ADVERTISEMENT

ಸೆಲ್ಫಿ ವಿಡಿಯೊ ಮಾಡಿಟ್ಟು ಆತ್ಮಹತ್ಯೆ

Crime suicide

​ಪ್ರಜಾವಾಣಿ ವಾರ್ತೆ
Published 21 ಜೂನ್ 2019, 13:25 IST
Last Updated 21 ಜೂನ್ 2019, 13:25 IST
ಪವನ್‌
ಪವನ್‌   

ಚಿತ್ರದುರ್ಗ: ಜೀವನದಲ್ಲಿ ಜಿಗುಪ್ಸೆಗೊಂಡ ಯುವಕನೊಬ್ಬ ಸೆಲ್ಫಿ ವಿಡಿಯೊ ಮಾಡಿ ಹೊಂಡಕ್ಕೆ ಹಾರಿ ಶುಕ್ರವಾರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಪವನ ಕುಮಾರ್‌ (20) ಮೃತ ಯುವಕ. ಯುವಕನ ಊರು ಸೇರಿದಂತೆ ಇತರ ಮಾಹಿತಿ ಲಭ್ಯವಾಗಿಲ್ಲ. ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದ ಈತ ಮೋಸ ಹೋಗಿದ್ದಾಗಿ ಹೇಳಿಕೊಂಡಿದ್ದಾನೆ.

ನಗರದ ಹೊರವಲಯದ ಜೋಗಿಮಟ್ಟಿ ಸಮೀಪದ ಕರುವರ್ತಿ ವಡ್ಡಿನ ಏರಿಯ ಮೇಲೆ ನಡೆದಾಡುತ್ತ ಸೆಲ್ಫಿ ವಿಡಿಯೊ ಮಾಡಿದ್ದಾನೆ. ‘ಚಿತ್ರದುರ್ಗದಲ್ಲಿರುವ ಅಕ್ಕ–ಭಾವ ಸ್ವಂತ ಮಗನಂತೆ ನೋಡಿಕೊಂಡಿದ್ದಾರೆ. ಆದರೆ, ಜೀವನದಲ್ಲಿ ಕೆಲವರನ್ನು ನಂಬಿ ಮೋಸ ಹೋಗಿದ್ದೇನೆ. ಮುಂದಿನ ಜನ್ಮ ಇದ್ದರೆ ಒಳ್ಳೆಯ ಹುಡುಗನಾಗಿ ಬಾಳುತ್ತೇನೆ ಫ್ರೆಂಡ್ಸ್‌’ ಎಂದು ವಿಡಿಯೊದಲ್ಲಿ ಹೇಳಿಕೊಂಡಿದ್ದಾನೆ.

ADVERTISEMENT

ಗುರುವಾರ ಈ ವಿಡಿಯೊ ಮಾಡಿ ವಾಟ್ಸ್‌ ಆ್ಯಪ್‌ ಸ್ಟೇಟಸ್‌ಗೆ ಹಾಕಿಕೊಂಡಿದ್ದನು. ಇದನ್ನು ಗಮನಿಸಿ ಗಾಬರಿಗೊಂಡ ಪವನ್‌ ಸ್ನೇಹಿತರು ಹುಡುಕಾಟ ನಡೆಸಿದ್ದರು. ವಿಡಿಯೊ ಹಿನ್ನೆಲೆಯಲ್ಲಿ ಕಾಣಿಸಿಕೊಂಡ ದೃಶ್ಯದ ಆಧಾರದ ಮೇರೆಗೆ ಕರುವರ್ತಿ ವಡ್ಡಿನ ಬಳಿಯೂ ಪರಿಶೀಲಿಸಿದ್ದರು. ಶುಕ್ರವಾರ ಬೆಳಿಗ್ಗೆ ಮೃತದೇಹ ನೀರಿನಲ್ಲಿ ತೇಲುತ್ತಿರುವುದನ್ನು ಗಮನಿಸಿದ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದರು.

ಚಾಮರಾಜನಗರ ಜಿಲ್ಲೆ ಎಂದು ಹೇಳಿಕೊಂಡಿದ್ದ ಪವನ್‌ ಅನಾಥನೆಂದು ನಂಬಿಸಿದ್ದನು. ಮೊಬೈಲ್‌ ಸಿಮ್‌ ಹಾಸನದ ಅರಕಲಗೂಡು ವಿಳಾಸದಲ್ಲಿದೆ. ಕರ್ನಾಟಕ ಬ್ಯಾಂಕ್‌ ಸಮೀಪದ ಸಣ್ಣ ಹೋಟೆಲ್‌ನಲ್ಲಿ ಕೆಲಸ ಮಾಡಿಕೊಂಡಿದ್ದನು. ಬೆಳಿಗ್ಗೆ ಹಾಲು ಹಾಕುವ ಕೆಲಸವನ್ನು ಮಾಡುತ್ತಿದ್ದನು ಎಂದು ಕೋಟೆ ಠಾಣೆಯ ‍ಪೊಲೀಸರು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.