ಗಣೇಶ ಮೂರ್ತಿ ವಿಸರ್ಜನೆ ಅಂಗವಾಗಿ ಚಿತ್ರದುರ್ಗದ ಬಿ.ಡಿ ರಸ್ತೆಯಲ್ಲಿ ಶನಿವಾರ ಬೃಹತ್ ಶೋಭಾಯಾತ್ರೆ ನಡೆಯಿತು
ಪ್ರಜಾವಾಣಿ ಚಿತ್ರ: ಚಂದ್ರಪ್ಪ ವಿ
ಚಿತ್ರದುರ್ಗ: ವಿಶ್ವ ಹಿಂದೂ ಪರಿಷತ್, ಬಜರಂಗದಳ ಸ್ಥಾಪಿಸಿದ್ದ ಮಹಾ ಗಣಪತಿ ವಿಸರ್ಜನೆ ಅಂಗವಾಗಿ ಶನಿವಾರ ಇಲ್ಲಿ ನಡೆದ ಶೋಭಾಯಾತ್ರೆಗೆ ಲಕ್ಷಾಂತರ ಭಕ್ತರು ಸಾಕ್ಷಿಯಾದರು.
18ನೇ ವರ್ಷದ ಉತ್ಸವದ ಅಂಗವಾಗಿ ಬಿ.ಡಿ ರಸ್ತೆಯ ಜೈನಧಾಮದಲ್ಲಿ 18 ಅಡಿ ಎತ್ತರದ ಗಣೇಶ ಮೂರ್ತಿ ಪ್ರತಿಷ್ಠಾಪಿಸಲಾಗಿತ್ತು. ಭದ್ರತೆಯ ದೃಷ್ಟಿಯಿಂದ ಪೊಲೀಸರು ಡಿ.ಜೆ ಬಳಕೆಗೆ ಅವಕಾಶ ನಿರಾಕರಿಸಿದ್ದರು. ನಗರಕ್ಕೆ ಬರುತ್ತಿದ್ದ ಡಿ.ಜೆ ಘಟಕಗಳನ್ನು ಪ್ರವೇಶ ದ್ವಾರದಲ್ಲೇ ತಡೆದಿದ್ದರು.
ಆದರೆ ವಿಎಚ್ಪಿ, ಬಜರಂಗದಳದ ಕಾರ್ಯಕರ್ತರು ಶುಕ್ರವಾರ ಮಧ್ಯರಾತ್ರಿವರೆಗೂ ರಸ್ತೆತಡೆ ನಡೆಸಿ ಡಿ.ಜೆಗೆ ಅನುಮತಿ ನೀಡಲು ಪಟ್ಟು ಹಿಡಿದಿದ್ದರು. ಅಂತಿಮವಾಗಿ 6 ಡಿ.ಜೆಗಳಿಗೆ ಅನುಮತಿ ಸಿಕ್ಕಿತು. ರಾಜ್ಯ, ಹೊರರಾಜ್ಯಗಳಿಂದ ಬಂದಿದ್ದ ಭಕ್ತರು ಡಿ.ಜೆ ಸಂಗೀತಕ್ಕೆ ನರ್ತಿಸಿದರು.
ವಿವಿಧ ಮಠಗಳ ಪೀಠಾಧಿಪತಿಗಳು ಸಂಘಟನೆ, ರಾಜಕೀಯ ಪಕ್ಷಗಳ ಮುಖಂಡರು ಮಧ್ಯಾಹ್ನ 1.30ಕ್ಕೆ ಶೋಭಾಯಾತ್ರೆಗೆ ಚಾಲನೆ ನೀಡಿದರು. ವಿಶ್ವ ಹಿಂದೂ ಪರಿಷತ್ ಸಹ ಕಾರ್ಯದರ್ಶಿ ಶರಣ್ ಪಂಪ್ವೆಲ್ ಅವರ ಜಿಲ್ಲಾ ಪ್ರವೇಶಕ್ಕೆ ಜಿಲ್ಲಾಧಿಕಾರಿ ನಿರ್ಬಂಧ ಹೇರಿದ್ದರು. ಆದರೆ ಅವರು ಹೈಕೋರ್ಟ್ ಅನುಮತಿ ಪಡೆದು ಶೋಭಾಯಾತ್ರೆಯಲ್ಲಿ ಪಾಲ್ಗೊಂಡಿದ್ದರು.
ಪ್ರಮುಖ ರಸ್ತೆಗಳಲ್ಲಿ ಸಾಗಿದ ಶೋಭಾಯಾತ್ರೆ ಮಧ್ಯರಾತ್ರಿ ಚಂದ್ರವಳ್ಳಿ ತಲುಪಿತು. ಅಲ್ಲಿಯ ಬಾವಿಯಲ್ಲಿ ಮೂರ್ತಿ ವಿಸರ್ಜನೆ ಮಾಡಲಾಯಿತು. ಭದ್ರತೆಗೆ 3,000ಕ್ಕೂ ಹೆಚ್ಚು ಸಿಬ್ಬಂದಿ ನಿಯೋಜಿಸಲಾಗಿತ್ತು.
ಗಣಪತಿ ಪೂಜೆಗೆ ಬಳಸಿದ್ದ ವಿವಿಧ ವಸ್ತುಗಳ ಹರಾಜು ಪ್ರಕ್ರಿಯೆ ನಡೆಯಿತು.
ಮೂರ್ತಿಗೆ ಹೊದಿಸಿದ್ದ ಕೇಸರಿ ಧ್ವಜವನ್ನು (ಮುಕ್ತಿ ಬಾವುಟ) ಬಿಜೆಪಿ ಮುಖಂಡ ಹನುಮಂತೇಗೌಡ ₹ 6 ಲಕ್ಷಕ್ಕೆಪಡೆದರು. ತಿರುಪತಿ ಮಾದರಿ ಪ್ರತಿಮೆಯನ್ನು ಉದ್ಯಮಿ ವಜ್ರ ಮಹೇಶ್ ₹ 5.25 ಲಕ್ಷಕ್ಕೆ, ಗಣೇಶ ಚಿತ್ರಪಟವನ್ನು ಮಂಜಣ್ಣ ₹ 1.5 ಲಕ್ಷ, ಫಲಾಹಾರವನ್ನು ಕಿರಣ್ ಕುಮಾರ್ ₹ 1 ಲಕ್ಷಕ್ಕೆ ಪಡೆದರು.
ಗಣೇಶ ಮೂರ್ತಿ ವಿಸರ್ಜನೆ ಅಂಗವಾಗಿ ಚಿತ್ರದುರ್ಗದ ಬಿ.ಡಿ ರಸ್ತೆಯಲ್ಲಿ ಶನಿವಾರ ನಡೆದ ಬೃಹತ್ ಶೋಭಾಯಾತ್ರೆಯಲ್ಲಿ ಪಾಲ್ಗೊಂಡಿದ್ದ ಜನಸ್ತೋಮ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.