
ಧರ್ಮಪುರ: ಹೂವಿನಹೊಳೆ ಗ್ರಾಮಸ್ಥರ ಬಹು ದಿನಗಳ ಬೇಡಿಕೆ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಿಸಲು ಈಗಾಗಲೇ ₹ 25 ಕೋಟಿ ವೆಚ್ಚದ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. ಬಹು ಬೇಗ ಬೇಡಿಕೆ ಈಡೇರಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ಭರಸವಸೆ ನೀಡಿದರು.
ಸಮೀಪದ ಹೂವಿನಹೊಳೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಳೇ ವಿದ್ಯಾರ್ಥಿಗಳು, ಎಸ್ಡಿಎಂಸಿ ಸದಸ್ಯರು, ಹೂವಿನಹೊಳೆ ಪ್ರತಿಷ್ಠಾನ ಮತ್ತು ದಾನಿಗಳ ಸಹಕಾರದಿಂದ ಶಾಲೆಗೆ ನಿರ್ಮಿಸಲಾಗಿದ್ದ ಮೂರು ನೂತನ ಕೊಠಡಿಗಳ ಉದ್ಘಾಟನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಎಲ್ಲಾ ಪ್ರಗತಿಗೂ ಶಿಕ್ಷಣವೇ ಕೀಲಿ ಕೈ ಇದ್ದಂತೆ. ಶಿಕ್ಷಕರು ಗುಣಮಟ್ಟದ ಬೋಧನೆಗೆ ಹೆಚ್ಚು ಪ್ರಾಶಸ್ತ್ಯ ನೀಡಬೇಕು. ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು. ಹಳೇ ವಿದ್ಯಾರ್ಥಿಗಳು ಶಾಲೆಯ ಋಣ ತೀರಿಸುವ ಕೆಲಸವನ್ನು ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಶಾಲೆಗೆ ಬೇಕಾಗಿರುವ ಮೂಲ ಸೌಕರ್ಯಗಳ ಅಭಿವೃದ್ಧಿಗೆ ಶಾಸಕರ ಅನುದಾನವನ್ನು ನೀಡುವುದಾಗಿ ಭರವಸೆ ನೀಡಿದರು.
‘ಸುಸಜ್ಜಿತ ಕಟ್ಟಡವನ್ನು ಹೊಂದಿರುವ ಈ ಶಾಲೆಗೆ ಆಡಿಟೋರಿಯಂ ನಿರ್ಮಾಣಕ್ಕಾಗಿ ₹ 10 ಲಕ್ಷ ಅನುದಾನವನ್ನು ಎರಡು ಕಂತುಗಳಲ್ಲಿ ಶಾಸಕರ ಅನುದಾನದಲ್ಲಿ ನೀಡುತ್ತೇನೆ’ ಎಂದು ವಿಧಾನ ಪರಿಷತ್ ಸದಸ್ಯ ಡಿ.ಟಿ. ಶ್ರೀನಿವಾಸ್ ತಿಳಿಸಿದರು.
ಸತ್ಯ ರಂಗಣ್ಣ, ಪತ್ರಕರ್ತ ಪ್ರಕಾಶ್, ಮಾಲತೇಶ್ ಅರಸ್, ವೀರುಪಾಟೀಲ್, ನಿರಂಜನಮೂರ್ತಿ, ಅಕ್ಕ ಅನು, ರಾಘವೇಂದ್ರ, ಪದ್ಮಶಾಲಿ, ಮಹೇಶ್, ದೊಡ್ಡಿ ಚಂದ್ರಶೇಖರ್, ಎಸ್. ಮಂಜುನಾಥ್ ಅವರನ್ನು ಸನ್ಮಾನಿಸಲಾಯಿತು.
ಬಿಇಒ ತಿಪ್ಪೇಸ್ವಾಮಿ, ಬಿಆರ್ಸಿ ಆರ್.ಟಿ. ಶ್ರೀನಿವಾಸ್, ಹೂವಿನಹೊಳೆ ಪ್ರತಿತಿಷ್ಠಾನದ ಜೆ. ನಂದಿ ಹೂವಿನಹೊಳೆ, ಖಾಸಿಂ ಆಲಿ, ಕೆ. ಅಭಿನಂದನ್, ರಂಗಸ್ವಾಮಿ, ಶಿವಕುಮಾರ್, ಶ್ರೀನಿವಾಸ್, ಜಯಮ್ಮ, ರಾಘವೇಂದ್ರ, ಯಶವಂತ್ ಉಪಸ್ಥಿತರಿದ್ದರು.