
ಹಿರಿಯೂರು: ತಾಲ್ಲೂಕಿನ ಐಮಂಗಲ ಗ್ರಾಮದ ಸಮೀಪ ನಾಗೇಶ್ವರಸ್ವಾಮಿಗಳ ಹೊಲದಲ್ಲಿ ನೂತನ ಶಿಲಾಯುಗ ಕಾಲದ ಕಲ್ಲಿನ ಕೊಡಲಿ, ಕಲ್ಲಿನ ಚೆಂಡು ಹಾಗೂ ನೊಳಂಬರ ಕಾಲದ ಭಗ್ನ ಚಿಕ್ಕ ಶಿವಲಿಂಗ ಪತ್ತೆಯಾಗಿವೆ.
ಉಪನ್ಯಾಸಕ ಮಹೇಶ್ ಕುಂಚಿಗನಾಳ್ ನೇತೃತ್ವದ ತಂಡ ಕ್ಷೇತ್ರ ಕಾರ್ಯ ನಡೆಸಿದಾಗ ಅಪರೂಪದ ಪ್ರಾಗೈತಿಹಾಸಿಕ ಅವಶೇಷಗಳು ಪತ್ತೆಯಾಗಿವೆ. ನೊಣಬಿಪಟ್ಟಣ ಎಂದು ಕರೆಯಲಾಗುವ ಐಮಂಗಲ ಸಮೀಪದ ಹೊಲದಲ್ಲಿ ಕಂಡು ಬಂದಿವೆ.
3000– 5000 ವರ್ಷಗಳ ಹಿಂದೆ ಮಾನವರು ಉಜ್ಜಿ ನಯಗೊಳಿಸಿದ ಕಲ್ಲಿನಕೊಡಲಿ ನೂತನ ಶಿಲಾಯುಗಕ್ಕೆ ಸೇರಿದ್ದಾಗಿದೆ. ಕೈಯಲ್ಲಿ ಹಿಡಿಯಲು ಅನುಕೂಲಕರವಾಗಿದೆ. ಇದೇ ಅವಧಿಗೆ ಸೇರಿದ ಬೆಣಚುಕಲ್ಲಿನ ಗುಂಡು ದೊರೆತಿದೆ. ಮನುಷ್ಯ ತನ್ನ ಅಲೆಮಾರಿ ಬದುಕನ್ನು ಕೈಬಿಟ್ಟು ಒಂದುಕಡೆ ಸ್ಥಿರವಾಗಿ ನೆಲೆನಿಂತು ಉಳುಮೆ ಮತ್ತಿತರೆ ಕೆಲಸಗಳಿಗಾಗಿ ಒರಟು ಆಯುಧಗಳ ಬದಲು ಹೆಚ್ಚು ಉಜ್ಜಿ ನುಣುಪುಗೊಳಿಸಿದ ಕಲ್ಲಿನ ಆಯುಧಗಳನ್ನು ಬಳಸಿರಬಹುದು. ಕಲ್ಲಿನ ಗುಂಡು ಆಟಿಕೆಯ ಸಾಧನವಾಗಿರಬಹುದು. ಅಲ್ಲಿ ಅಪಾರ ಪ್ರಮಾಣದ ಬೂದಿಮಿಶ್ರಿತ ಮಣ್ಣು ಇದ್ದು ಮತ್ತಷ್ಟು ಅಧ್ಯಯನ ಕೈಗೊಳ್ಳುವ ಅವಶ್ಯಕತೆ ಇದೆ ಎಂದು ಮಹೇಶ್ ಕುಂಚಿಗನಾಳ್ ತಿಳಿಸಿದರು.
ಇದೇ ಜಾಗದಲ್ಲಿ ನೊಳಂಬರ ಕಾಲಕ್ಕೆ (ಕ್ರಿ.ಶ. 8 ರಿಂದ 11 ನೇ ಶತಮಾನ) ಸೇರಿರಬಹುದಾದ ಭಗ್ನಗೊಂಡಿರುವ ಕಪ್ಪು ಗ್ರಾನೈಟ್ ಶಿವಲಿಂಗ ದೊರೆತಿದೆ. ನೊಳಂಬವಾಡಿ ಐಮಂಗಲ ಗ್ರಾಮದವರೆಗೆ ಹಬ್ಬಿತ್ತು ಎಂಬುದನ್ನು ಇಲ್ಲಿ ಸಿಕ್ಕಿರುವ ಶಾಸನಗಳು, ಶಿಲಾಕೃತಿಗಳು ದೃಢಪಡಿಸಿವೆ. ನೊಳಂಬರ ಅಸ್ತಿತ್ವದ ಬಗ್ಗೆ ಈ ಬೇಚರಾಕ್ (ಒಂದು ಕಾಲದಲ್ಲಿ ಅಸ್ತಿತ್ವದಲ್ಲಿದ್ದು, ನಂತರ ನಾಶವಾಗಿರುವ ಊರು) ಗ್ರಾಮವು ಮಹತ್ವದ ದಾಖಲೆಗಳನ್ನು ಒದಗಿಸುತ್ತದೆ. ವಿದ್ವಾಂಸರು ಈ ಬಗ್ಗೆ ಗಮನ ಹರಿಸಬೇಕು ಎಂದು ತಿಳಿಸಿದರು. ಕ್ಷೇತ್ರ ಕಾರ್ಯದಲ್ಲಿ ಸಹಕಾರ ನೀಡಿದ ಪ್ರಿಯಾಂಕ, ಮನೋಜ್, ಪ್ರತ್ಯೂಷ್ ಹಾಗೂ ಪ್ರಬುದ್ಧ ಅವರನ್ನು ಸ್ಮರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.