ಚಿತ್ರದುರ್ಗ: ಹಿರಿಯೂರು ತಾಲ್ಲೂಕಿನಲ್ಲಿ ಪ್ರಸಕ್ತ ಮುಂಗಾರು ಹಂಗಾಮಿನ ಜೂನ್ ಮತ್ತು ಜುಲೈ ತಿಂಗಳಿನಲ್ಲಿ ಶೇ 48ರಷ್ಟು ಮಳೆ ಕೊರತೆಯಾಗಿದೆ. ತಾಲ್ಲೂಕಿನ ಒಟ್ಟು ಕೃಷಿ ಭೂಮಿ ಪೈಕಿ ಶೇ 14.66ರಷ್ಟು ಮಾತ್ರ ಬಿತ್ತನೆಯಾಗಿದ್ದು, ಬೆಳೆ ವಿಮೆ ತುಂಬಿದ ರೈತರಿಗೆ ನಿಯಮಾನುಸಾರ ಶೇ 25ರಷ್ಟು ವಿಮಾ ಪರಿಹಾರ ನೀಡಲು ಸರ್ಕಾರಕ್ಕೆ ಶಿಫಾರಸು ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಹೇಳಿದರು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸೋಮವಾರ ಕೃಷಿ ಇಲಾಖೆ, ವಿಮಾ ಕಂಪನಿ ಹಾಗೂ ರೈತ ಮುಖಂಡರೊಂದಿಗೆ ಸಭೆ ನಡೆಸಿ ಅವರು ಮಾತನಾಡಿದರು.
‘ತಾಲ್ಲೂಕಿನ 40,510 ಹೆಕ್ಟೇರ್ ಕೃಷಿ ಭೂಮಿ ಪೈಕಿ ಕೇವಲ 5,939 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಆಗಸ್ಟ್ ತಿಂಗಳ ಮಳೆಯಿಂದ ಬಿತ್ತನೆಗೆ ಏನು ಪ್ರಯೋಜನವಾಗಿಲ್ಲ. ಹಿರಿಯೂರಿನ ಕಸಬಾ ಹೋಬಳಿಯಲ್ಲಿ 9,045 ಹೆಕ್ಟೇರ್ ಕೃಷಿ ಭೂಮಿ ಪೈಕಿ 947 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆಯಾಗಿದೆ. ಐಮಂಗಲ ಹೋಬಳಿಯಲ್ಲಿ 9,385 ಹೆಕ್ಟೇರ್ ಪೈಕಿ 1,748 ಹೆಕ್ಟೇರ್, ಜೆ.ಜಿ.ಹಳ್ಳಿ ಹೋಬಳಿಯ 9,965 ಹೆಕ್ಟೇರ್ ಪೈಕಿ, 1,313 ಹೆಕ್ಟೇರ್, ಧರ್ಮಪುರ ಹೋಬಳಿಯ 12,115 ಹೆಕ್ಟೇರ್ ಪೈಕಿ 2,468 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ.
ಹಿರಿಯೂರು ತಾಲ್ಲೂಕಿನಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ 9,410 ರೈತರು ನೋಂದಣಿಯಾಗಿದ್ದು, ಅಂದಾಜು ₹ 1.62 ಕೋಟಿ ವಿಮಾ ಕಂತು ಪಾವತಿಸಿದ್ದಾರೆ.
ಸರ್ಕಾರದ ಅಧಿಸೂಚನೆಯಂತೆ ಶೇ 75 ಕ್ಕಿಂತ ಹೆಚ್ಚಿನ ಕ್ಷೇತ್ರದಲ್ಲಿ ಬಿತ್ತನೆ ವಿಫಲಗೊಂಡರೆ, ವಿಮಾ ಮೊತ್ತದ ಗರಿಷ್ಠ ಶೇ 25ರಷ್ಟು ಪರಿಹಾರವನ್ನು ವಿಮಾ ಸಂಸ್ಥೆ ನೀಡಿ, ಮುಂದಿನ ಅವಧಿಯ ವಿಮೆಯನ್ನು ರದ್ದುಪಡಿಸಬೇಕು. ಜಂಟಿ ಸಮೀಕ್ಷಾ ವರದಿಯನ್ನು ಅನುಮೋದಿಸಿ ವಿಮಾ ಕಂಪನಿ ನಷ್ಟ ಪರಿಹಾರ ನೀಡುವಂತೆ ಶಿಫಾರಸು ಮಾಡಲಾಗುವುದು ಎಂದರು.
ಸಭೆಯಲ್ಲಿ ಜಂಟಿ ಕೃಷಿ ನಿರ್ದೇಶಕ ಬಿ.ಮಂಜುನಾಥ್, ರೈತ ಮುಖಂಡರಾದ ಕೆ.ಟಿ.ತಿಪ್ಪೇಸ್ವಾಮಿ, ಹಂಪಯ್ಯನಮಾಳಿಗೆ ಧನಂಜಯ, ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.