
ಧರ್ಮಪುರ: ಇಲ್ಲಿನ ಕೆರೆ ಕೋಡಿ ಹತ್ತಿರ ಬೂದು ನೀರು ನಿರ್ವಹಣಾ ಘಟಕ ಸ್ಥಾಪನೆಗೆ ಜಿಲ್ಲಾ ಪಂಚಾಯಿತಿ ಸಿಇಒ ಆಕಾಶ್ ಮಂಗಳವಾರ ಸ್ಥಳ ಪರಿಶೀಲನೆ ನಡೆಸಿದರು.
ಧರ್ಮಪುರ ಗ್ರಾಮದಲ್ಲಿ ಚರಂಡಿ ನೀರು ಹರಿದು ಹಳ್ಳ ಸೇರುತ್ತದೆ. ಇದರಿಂದ ಕೊಳಚೆ ಪ್ರದೇಶ ನಿರ್ಮಾಣವಾಗಿದೆ. ಚರಂಡಿಯ ನೀರು ಪಂಚಲಿಂಗೇಶ್ವರ ಸಮೂಹ ಶಿಕ್ಷಣ ಸಂಸ್ಥೆ ಮೈದಾನದ ಒಂದು ಕಡೆ ಮತ್ತು ಬಹುತೇಕ ಕೆರೆ ಕೋಡಿ ಜಾಗದಲ್ಲಿ ಬಂದು ಸೇರುತ್ತದೆ. ಬೂದು ನೀರು ನಿರ್ವಹಣಾ ಘಟಕ ಸ್ಥಾಪನೆ ಮಾಡುವುದರಿಂದ ಕೊಳಚೆ ನೀರು ಹಳ್ಳ ಸೇರುವುದನ್ನು ತಪ್ಪಿಸಬಹುದು. ಇದರಿಂದ ಚರಂಡಿ ನೀರು ಸಂಸ್ಕರಣಗೊಂಡು ಎರೆ ಹುಳು ಸಾಕಾಣಿಕೆಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.
ಗ್ರಾಮದಲ್ಲಿ ಸ್ವಚ್ಚತೆ ಮರೀಚಿಕೆಯಾಗಿದ್ದು, ಸಾಂಕ್ರಾಮಿಕ ರೋಗ ಹರಡದಂತೆ ನಿಗಾ ವಹಿಸಬೇಕು ಎಂದು ತಾಕೀತು ಮಾಡಿದರು.
ಇದೇ ಸಂದರ್ಭದಲ್ಲಿ ಅಂಗವಿಕಲ ಅರಳೀಕೆರೆ ಶಿವಮೂರ್ತಿಯನ್ನು ಕಂಡು ಅಂಗವಿಕಲ ವೇತನ ಸಕಾಲದಲ್ಲಿ ಬರುತ್ತಿದೆಯೇ ಎಂದು ವಿಚಾರಿಸಿದರು.
ಇಒ ಡಾ.ಪ್ರಮೋದ್, ಕಾರ್ಯನಿರ್ವಾಹಕ ಎಂಜಿನಿಯರ್ ಅಮರ್ ನಾಥ್ ಜೈನ್, ಸಿಡಿಡಿ ಭಾರತದ ಕಾರ್ಯನಿರ್ವಾಹಕಿ ರೋಹಿಣಿ, ಧರ್ಮಪುರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ನೂರ್ ಜಾನ್ ಅಮಾನುಲ್ಲಾ,
ಸಹಾಯಕ ಕಾರ್ಯಾನಿರ್ವಾಹಕ ಎಂಜಿನಿಯರ್ ಹಸನ್ ಭಾಷ, ಧರ್ಮಪುರ ಗ್ರಾಮ ಪಂಚಾಯಿತಿ ಸದಸ್ಯರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.