ಹೊಸದುರ್ಗ: ಕಳೆದ ಬಾರಿ ಮುಂಗಾರು ತಡವಾಗಿದ್ದರಿಂದ ತಾಲ್ಲೂಕಿನಾದ್ಯಂತ ಬೆರಳೆಣಿಕೆಯಷ್ಟು ರೈತರು ಮಾತ್ರ ಹೆಸರು ಬಿತ್ತನೆ ಮಾಡಿದ್ದರು. ಈ ಬಾರಿ ಸಮಯಕ್ಕೆ ಸರಿಯಾಗಿ ಹದ ಮಳೆಯಾದ ಪರಿಣಾಮ, ಹೆಸರು ಬಿತ್ತನೆ ಚೆನ್ನಾಗಿ ಆಗಿದೆ. ಹದ ಮಳೆಯಿಂದಾಗಿ ಈಗಾಗಲೇ ಬಿತ್ತನೆಯಾಗಿರುವ ಹೆಸರು ಹುಲುಸಾಗಿ ಬೆಳೆಯುತ್ತಿದ್ದು, ರೈತರು ಉತ್ತಮ ಇಳುವರಿಯ ನಿರೀಕ್ಷೆಯಲ್ಲಿದ್ದಾರೆ.
ತಾಲ್ಲೂಕಿನ ಮತ್ತೋಡು ಹಾಗೂ ಶ್ರೀರಾಂಪುರ ಹೋಬಳಿಗಳ ರೈತರು ಪ್ರಧಾನವಾಗಿ ಹೆಸರು ಬೆಳೆಯುತ್ತಾರೆ. ಈಗಾಗಲೇ ಅಲ್ಪಸ್ವಲ್ಪ ಪ್ರಮಾಣದ ಮಳೆ ಸುರಿದಿರುವ ಪರಿಣಾಮ ಬಿತ್ತನೆಯಾಗಿದೆ. ಬಿತ್ತನೆಗೆ ಇನ್ನೂ ಒಂದು ವಾರ ಅವಕಾಶವಿದ್ದು, ಇನ್ನಷ್ಟು ಪ್ರದೇಶದಲ್ಲಿ ಬಿತ್ತನೆಯಾಗುವ ಸಾಧ್ಯತೆ ಇದೆ.
'ಹದ ಮಳೆಯಿಂದಾಗಿ ತಾಲ್ಲೂಕಿನಾದ್ಯಂತ ಈಗಾಗಲೇ 385 ಹೆಕ್ಟೇರ್ ಸಾವೆ, 87 ಹೆಕ್ಟೇರ್ ಅಲಸಂದೆ, 20 ಹೆಕ್ಟೇರ್ ಶೇಂಗಾ, 140 ಹೆಕ್ಟೇರ್ ಹತ್ತಿ ಹಾಗೂ 225 ಹೆಕ್ಟೇರ್ ಹೆಸರು ಬಿತ್ತನೆಯಾಗಿದೆ. ಹೆಸರು ಹೂವು ಬಿಡುವ ಹಂತ ಹಾಗೂ ಕಾಯಿ ಕಟ್ಟುವ ಹಂತದಲ್ಲಿ ಮಳೆಯಾದರೆ ಅಧಿಕ ಇಳುವರಿ ಪಡೆಯಬಹುದು. ಹೆಸರು 90 ದಿನದ ಬೆಳೆಯಾಗಿದ್ದು, ಕಡಿಮೆ ಖರ್ಚಿನಲ್ಲಿ ಉತ್ತಮ ಆದಾಯ ಪಡೆಯಬಹುದು. ಹೆಸರು ಕಟಾವಿನ ನಂತರ ಸಾವೆ ಬಿತ್ತನೆಗೆ ರೈತರು ಭೂಮಿ ಸಿದ್ಧತೆ ಮಾಡಿಕೊಳ್ಳಬೇಕು’ ಎಂದು ಸಹಾಯಕ ಕೃಷಿ ನಿರ್ದೇಶಕ ಸಿ.ಎಸ್. ಈಶ ಸಲಹೆ ನೀಡಿದರು.
‘ಕಳೆದ ಮೂರು ವರ್ಷಗಳಿಂದ ಹೆಸರು ಬೆಳೆಯುತ್ತಿದ್ದೇನೆ. ಉತ್ತಮ ಆದಾಯವೂ ದೊರೆಯುತ್ತಿದೆ. ಈ ಬಾರಿ ಸಕಾಲದಲ್ಲಿ ಮಳೆಯಾಗಿರುವುದರಿಂದ ಬಿತ್ತನೆಯೂ ಸಕಾಲದಲ್ಲಿ ಆಗಿದೆ. ಮತ್ತೋಡಿನ ರೈತ ಸಂಪರ್ಕ ಕೇಂದ್ರದಲ್ಲಿ ರಿಯಾಯಿತಿ ದರದಲ್ಲಿ ಬೀಜ, ಗೊಬ್ಬರ ಹಾಗೂ ಔಷಧ ಖರೀದಿಸಿ, ಒಂದು ಎಕರೆ ಭೂಮಿಯಲ್ಲಿ ಹೆಸರು ಬಿತ್ತನೆ ಮಾಡಲಾಗಿದೆ, ಸಸಿಗಳು ಉತ್ಕೃಷ್ಟವಾಗಿ ಬೆಳೆದಿವೆ. ಸಮಯಕ್ಕೆ ಸರಿಯಾಗಿ ಇನ್ನೂ ಉತ್ತಮ ಮಳೆಯಾಗಬೇಕು. ಕೃಷಿ ಇಲಾಖೆಯ ಸಹಕಾರವೂ ಸಹ ಉತ್ತಮವಾಗಿದೆ. ಕಳೆದ ಬಾರಿ ಎಕರೆಗೆ 4 ಕ್ವಿಂಟಲ್ ಹೆಸರುಕಾಳು ದೊರೆತಿತ್ತು. ಈ ಬಾರಿ ಅಧಿಕ ಇಳುವರಿ ದೊರೆಯಬಹುದು’ ಎಂದು ಕಿಟ್ಟದಾಳ್ ಗ್ರಾಮದ ರೈತ ರಂಗನಾಥ್ ಆರ್ ಸಂತಸ ವ್ಯಕ್ತಪಡಿಸಿದರು.
‘ಹೆಸರು ಬೆಳೆಯಿಂದ ಉತ್ತಮ ಆದಾಯ ಗಳಿಸಬಹುದು. ಈ ಬೆಳೆಗೆ ತಳಗೊಬ್ಬರವಾಗಿ ಡಿಎಪಿ ಬಳಸಲಾಗುತ್ತದೆ. ಮೇಲುಗೊಬ್ಬರ ಬಳಸುವುದರಿಂದ ಹಳದಿ ರೋಗ ಬರುತ್ತದೆ. ಇದನ್ನೇ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುವಂತೆ ಸರ್ಕಾರವೂ ರೈತರಿಗೆ ಪ್ರೋತ್ಸಾಹ ನೀಡಬೇಕು. ಈ ಬಗ್ಗೆ ಅರಿವು ಮೂಡಿಸಬೇಕು ಎಂಬುದು ರೈತರ ಮನವಿಯಾಗುದೆ.
ಹೆಸರು ಕಾಳಿನ ಕನಿಷ್ಠ ಬೆಂಬಲಬೆಲೆಯನ್ನು ಹೆಚ್ಚಿಸಿದರೆ ರೈತರಿಗೆ ಅನುಕೂಲವಾಗುತ್ತದೆ-ಪಾಂಡುರಂಗಪ್ಪ ರೈತರು ಸೋಮೇನಹಳ್ಳಿ ಗ್ರಾಮ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.