ADVERTISEMENT

ಎಸಿಬಿ ಬಲೆಗೆ ಗ್ರಾ.ಪಂ ನೌಕರ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2021, 4:30 IST
Last Updated 22 ಅಕ್ಟೋಬರ್ 2021, 4:30 IST
ನರೇಂದ್ರಬಾಬು
ನರೇಂದ್ರಬಾಬು   

ಚಿತ್ರದುರ್ಗ: ಕೆರೆ ಹೂಳೆತ್ತಿದ ಕಾಮಗಾರಿಯ ಬಿಲ್ ಪಾವತಿಗೆ ₹ 5 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಆರೋಪದ ಮೇರೆಗೆ ಹಿರಿಯೂರು ತಾಲ್ಲೂಕಿನ ವಿ.ವಿ.ಪುರ ಗ್ರಾಮ ಪಂಚಾಯಿತಿ ಡಾಟಾ ಎಂಟ್ರಿ ಆಪರೇಟರ್‌ ಆರ್‌. ನರೇಂದ್ರಬಾಬು ಎಂಬುವರನ್ನು ಭ್ರಷ್ಟಾಚಾರ ನಿಗ್ರಹ ಪೊಲೀಸರು (ಎಸಿಬಿ) ಬಂಧಿಸಿದ್ದಾರೆ.

ತಳವಾರಹಟ್ಟಿ ಗ್ರಾಮದ ಗುಲ್ಲ ಓಂಕಾರಪ್ಪ ಎಂಬುವರು ಭರಮಗಿರಿ ಕೆರೆಯ ಹೂಳು ಎತ್ತುವ ಕಾಮಗಾರಿಯ ಬಿಲ್‌ ಪಾವತಿಗೆ ಗ್ರಾಮ ಪಂಚಾಯಿತಿ ಸಂಪರ್ಕಿಸಿದ್ದರು. ₹ 1 ಲಕ್ಷ ಅನುದಾನ ಬಿಡುಗಡೆಗೆ ₹ 5 ಸಾವಿರ ಲಂಚ ನೀಡುವಂತೆ ನರೇಂದ್ರಬಾಬು ಬೇಡಿಕೆ ಇಟ್ಟಿದ್ದರು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹಾಗೂ ಎಂಜಿನಿಯರ್‌ಗೂ ಲಂಚ ನೀಡುವಂತೆ ತಾಕೀತು ಮಾಡಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಗುರುವಾರ ಬೆಳಿಗ್ಗೆ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿದ್ದ ಓಂಕಾರಪ್ಪ ಅವರಿಗೆ ಲಂಚ ನೀಡುವಂತೆ ನರೇಂದ್ರಬಾಬು ಪೀಡಿಸಿದ್ದಾರೆ. ಇದರಿಂದ ಬೇಸರಗೊಂಡ ಓಂಕಾರಪ್ಪ ಎಸಿಬಿ ಪೊಲೀಸರಿಗೆ ದೂರು ನೀಡಿದ್ದಾರೆ. ಲಂಚ ನೀಡುವಾಗ ದಾಳಿ ನಡೆಸಿದ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಡಿವೈಎಸ್‌ಪಿ ಬಸವರಾಜ ಆರ್‌. ಮಗದುಮ್‌, ಪೊಲೀಸ್‌ ಇನ್‌ಸ್ಪೆಕ್ಟರ್‌ಗಳಾದ ಹಸನ್‌ಸಾಬ್‌, ಪ್ರವೀಣಕುಮಾರ್‌ ನೇತೃತ್ವದಲ್ಲಿ ಈ ದಾಳಿ ನಡೆದಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.