
ಹಿರಿಯೂರು: ಶಾಲೆಗಳ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸುವಲ್ಲಿ ಶಿಕ್ಷಣ ಸುಧಾರಣಾ ಸಮಿತಿ ಪಾತ್ರ ಬಹುಮುಖ್ಯ ಎಂದು ತಾಲ್ಲೂಕು ಶಿಕ್ಷಣ ಸುಧಾರಣಾ ಸಮಿತಿ ಅಧ್ಯಕ್ಷ ಎ.ಎಂ. ಅಮೃತೇಶ್ವರಸ್ವಾಮಿ ಹೇಳಿದರು.
ನಗರದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಸೋಮವಾರ ನಡೆದ ಸಮಿತಿಯ ಪ್ರಥಮ ಸಭೆಯಲ್ಲಿ ಮಾತನಾಡಿದರು.
ಸಮಿತಿ ಸದಸ್ಯರು ತಾಲ್ಲೂಕಿನ ಶಾಲೆಗಳಿಗೆ ನಿಯಮಿತವಾಗಿ ಭೇಟಿ ನೀಡಿ, ಶೌಚಾಲಯ ವ್ಯವಸ್ಥೆ, ಕುಡಿಯುವ ನೀರು, ಕಾಂಪೌಂಡ್, ಪಾಠೋಪಕರಣ, ಕ್ರೀಡಾಸಾಮಗ್ರಿ ಸೇರಿ ಅಗತ್ಯ ಸೌಲಭ್ಯ ಕಲ್ಪಿಸಲು ಪ್ರಯತ್ನಿಸುತ್ತಾರೆ. ಇದರಿಂದ ಶಿಕ್ಷಣದ ಗುಣಮಟ್ಟ ಹೆಚ್ಚಲಿದೆ. ಶಿಕ್ಷಣದಲ್ಲಿ ಕ್ರಿಯಾತ್ಮಕ ಬದಲಾವಣೆ ತರಬೇಕೆಂಬ ಉದ್ದೇಶದಿಂದ ಸರ್ಕಾರ ಈ ಸಮಿತಿ ಜಾರಿಗೊಳಿಸಿದ್ದು, ಸರ್ಕಾರದ ಆಶಯದಂತೆ ನಡೆದುಕೊಳ್ಳುತ್ತೇವೆ ಎಂದು ಭರವಸೆ ನೀಡಿದರು.
ತಾಲ್ಲೂಕಿನ 151 ಶಾಲೆಗಳ ಜಾಗಗಳಿಗೆ ಖಾತೆ ಇಲ್ಲ. ಶಾಲೆಯ ಜಾಗವನ್ನು ಸರ್ಕಾರದ ಹೆಸರಿಗೆ ಮಾಡಿಕೊಡುವ ಕೆಲಸವನ್ನು ತಹಶೀಲ್ದಾರರು, ತಾಲ್ಲೂಕು ಪಂಚಾಯಿತಿ ಇಒ ಮಾಡಿಕೊಡಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎಂ. ತಿಪ್ಪೇಸ್ವಾಮಿ ಮನವಿ ಮಾಡಿದರು.
ವಿದ್ಯಾರ್ಥಿನಿಲಯಗಳಲ್ಲಿ ವಿದ್ಯಾರ್ಥಿಗಳು ಓದುತ್ತಿರುವ ಬಗ್ಗೆ ನಿಲಯ ಪಾಲಕರು ನಿಗಾ ಇಡಬೇಕು. ಉತ್ತಮ ಊಟ–ತಿಂಡಿಯ ಜೊತೆ ಪರಿಶ್ರಮದ ಓದು ಅಗತ್ಯ ಎಂದು ಸಮಿತಿ ಸದಸ್ಯೆ ಗೀತಾ ನಾಗಕುಮಾರ್ ಸೂಚಿಸಿದರು.
ಮತ್ತೊಬ್ಬ ಸದಸ್ಯ ಎಂ. ಅಂಜನಪ್ಪ, ನಾಗೇಂದ್ರನಾಯ್ಕ, ಎನ್. ತಿಮ್ಮಶೆಟ್ರು, ನಯೀಮುದ್ದೀನ್, ತಹಶೀಲ್ದಾರ್ ಎಂ. ಸಿದ್ದೇಶ್, ತಾಲ್ಲೂಕು ಪಂಚಾಯಿತಿ ಇಒ ಪ್ರಮೋದ್, ಪೌರಾಯುಕ್ತ ವಾಸೀಂ, ಹಿರಿಯ ಉಪನ್ಯಾಸಕ ಎಸ್.ಸಿ. ಪ್ರಸಾದ್ ಮಾತನಾಡಿದರು. ಕ್ಷೇತ್ರ ಸಮನ್ವಯಾಧಿಕಾರಿ ಆರ್.ಟಿ.ಎಸ್. ಶ್ರೀನಿವಾಸ್, ಎಸ್ಡಿಎಂಸಿ ಅಧ್ಯಕ್ಷ ಹನುಮಂತಪ್ಪ ನಾಯ್ಕರ್, ಪ್ರಾಂಶುಪಾಲ ತಿಪ್ಪೇಸ್ವಾಮಿ, ಮುಖ್ಯ ಶಿಕ್ಷಕ ಈರಣ್ಣ, ಉಪ ಪ್ರಾಂಶುಪಾಲ ಮಂಜಾನಾಯ್ಕ, ಎಂಜಿನಿಯರ್ ಅವಿನಾಶ್, ಇಸಿಒ ಸಿ. ಶಿವಾನಂದ್, ನಾಗರಾಜ್, ರಂಗಸ್ವಾಮಿ, ಪುಟ್ಟಸ್ವಾಮಿ, ಜಾಫರ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.