ಚಿಕ್ಕಜಾಜೂರು: ರಸ್ತೆ ಬದಿಯಲ್ಲಿ ಹಾಕಿದ್ದ ಅಡಿಕೆ ಸಿಪ್ಪೆಗೆ ಯಾರೋ ದಾರಿ ಹೋಕರು ಬೆಂಕಿ ಹಚ್ಚಿದ ಪರಿಣಾಮ ಹತ್ತಾರು ಬಿದಿರು ಪೆಳೆಗಳು ಸುಟ್ಟು ಭಸ್ಮವಾದ ಘಟನೆ ಇಲ್ಲಿ ಸೋಮವಾರ ರಾತ್ರಿ ಸಂಭವಿಸಿದೆ.
ಸಮೀಪದ ಕಡೂರು ಅಡವಿಯ ರಸ್ತೆ ಬದಿಯಲ್ಲಿ ರೈತರು ಅಡಿಕೆ ಸಿಪ್ಪೆಯನ್ನು ಹಾಕಿದ್ದು, ಒಣಗಿದ ಸಿಪ್ಪೆಗೆ ಯಾರೋ ಬೆಂಕಿ ಹಚ್ಚಿದ್ದಾರೆ. ಬೆಂಕಿ ಜ್ವಾಲೆ ಅಡಿಕೆ ಸಿಪ್ಪೆ ಜತೆ, ಬಿದಿರು ಪೆಳೆಗೂ ಆವರಿಸಿದೆ. ಇದರಿಂದಾಗಿ ವಿದ್ಯುತ್ ಕಂಬದ ವಿದ್ಯುತ್ ತಂತಿಗೂ ಬೆಂಕಿ ಜ್ವಾಲೆ ಆವರಿಸಿದೆ. ವಿಷಯ ತಿಳಿದ ಬೆಸ್ಕಾಂ ಲೈನ್ ಮನ್ಗಳು ತಕ್ಷಣ ವಿದ್ಯುತ್ ಸಂಪರ್ಕವನ್ನು ಸ್ಥಗಿತಗೊಳಿಸಿದರು.
ಕಡೂರು, ಅಂತಾಪುರ, ನಂದಿಹಳ್ಳಿ ಹಾಗೂ ದಾಸರಹಳ್ಳಿ ಗ್ರಾಮಗಳ ರೈತರು ಜಾನುವಾರುಗಳನ್ನು ಅಡವಿಯಲ್ಲಿ ಮೇಯಿಸಿಕೊಂಡು ಬರಲು ಹೋಗುತ್ತಿದ್ದರು. ಈಗ ಅಡವಿಯಲ್ಲಿನ ಒಣ ಹುಲ್ಲು ಬೆಂಕಿಗೆ ಆಹುತಿಯಾಗಿರುವುದರಿಂದ ಮೇವಿಗೆ ತೊಂದರೆಯಾಗಿದೆ. ಅಡಿಕೆ ಬೆಳೆಗಾರರು ಸುಲಿದ ಅಡಿಕೆ ಸಿಪ್ಪೆಯನ್ನು ಯಾವುದಾದರೂ ಗುಂಡಿಗೆ ಹಾಕಿದರೆ ಇಂತಹ ಅನಾಹುತ ತಪ್ಪುತ್ತದೆ ಎಂದು ರೈತರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.