀಯ ಸಲಹಾ ಸಮಿತಿಯ ಅಧ್ಯಕ್ಷ ಎ.ಸಿ.ಚಂದ್ರಪ್ಪ, ಎಸ್.ಜಿ.ರಾಮಪ್ಪ ಮಾತನಾಡಿದರು.

ನಿವೃತ್ತ ಪ್ರಾಚಾರ್ಯ ಐ.ಜಿ.ಚಂದ್ರಶೇಖರಯ್ಯ, ವರನ ಪೋಷಕರಾದ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲ್ಲೂಕಿನ ಚಿಣ್ಣಾಪುರದ ನಳಿನ, ಶಿವಕುಮಾರ್ ಹಾಗೂ ವಧುವಿನ ಪೋಷಕರಾದ ಕಲಬುರಗಿ ಜಿಲ್ಲೆಯ ಆಳಂದ ತಾಲ್ಲೂಕಿನ ಕಡಗಂಚಿ ಗ್ರಾಮದ ಮಲ್ಲಿಕಾರ್ಜುನಪ್ಪ, ಆನಂದಮ್ಮ, ಕಾಶಿನಾಥ್ ನಿವೃತ್ತ ಎಎಸ್‌ಐ ಮಹೇಂದ್ರಪ್ಪಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.