ಮೊಳಕಾಲ್ಮುರು: ತಾಲ್ಲೂಕಿನಾದ್ಯಂತ ಮುಂಗಾರು ಹಂಗಾಮಿನಲ್ಲಿ ಖುಷ್ಕಿ ಭೂಮಿಯಲ್ಲಿ ಬಿತ್ತನೆ ಮಾಡಿದ್ದ ಶೇಂಗಾ ಕಟಾವು ಕಾರ್ಯ ಕಳೆದ 10-15 ದಿನಗಳಿಂದ ನಡೆಯುತ್ತಿದೆ.
ದಶಕಗಳಿಂದ ತಾಲ್ಲೂಕಿನ ಸಾಂಪ್ರದಾಯಕ ವಾಣಿಜ್ಯ ಬೆಳೆಯಾಗಿ ಶೇಂಗಾ ಗುರುತಿಸಿಕೊಂಡಿದೆ. 5 ವರ್ಷದಿಂದ ಇಳುವರಿ ರೈತರಿಗೆ ಸ್ವಲ್ಪವೂ ದಕ್ಕಿರಲಿಲ್ಲ. ಈ ಬಾರಿ ಅಲ್ಪ ಪ್ರಮಾಣದಲ್ಲಿ ಇಳುವರಿ ಬಂದಿದ್ದರೂ ದರ ಕುಸಿತದಿಂದಾಗಿ ಲಾಭ ಇಲ್ಲದಂತಾಗಿದೆ.
ತಾಲ್ಲೂಕಿನಲ್ಲಿ 32,000 ಹೆಕ್ಟೇರ್ ಬಿತ್ತನೆ ಪ್ರದೇಶವಿದ್ದು, ಇದರಲ್ಲಿ ಪ್ರತಿವರ್ಷ 28,000 ಹೆಕ್ಟೇರ್ ನಲ್ಲಿ ಶೇಂಗಾ ಬಿತ್ತನೆ ಮಾಡಲಾಗುತ್ತಿತ್ತು. ಆರಂಭದಲ್ಲಿ ಮಳೆ ಕೊರತೆ ಹಾಗೂ ಸತತ ನಷ್ಟಕ್ಕೆ ರೈತರು ಹೆದರಿರುವ ಪರಿಣಾಮ ಈ ವರ್ಷ 22,000 ಹೆಕ್ಟೇರ್ನಲ್ಲಿ ಶೇಂಗಾ ಬಿತ್ತನೆ ಮಾಡಲಾಗಿದೆ. ಬಿತ್ತನೆ ಮಾಡಿದ ನಂತರ ಮಳೆ ಪೂರ್ಣ ಕೈಕೊಟ್ಟಿದ್ದ ಹಿನ್ನೆಲೆಯಲ್ಲಿ ಗಿಡದ ಬೆಳವಣಿಗೆ ಇಲ್ಲದಾಗಿತ್ತು. 2 ಹಂತದಲ್ಲಿ ಬಿತ್ತನೆ ಮಾಡಲಾಗಿತ್ತು.
ನಂತರ ಮಳೆ ಉತ್ತಮವಾಗಿ ಬಂದಿದ್ದರಿಂದ ಗಿಡಗಳು ಬೆಳೆಣಿಗೆಯಾಗಿದೆ. ಕಾಯಿ ಬಲಿಯುವ ಸಮಯದಲ್ಲಿ ಹೆಚ್ಚು ಮಳೆಯಾದ ಕಾರಣ ಕಾಯಿ ಬಲಿಯಲು ಸಾಧ್ಯವಾಗಲಿಲ್ಲ. ಜತೆಗೆ ಬುಸುಡು ರೋಗವೂ ಕಾಣಿಸಿಕೊಂಡಿದ್ದರಿಂದ ಸಾಕಷ್ಟು ಗಿಡಗಳು ಕಾಯಿ ನೆಲದ ಪಾಲಾಗಿದೆ. ಕಾಯಿ ಕಪ್ಪಾಗಿ ಹಾನಿಗೀಡಾಗಿರುವುದರಿಂದ ದಾಸ್ತಾನು ಮಾಡಲು ಬರುತ್ತಿಲ್ಲ. ಕಡಿಮೆ ದರಕ್ಕೆ ವ್ಯಾಪಾರಿಗಳು ಕೇಳುತ್ತಿದ್ದಾರೆ ಎಂದು ರೈತರಾದ ನಾಗಪ್ಪ, ತಿಪ್ಪೇಸ್ವಾಮಿ
ಅಳಲು ತೋಡಿಕೊಂಡರು.
ಬಳ್ಳಿ ಕೀಳಲು ಹಸಿಯಿಲ್ಲದ ಕಾರಣ ಟ್ರಾಕ್ಟರ್ ನಲ್ಲಿ ಉಳುಮೆ ಮಾಡಿಸಿ ಬಳ್ಳಿ ತೆಗೆದುಕೊಳ್ಳಬೇಕಿದೆ. ಇದರ ವೆಚ್ಚದ ಜತೆಗೆ ಬುಡುಸು ರೋಗಕ್ಕೆ ತುತ್ತಾದ ಗಿಡ, ಕಾಯಿಗಳು ವ್ಯರ್ಥವಾಗುತ್ತಿದೆ. ಕಾಯಿ ಬಿಡಿಸಲು ಪ್ರತಿ ಡಬ್ಬಕ್ಕೆ ₹ 30ರಿಂದ ₹ 40 ನೀಡಬೇಕಿದೆ. ಈ ಮೂಲಕ ಪ್ರತಿ ಕ್ವಿಂಟಲ್ ಕಾಯಿ ಬಿಡಿಸಲು ₹ 700ರಿಂದ ₹ 800 ಕೊಡಬೇಕಿದೆ. ಇಷ್ಟು ವೆಚ್ಚ ಮಾಡಿ ಮಾರುಕಟ್ಟೆಗೆ ಹೋದರೆ ದರ ಕುಸಿತವಾಗಿದೆ. ₹ 110ರಿಂದ ₹ 120
ಪ್ರತಿ ಕೆಜಿಯಂತೆ ಕೊಂಡು ಬಿತ್ತನೆ ಮಾಡಿದ್ದೇವೆ. ಮಾಡಿರುವ ಖರ್ಚು ಸಹ ವಾಪಸ್ ಬರುತ್ತಿಲ್ಲ ಎಂದು ದೂರಿದರು.
ದರ ಕುಸಿತ: ಈ ಬಾರಿ ನೆರೆಯ ರಾಜ್ಯಗಳಾದ ಗುಜರಾತ್, ಮಧ್ಯಪ್ರದೇಶ, ಉತ್ತರ ಪ್ರದೇಶ, ರಾಜಸ್ತಾನ್ನಲ್ಲಿ ವ್ಯಾಪಕ ಶೇಂಗಾ ಇಳುವರಿ ಬಂದಿದೆ. ಅಂದಾಜು 45 ಲಕ್ಷ ಟನ್ ಗುರಿಗೆ ಈ ವರ್ಷ 55 ಲಕ್ಷ ಟನ್ ಎಂದು ಅಂದಾಜಿಸಲಾಗಿದೆ. ನಮ್ಮ ಕಾಯಿ ಸ್ವಲ್ಪ ಹಾನಿಯಾಗಿವಿರುವ ಕಾರಣ ರಪ್ತು ಗುಣಮಟ್ಟವಿಲ್ಲ, ಬೇಡಿಕೆ ಇಲ್ಲದಿರುವುದು ದರ ಕುಸಿತಕ್ಕೆ ಒತ್ತು ನೀಡಿದೆ ಎಂದು ಸಗಟು ಶೇಂಗಾ ವ್ಯಾಪಾರಿಗಳು ಮಾಹಿತಿ ನೀಡಿದರು.
ಪ್ರತಿ 100 ಗ್ರಾಂ ಶೇಂಗಾ ಕಾಯಿಗೆ ಶೇ 67-73 ಗ್ರಾಂ ನಷ್ಟು ಬೀಜ ಸಿಗುತ್ತಿದೆ. ಗ್ರಾಂ ಕಂಡೀಷನ್ ಉತ್ತಮವಾಗಿದ್ದು ಬಿತ್ತನೆಬೀಜಕ್ಕೆ ಬರುತ್ತದೆ. ಪ್ರತಿ ಎಕರೆಗೆ 15-20 ಚೀಲ ಇಳುವರಿ ಮೂಲಕ 6-7 ಕ್ವಿಂಟಲ್ ಕಾಯಿ ದೊರೆಯುತ್ತಿದೆ. ಬಿತ್ತನೆಬೀಜ ದರ, ನಂತರದ ಖರ್ಚು ಲೆಕ್ಕ ಹಾಕಿದಲ್ಲಿ ರೈತರಿಗೆ ಯಾವುದೇ ಲಾಭವಿಲ್ಲ ಎಂದು ಹೇಳಿದರು.
ಈ ಸಲ ವಿಮೆ ಸೌಲಭ್ಯ ಸಿಗುವುದು ಅನುಮಾನ, ಸರ್ಕಾರದ ನೆರವು ದೊರೆಯದೇ ಶೇಂಗಾ ಬೆಳೆಗಾರರು ಸಂಕಷ್ಟದಲ್ಲಿದ್ದಾರೆ. ಇದನ್ನು ಸರ್ಕಾರಕ್ಕೆ ಮನವರಿಕೆ ಮಾಡಿ ಜನಪ್ರತಿನಿಧಿಗಳು ಹರಿಹಾರ ಕೊಡಿಸಲು ಮುಂದಾಗಬೇಕು ಎಂದು ರೈತ ಸಂಘದ ರಾಜ್ಯ ಘಟಕದ ಉಪಾಧ್ಯಕ್ಷ ಬೇಡರೆಡ್ಡಿಹಳ್ಳಿ ಬಸವರೆಡ್ಡಿ ಮನವಿ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.