ADVERTISEMENT

ದರ್ಶನಕ್ಕೆ ಮುಕ್ತವಾದ ಗುರುತಿಪ್ಪೇರುದ್ರಸ್ವಾಮಿ ದೇವಾಲಯ

73 ದಿನಗಳ ಬಳಿಕ ತೆರೆದ ಬಾಗಿಲು: ಮುಂಜಾಗ್ರತಾ ಕ್ರಮಗಳ ಪಾಲನೆಗೆ ಆದ್ಯತೆ

​ಪ್ರಜಾವಾಣಿ ವಾರ್ತೆ
Published 4 ಜುಲೈ 2021, 14:42 IST
Last Updated 4 ಜುಲೈ 2021, 14:42 IST
ನಾಯಕನಹಟ್ಟಿ ಪಟ್ಟಣದ ಗುರುತಿಪ್ಪೇರುದ್ರಸ್ವಾಮಿ ಒಳಮಠದಲ್ಲಿ ಭಾನುವಾರ ದೇವಾಲಯದ ಸಿಬ್ಬಂದಿ ದೇವಾಲಯವನ್ನು ಸ್ವಚ್ಛಗೊಳಿಸುತ್ತಿರುವುದು.
ನಾಯಕನಹಟ್ಟಿ ಪಟ್ಟಣದ ಗುರುತಿಪ್ಪೇರುದ್ರಸ್ವಾಮಿ ಒಳಮಠದಲ್ಲಿ ಭಾನುವಾರ ದೇವಾಲಯದ ಸಿಬ್ಬಂದಿ ದೇವಾಲಯವನ್ನು ಸ್ವಚ್ಛಗೊಳಿಸುತ್ತಿರುವುದು.   

ನಾಯಕನಹಟ್ಟಿ: ರಾಜ್ಯ ಸರ್ಕಾರ ಲಾಕ್‌ಡೌನ್‌ ತೆರವುಗೊಳಿಸಿದ್ದು,ಇಲ್ಲಿನ ಐತಿಹಾಸಿಕ ಗುರುತಿಪ್ಪೇರುದ್ರಸ್ವಾಮಿ ದೇವಾಲಯವು ಸೋಮವಾರ ಬಾಗಿಲು ತೆರೆಯಲಿದೆ.

ದೇವರ ದರ್ಶನಕ್ಕೆ ಬರುವ ಭಕ್ತರಿಗೆ ಕೋವಿಡ್ ಸೋಂಕು ಹರಡಂತೆ ಹಲವು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಕೋವಿಡ್ 2ನೇ ಅಲೆಯಿಂದಾಗಿ ಏಪ್ರಿಲ್ 24ರಂದು ಲಾಕ್‌ಡೌನ್ ಘೋಷಣೆಯಾಗಿದ್ದರಿಂದ ದೇವಾಲಯದ ಬಾಗಿಲು ಮುಚ್ಚಲಾಗಿತ್ತು. ದೇವಾಲಯದ ಬಾಗಿಲು ತೆರೆಯಲು ಸರ್ಕಾರ ಅವಕಾಶ ನೀಡಿದ್ದರಿಂದ ಪಟ್ಟಣದ ಒಳಮಠ, ಹೊರಮಠ, ಏಕಾಂತೇಶ್ವರ ದೇವಾಲಯ, ಈಶ್ವರ ದೇವಾಲಯ ಸೇರಿದಂತೆ ಪಟ್ಟಣದಲ್ಲಿರುವ ಎಲ್ಲ ದೇವಾಲಯಗಳನ್ನು ಭಾನುವಾರ ತೆರೆದು ಸ್ವಚ್ಛತಾ ಕಾರ್ಯವನ್ನು ಕೈಗೊಳ್ಳಲಾಯಿತು. ದೇವಾಲಯಗಳ ಪ್ರತಿಯೊಂದು ಸ್ಥಳಕ್ಕೂ ಸ್ಯಾನಿಟೈಸ್ ಸಿಂಪಡಣೆ ಮಾಡಲಾಯಿತು.

ADVERTISEMENT

ಸೋಮವಾರ ಮುಂಜಾನೆ ದೇವಾಲಯದ ಬಾಗಿಲು ತೆರೆದು ದೇವರ ಪಟ್ಟದಗೂಳಿಗೆ ಪೂಜೆ ಸಲ್ಲಿಸುವ ಮೂಲಕ ಹೊರಮಠ ಮತ್ತು ಒಳಮಠಗಳಲ್ಲಿ ಭಕ್ತರಿಗೆ ದರ್ಶನಕ್ಕೆ ಅನುವು ಮಾಡಿಕೊಡಲಾಗುವುದು. ದೇವಾಲಯಕ್ಕೆ ಬರುವವರು ಮತ್ತು ದೇವಾಲಯದ ಸಿಬ್ಬಂದಿ ಸೇರಿ ಪ್ರತಿಯೊಬ್ಬರೂ ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ.

‘ದೇವಾಲಯಕ್ಕೆ ಬರುವ ಭಕ್ತರಿಗೆ ಸ್ಯಾನಿಟೈಸರ್ ವ್ಯವಸ್ಥೆ ಮಾಡಲಾಗಿದ್ದು, ಭಕ್ತರು ದೇವರ ದರ್ಶನಕ್ಕೆ ಸರತಿ ಸಾಲಿನಲ್ಲಿ ಬರಲು 4 ಅಡಿಗಳ ಅಂತರಕ್ಕೆ ಒಂದರಂತೆ ವೃತ್ತಗಳನ್ನು ಗುರುತು ಮಾಡಲಾಗಿದೆ. ಕೊರೊನಾ ಮಾರ್ಗಸೂಚಿಗಳನ್ನು ಭಕ್ತರು ಕಡ್ಡಾಯವಾಗಿ ಪಾಲಿಸುವಂತೆ ಮಾಡಲು ಅಗತ್ಯ ಸಿದ್ಧತೆ ಕೈಗೊಳ್ಳಲಾಗಿದೆ’ ಎಂದು ದೇವಾಲಯದ ಸಿಬ್ಬಂದಿ ಎಸ್.ಸತೀಶ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.