
ಹಿರಿಯೂರು: ತಾಲ್ಲೂಕಿನ ಮಸ್ಕಲ್ ಟಿಬಿ ಗೊಲ್ಲರಹಟ್ಟಿ ಗ್ರಾಮದ ತೋಪಿನಲ್ಲಿರುವ ಈರಪ್ಪ ಸ್ವಾಮಿ, ಗೊಲ್ಲಾಳಮ್ಮದೇವಿ, ರಂಗನಾಥಸ್ವಾಮಿ, ವೀರಾಂಜನೇಯಸ್ವಾಮಿ ಹಾಗೂ ಅಮಾವಾಸ್ಯೆ ಚಿತ್ರಲಿಂಗೇಶ್ವರ ಸ್ವಾಮಿಯ ಕಾಳುಹಬ್ಬ ಮಂಗಳವಾರ ವಿಜೃಂಭಣೆಯಿಂದ ನಡೆಯಿತು.
ಫೆ. 21 ರಿಂದ ಆರಂಭವಾದ ಜಾತ್ರಾ ಮಹೋತ್ಸವ ಗಂಗಾಪೂಜೆ, ಮಂಗಳವಾರ ವಿಶೇಷ ಅಲಂಕಾರ, ಕಾಳು ತಿದ್ದುವ ಕಾರ್ಯಕ್ರಮಗಳ ಜೊತೆಗೆ ಅನ್ನಸಂತರ್ಪಣೆಯೊಂದಿಗೆ ಸಂಪನ್ನಗೊಂಡಿತು.
ಗ್ರಾಮೀಣ ಬದುಕಿನ ಚಿತ್ರಣವನ್ನು ಅನಾವರಣಗೊಳಿಸುವ ಗೊಲ್ಲ ಸಮಾಜದವರು ಅಕ್ಷರ ಜ್ಞಾನವಿಲ್ಲದಿದ್ದರೂ ಕೃಷಿಯೊಂದಿಗೆ ಕುರಿ, ಮೇಕೆ ಸಾಕುವ ಜೊತೆಗೆ ಜಾನಪದ ಕಲೆಯನ್ನು ಶ್ರೀಮಂತಗೊಳಿಸಿದ್ದಾರೆ ಎಂದು ಉತ್ಸವದ ಪ್ರಯುಕ್ತ ನಡೆದ ಸಭೆಯಲ್ಲಿ ಸಮಾಜ ಸೇವಕ ಜಿ. ಜಯರಾಮಯ್ಯ ಹೇಳಿದರು.
ಜೆಡಿಎಸ್ ಪಕ್ಷ ಕಾಡುಗೊಲ್ಲರನ್ನು ಗುರುತಿಸಿ ಜವನಗೊಂಡನಹಳ್ಳಿಯ ಕೆ. ಮಂಜುನಾಥ್ ಅವರನ್ನು ಜಿಲ್ಲಾ ಘಟಕದ ಅಧ್ಯಕ್ಷರನ್ನಾಗಿ ನೇಮಿಸಿದೆ. ಕಾಡುಗೊಲ್ಲರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡ ಹಾಗೂ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಪ್ರಯತ್ನ ನಡೆಸಿದ್ದಾರೆ ಎಂದು ಜೆಡಿಎಸ್ ಮುಖಂಡ ಎಂ. ರವೀಂದ್ರಪ್ಪ ತಿಳಿಸಿದರು.
ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ, ಅವರನ್ನೇ ಆಸ್ತಿಯನ್ನಾಗಿ ಮಾಡಬೇಕು. ಬಡವರಿಗೆ ಹಾಗೂ ಸಮುದಾಯದವರಿಗೆ ಏನೇ ಸಮಸ್ಯೆಗಳಿರಲಿ ಸ್ಪಂದಿಸುತ್ತೇನೆ ಎಂದು ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಕೆ. ಅಭಿನಂದನ್ ಭರವಸೆ ನೀಡಿದರು.
ಜೆಡಿಎಸ್ ಪಕ್ಷದ ನೂತನ ಜಿಲ್ಲಾ ಘಟಕದ ಅಧ್ಯಕ್ಷ ಕೆ. ಮಂಜುನಾಥ್ ಮಾತನಾಡಿದರು. ಕಾಡುಗೊಲ್ಲ ಸಂಘದ ರಾಜ್ಯ ಘಟಕದ ಅಧ್ಯಕ್ಷ ರಾಜಣ್ಣ, ಪೂಜಾರಿಗಳಾದ ಚಿತ್ತಪ್ಪ, ಗುಂಡಪ್ಪ, ದಿನೇಶ್, ಸಣ್ಣೀರಪ್ಪ, ಮುಖಂಡರಾದ ಎನ್. ಬಂಗಾರಪ್ಪ, ಡಿ. ರಾಮಣ್ಣ, ನಿಜಲಿಂಗಪ್ಪ, ಎಂ. ಬಸವರಾಜ್, ಹೇಮಣ್ಣ, ರಾಜು, ಕುಂಟಜ್ಜರ ತಿಪ್ಪೇಸ್ವಾಮಿ, ಕರಡಜ್ಜರ ಚಂದ್ರಪ್ಪ, ಗುಂಡಪ್ಪ, ಚಂದ್ರಪ್ಪ, ಲಕ್ಷ್ಮೀಕಾಂತ್ , ಶಿವಕುಮಾರ್, ಸುರೇಶ್, ಈರಣ್ಣ, ರಾಜಪ್ಪ, ಮಂಜುನಾಥ್, ನಿಜಲಿಂಗಪ್ಪ, ಡಿ. ಪಾಂಡುರಂಗಪ್ಪ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.