ಚಿತ್ರದುರ್ಗ: ಹಿರಿಯೂರು ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಕಡಲೆ ಬೆಳೆ ಸಂಪೂರ್ಣ ನಾಶವಾಗಿದೆ. ಆದ್ದರಿಂದ ಸೂಕ್ತ ಪರಿಹಾರ ಕೊಡಿಸಬೇಕು ಎಂದು ಜಿಲ್ಲಾಡಳಿತಕ್ಕೆ ಆಗ್ರಹಿಸಿ ಯರಬಳ್ಳಿ, ಕಂದಿಕೆರೆ ಗ್ರಾಮಸ್ಥರು ಸೋಮವಾರ ಉಪವಿಭಾಗಾಧಿಕಾರಿಗೆ ಮನವಿ ಸಲ್ಲಿಸಿದರು.
ಯರಬಳ್ಳಿ, ಕಂದಿಕೆರೆ, ಹುಲಿಕುಂಟೆ, ಕಳವಿಭಾಗಿ ಗ್ರಾಮಗಳಲ್ಲಿ ಅಕ್ಟೋಬರ್ ಮತ್ತು ನವೆಂಬರ್ ತಿಂಗಳಿನಲ್ಲಿ ಬಿತ್ತನೆ ಮಾಡಿದ್ದ ಕಡಲೆ ಬೆಳೆ ಹಿಂದಿನ ತಿಂಗಳು ಎಡೆಬಿಡದೆ ಸುರಿದ ಮಳೆಯಿಂದಾಗಿ ಕೊಳೆತು ನಾಶವಾಗಿದೆ. ಈ ಭಾಗಗಳ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಅಳಲು ತೋಡಿಕೊಂಡರು.
2,500 ಎಕರೆಯಲ್ಲಿ ಕಡಲೆ ಬೆಳೆ ನಾಶವಾಗಿದೆ. ಆದರೆ, ಈವರೆಗೂ ಕೃಷಿ, ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿ ನಷ್ಟ ಅನುಭವಿಸಿರುವ ರೈತರ ಸಮಸ್ಯೆ ಆಲಿಸಲು ಮುಂದಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
‘ಬೆಳೆ ವಿಮೆ ಪಾವತಿಸಿದ್ದೇವೆ. ಆದರೆ, ವಿಮಾ ಕಂಪನಿಯವರು ಕೂಡ ಭೇಟಿ ನೀಡಿ ಪರಿಶೀಲನೆ ನಡೆಸಲು ಮುಂದಾಗಿಲ್ಲ. ಸಾಲ ಮಾಡಿ ಕಡಲೆ ಬಿತ್ತನೆ ಮಾಡಿದ ರೈತರ ಪಾಡು ಹೇಳತೀರದಂತಾಗಿದೆ. ಕೂಡಲೇ ಬೆಳೆ ನಷ್ಟದ ಸರ್ವೆ ಕೈಗೊಂಡು ಪರಿಹಾರ ಒದಗಿಸುವ ಮೂಲಕ ಅನುಕೂಲ ಮಾಡಿಕೊಡಬೇಕು’ ಎಂದು ಕೋರಿದರು.
ಯರಬಳ್ಳಿಯ ಪಿ.ಟಿ.ರಾಜು, ಕಂದಿಕೆರೆ ಗ್ರಾಮಸ್ಥರಾದ ಎಸ್.ಆರ್.ತಿಪ್ಪೇಸ್ವಾಮಿ, ಜಿ.ಕೆ.ತಿಪ್ಪೇಸ್ವಾಮಿ, ಜೀವ, ಕೆ.ರಘುನಾಥ್, ಗೋವಿಂದರಾಜು, ಕೆ.ದೇವರಾಜ್, ಆರ್.ನಾಗರಾಜ್, ಎಸ್.ತಿಪ್ಪೇಸ್ವಾಮಿ, ಪ್ರಸನ್ನಕುಮಾರ್, ಎಂ.ಜಿ.ರಂಗಸ್ವಾಮಿ, ವಿ.ನಾಗರಾಜ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.