ADVERTISEMENT

ಚಳ್ಳಕೆರೆ: ‘ವೃತ್ತಿ ಆಧಾರಿತ ಕೌಶಲ ಬೆಳೆಸಿಕೊಳ್ಳಿ’

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2023, 5:24 IST
Last Updated 12 ಫೆಬ್ರುವರಿ 2023, 5:24 IST
ಚಳ್ಳಕೆರೆ ಸರ್ಕಾರಿ ಕೈಗಾರಿಕಾ ತರಬೇತಿ ಕೇಂದ್ರದಲ್ಲಿ ಶನಿವಾರ ನಡೆದ ಉದ್ಯೋಗ ಮೇಳದಲ್ಲಿ ಶಾಸಕ ಟಿ. ರಘುಮೂರ್ತಿ ಮಾತನಾಡಿದರು
ಚಳ್ಳಕೆರೆ ಸರ್ಕಾರಿ ಕೈಗಾರಿಕಾ ತರಬೇತಿ ಕೇಂದ್ರದಲ್ಲಿ ಶನಿವಾರ ನಡೆದ ಉದ್ಯೋಗ ಮೇಳದಲ್ಲಿ ಶಾಸಕ ಟಿ. ರಘುಮೂರ್ತಿ ಮಾತನಾಡಿದರು   

ಚಳ್ಳಕೆರೆ: ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳಲ್ಲಿ ಪಠ್ಯ ವಿಷಯದ ಜತೆಗೆ ವೃತ್ತಿ ಆಧಾರಿತ ಕೌಶಲ ಬೆಳೆಸಬೇಕು ಎಂದು ಶಾಸಕ ಟಿ. ರಘುಮೂರ್ತಿ ಸಲಹೆ ನೀಡಿದರು.

ಬೆಂಗಳೂರು ಜೀವನೋಪಾಯ ಇಲಾಖೆ, ಜಿಲ್ಲಾ ಕೌಶಲಾಭಿವೃದ್ಧಿ ಉದ್ಯಮಶೀಲತೆ, ಜಿಲ್ಲಾ ಕೌಶಲ ಮಿಷನ್ ಮತ್ತು ಉದ್ಯೋಗ ವಿನಿಮಯ ಕೇಂದ್ರಗಳ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ಉದ್ಯೋಗ ಮೇಳದಲ್ಲಿ ಮಾತನಾಡಿದರು.

ಟಿ.ವಿ., ಮೊಬೈಲ್, ಸಾಮಾಜಿಕ ಜಾಲತಾಣಗಳನ್ನು ಕಲಿಕೆಗೆ ಪೂರಕವಾಗಿ ಬಳಸಬೇಕೇ ಹೊರತು ಅವುಗಳನ್ನು ದುರುಪಯೋಗಪಡಿಸಿಕೊಳ್ಳಬಾರದು ಎಂದು ಸಲಹೆ ನೀಡಿದರು.

ADVERTISEMENT

‘ವಿದ್ಯಾರ್ಥಿಗಳು, ಅತಿ ಹೆಚ್ಚು ಜ್ಞಾನ ಹೊಂದಬೇಕು. ಇದರಿಂದ ಸ್ವರ್ಧಾ ಜಗತ್ತಿನಲ್ಲಿ ಎದುರಾಗುವ ಹಲವು ಸವಾಲುಗಳನ್ನು ಎದುರಿಸಲು ಸಾಧ್ಯವಾಗುತ್ತದೆ‘ ಎಂದು ಚಿತ್ರದುರ್ಗ ಸಮುದಾಯ ಸಂಘಟನಾ ಅಧಿಕಾರಿ ಪಾಲಯ್ಯ ಕಿವಿಮಾತು ಹೇಳಿದರು.

ಜಿಲ್ಲಾ ಕೌಶಲ ಅಭಿವೃದ್ಧಿ ಅಧಿಕಾರಿ ಕೆ. ಗೋಪಾಲರೆಡ್ಡಿ, ಕೌಶಲ ಅಭಿವೃದ್ಧಿ ಇಲಾಖೆ ಜಿಲ್ಲಾ ವ್ಯವಸ್ಥಾಪಕ ಅತೀಕ್ ರೆಹಮಾನ್, ಸರ್ಕಾರಿ ಕೈಗಾರಿಕಾ ತರಬೇತಿ ಕೇಂದ್ರದ ಪ್ರಾಂಶುಪಾಲ ಸತ್ಯಣ್ಣ ಮಾತನಾಡಿದರು.

ನಗರಸಭೆ ಅಧ್ಯಕ್ಷೆ ಸುಮಕ್ಕ ಅಂಜನಪ್ಪ, ಉಪಾಧ್ಯಕ್ಷೆ ಮಂಜುಳಾ ಆರ್. ಪ್ರಸನ್ನಕುಮಾರ್, ಸದಸ್ಯ ರಮೇಶ್‍ಗೌಡ, ಉಪನ್ಯಾಸಕ ಮಂಜುನಾಥ್, ಉದ್ಯಮಶೀಲತಾ ತರಬೇತಿ ಕೇಂದ್ರದ ಕಿರಣ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.