
ಹಿರಿಯೂರು: ಗ್ರಾಮೀಣ ಭಾಗದ ಜನರ ಕಲಾವಂತಿಕೆ, ಗ್ರಾಮೀಣ ಸಂಸ್ಕೃತಿಯ ಸೊಗಡನ್ನು ನಾಡಿಗೆ ಪರಿಚಯಿಸುವಲ್ಲಿ ಸಂಗೀತ ಮತ್ತು ನಾಟಕಗಳು ಪ್ರಮುಖ ಪಾತ್ರ ವಹಿಸಿವೆ ಎಂದು ಶನೇಶ್ವರಸ್ವಾಮಿ ದೇವಸ್ಥಾನದ ಪ್ರಧಾನ ಅರ್ಚಕ ರಾಮಣ್ಣಸ್ವಾಮಿ ತಿಳಿಸಿದರು.
ತಾಲ್ಲೂಕಿನ ಬ್ಯಾರಮಡು ಗ್ರಾಮದ ಶನೇಶ್ವರ ಸ್ವಾಮಿ ದೇಗುಲದ ಆವರಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಹೊಸದುರ್ಗದ ಗುರು ರಾಘವೇಂದ್ರ ಸಾಂಸ್ಕೃತಿಕ ಕಲಾಸಂಘದ ನೇತೃತ್ವದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಗಾಯನ ಕಲೋತ್ಸವ ಹಾಗೂ ಶನಿಪ್ರಭಾವ ನಾಟಕದ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
‘ಕೃಷಿಯನ್ನೇ ಉಸಿರಾಗಿಸಿಕೊಂಡಿರುವ ಹಳ್ಳಿಗರಿಗೆ ಸಂಗೀತ ಮತ್ತು ನಾಟಕಗಳು ಮನರಂಜನೆಯ ಸಾಧನಗಳು. ನಾಟಕ, ಸಂಗೀತಗಳ ಮೂಲಕ ಬದುಕಿನ ಕಷ್ಟಗಳಿಗೆ ಪರಿಹಾರ ಕಂಡುಕೊಳ್ಳುತ್ತಿದ್ದರು. ದೂರದರ್ಶನ, ಮೊಬೈಲ್ಗಳ ಪ್ರವೇಶವಾದ ನಂತರ ಗ್ರಾಮೀಣ ಕಲೆಗಳಿಗೆ ದೊಡ್ಡ ಪೆಟ್ಟು ಬಿದ್ದಿದೆ. ತಂತ್ರಜ್ಞಾನದ ಬಳಕೆ ಅಗತ್ಯವಾದರೂ, ಅದು ನಮ್ಮ ಸಾಂಸ್ಕೃತಿಕ ಬದುಕನ್ನು ಕಿತ್ತುಕೊಳ್ಳಬಾರದು’ ಎಂದು ಸ್ವಾಮೀಜಿ ಎಚ್ಚರಿಸಿದರು.
ಯುವ ಮುಖಂಡ ರಾಮದಾಸಪ್ಪ ಅಧ್ಯಕ್ಷತೆ ವಹಿಸಿದ್ದರು. ಕಲಾವಿದ ಒ.ಮೂರ್ತಿ ನಾಟಕದ ತರಬೇತಿ ನೀಡಿದರು.
ಕಾರ್ಯಕ್ರಮದಲ್ಲಿ ರಾಮಚಂದ್ರಪ್ಪ, ಕಲಾವಿದರಾದ ಬಸವರಾಜಪ್ಪ, ಗಂಗಾನಾಯ್ಕ, ಶಿವನಾಯ್ಕ, ಪ್ರಕಾಶ್, ಗಣೇಶ್ ನಾಯ್ಕ, ರಾಜಣ್ಣ, ಕರಿಯಪ್ಪ, ಜಗದೀಶಶೆಟ್ಟರು, ಪರಮಶಿವಪ್ಪ, ಚಂಬಣ್ಣ, ಗಾಂಧಾಳಪ್ಪ ಹಾಜರಿದ್ದರು.
ಸಮಾರಂಭದಲ್ಲಿ ವೆಂಕಟೇಶ್ ತಂಡದವರು ರಂಗಗೀತೆ, ಶಶಿಕುಮಾರ್ ತಂಡದವರು ಭಜನೆ, ಜಯಣ್ಣ ತಂಡದವರು ಭಕ್ತಿಗೀತೆ ಹಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.