ಹಿರಿಯೂರು: ಸಮಾವೇಶದಲ್ಲಿ ಘೋಷಣೆ ಕೂಗುವ ವಿಚಾರದಲ್ಲಿ ಎಚ್.ಡಿ.ಕುಮಾರಸ್ವಾಮಿ –ಡಿ.ಕೆ.ಶಿವಕುಮಾರ್ ಬೆಂಬಲಿಗರ ನಡುವೆ ದೊಡ್ಡ ಪೈಪೋಟಿ ಉಂಟಾಯಿತು. ಪಟ್ಟನಾಯಕನಹಳ್ಳಿಯ ನಂಜಾವಧೂತ ಸ್ವಾಮೀಜಿ ಈ ಬೆಂಬಲಿಗರನ್ನು ತರಾಟೆಗೆ ತೆಗೆದುಕೊಂಡರು.
ಮಧ್ಯಾಹ್ನ 12.30ಕ್ಕೆ ಡಿ.ಕೆ.ಶಿವಕುಮಾರ್ ವೇದಿಕೆಗೆ ಆಗಮಿಸಿದ್ದರು. ಮಧ್ಯಾಹ್ನ 1.45 ರ ವೇಳೆಗೆ ಮೆರವಣಿಗೆ ಮುಗಿಸಿಕೊಂಡು ನಿರ್ಮಲಾನಂದನಾಥ ಸ್ವಾಮೀಜಿ, ನಂಜಾವಧೂತಸ್ವಾಮೀಜಿ ಧಾವಿಸಿದರು. ಎಚ್.ಡಿ. ಕುಮಾರಸ್ವಾಮಿ ಬರುವವರೆಗೆ ಉದ್ಘಾಟನೆ ಮುಂದೂಡಿದ ಸಂಘಟಕರು ನಾಡಗೀತೆ, ರೈತಗೀತೆ, ಪ್ರಾಸ್ತಾವಿಕ ಭಾಷಣಕ್ಕೆ ವೇದಿಕೆ ಮೀಸಲಿಟ್ಟರು. ಇದನ್ನು ಲೆಕ್ಕಿಸದೆ ತಮ್ಮ ಬಳಿ ಬರುತ್ತಿದ್ದ ಕಾರ್ಯಕರ್ತರು, ಅಭಿಮಾನಿಗಳೊಂದಿಗೆ ಡಿ.ಕೆ. ಶಿವಕುಮಾರ್ ಸೆಲ್ಫಿ ತೆಗೆಸಿಕೊಳ್ಳುತ್ತಿದ್ದರು.
ಮಧ್ಯಾಹ್ನ 2.20 ರ ಸುಮಾರಿಗೆ ಕುಮಾರಸ್ವಾಮಿ ಆಗಮಿಸುತ್ತಿದ್ದಂತೆಯೇ ಅಭಿಮಾನಿಗಳು ಅವರ ಪರವಾಗಿ ಘೋಷಣೆ ಕೂಗಲಾರಂಭಿಸಿದರು. ಇದನ್ನು ಕಂಡ ಶಿವಕುಮಾರ್ ಅಭಿಮಾನಿಗಳು ಘೋಷಣೆ ಕೂಗತೊಡಗಿದರು. ಇದು ಕೈಕೈ ಮಿಲಾಯಿಸುವ ಹಂತ ತಲುಪಿತ್ತು. ಕೊನೆಗೆ ಕೆಲವು ಮುಖಂಡರು ಶಿವಕುಮಾರ್ ಅಭಿಮಾನಿಗಳನ್ನು ಸಮಾಧಾನ ಪಡಿಸಿದರು.
ಇದಕ್ಕೆ ನಂಜಾವಧೂತ ಸ್ವಾಮೀಜಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಕುಮಾರಸ್ವಾಮಿ ಅವರು ಅಭಿಮಾನಿಗಳನ್ನು ಸಮಾಧಾನಪಡಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.